Homeಮುಖಪುಟಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

ಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

- Advertisement -
- Advertisement -

ಕಾರವಾರದ ವಾಣಿಜ್ಯ ಬಂದರು ವಿಸ್ತರಿಸುವ “ಸಂಕಷ್ಟ ಮಾಲಾ” ಯೋಜನೆ ತಮ್ಮ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆಂಬ ಆತಂಕದಲ್ಲಿ ಸ್ಥಳೀಯರೆಲ್ಲಾ ಒಂದಾಗಿ ಬೀದಿಗಿಳಿದಿದ್ದಾರೆ! ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೆಸರಿನ ಚಂದದ ಕಡಲ ತೀರ, ಬಡ ಬೆಸ್ತರ ತುತ್ತಿನಾಧಾರವಾಗಿದ್ದ ಕಸಬು ಮತ್ತು ಕಾರವಾರದ ನೆಮ್ಮದಿ-ಸ್ವಾಸ್ಥ್ಯ ಎಲ್ಲವನ್ನು ಒಂದೇ ಬಾರಿಗೆ ಆಪೋಷನ ಪಡೆಯುವ ಈ ಯೋಜನೆ ಬೇಡವೇ ಬೇಡವೆಂದು ಆಗ್ರಹಿಸಿ ಮೊನ್ನೆ (16-01-2020) ಹತ್ತಾರು ಸಾವಿರ ಮಂದಿ ಸೇರಿ ಕಾರವಾರ ಬಂದ್ ಮಾಡಿ ಆಳುವ ಖೂಳರಿಗೆ “ಸಣ್ಣ” ಎಚ್ಚರಿಕೆ ರವಾನಿಸಿದ್ದಾರೆ!! ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಶೋ ಮ್ಯಾಮ್ ಶಾಸಕಿ ರೂಪಾಲಿ ನಾಯ್ಕ್ ಒಣ ಪ್ರತಿಷ್ಠೆಯ ಸದ್ರಿ ಕಾಮಗಾರಿ ಕಾರವಾರ ತಾಲ್ಲೂಕಿನ ಅಷ್ಟೂ ಮೀನುಗಾರರನ್ನು ಜೀವನ್ಮರಣದ ಜಂಜಾಟವಾಗಿ ಕಾಡುತ್ತಿದೆ…

ಬರೋಬ್ಬರಿ 125 ಕೋಟಿ ರೂಪಾಯಿಗಳ ಈ ಪ್ರಾಜೆಕ್ಟ್ ಮೋದಿ ಮಾಮ ತನ್ನ ಪರಮಾಪ್ತ ಬಂದರು ದಂಧೆದಾರ ಆದಾನಿಗಾಗಿಯೇ ಕೈಗೆತ್ತಿಕೊಂಡಿರುವ “ಅಭಿವೃದ್ಧಿ” ಕಾಮಗಾರಿ. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಿಸಿದ್ದು ಅಂದಿನ ಕಾಂಗ್ರೆಸ್ ಎಮ್ಮೆಲ್ಲೆ ಸತೀಶ್ ಸೈಲ್, ಪಕ್ಕಾ ಪಾಯ್ದೆಕೋರ ಉದ್ಯಮಿಯಾದ ಈ ಅದಿರು ಕಳ್ಳಸಾಗಾಣಿಕೆದಾರ ಅಂದು ಅದ್ಯಾವ ಕನಸು ಕಂಡಿದ್ದನೋ ಏನೋ? ಬಂದರು ಕಾಮಗಾರಿಯ ಅಲೆ ತಡೆಗೋಡೆಗೆ ಬೇಕಾದ ದೊಡ್ಡಗಾತ್ರದ ಶಿಲೆಕಲ್ಲು ಪೂರೈಕೆಯ ರಹಸ್ಯ ಬೇನಾಮಿ ಒಪ್ಪಂದ ಸೈಲ್ ಮಾಡಿಕೊಂಡಿದ್ದ. ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್‍ಸ್ ಪ್ರೈ.ಲಿ. ಕೆಲಸ ಶುರುಹಚ್ಚಿಕೊಂಡ ಎರಡೇ ದಿನದಲ್ಲಿ ನೂರಾರು ಲೋಡ್ ಕಲ್ಲು ಬೀಚ್‍ಗೆ ಬಂದು ಬಿದ್ದಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರಂಭಿಸಿದ ಕಾಮಗಾರಿ ಹೇಗಿತ್ತೆಂದರೆ, ಮೀನುಗಾರರು ಶಾಶ್ವತವಾಗಿ ಹೊಟ್ಟೆಪಾಡಿನ ಸಮುದ್ರ ಕೃಷಿ ಮಾಡಲಾಗದಂತಿತ್ತು!!

ಕಾರವಾರದಲ್ಲಿ ಮೀನುಗಾರ ಸಂಕುಲ ರಾಜಕೀಯವಾಗಿ ನಿರ್ಣಾಯಕ. ಎಡವಟ್ಟು ಕಾಮಗಾರಿ ಕಂಡದ್ದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಸ್ತರೆಲ್ಲಾ ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದರು. ಪೇಚಿಗೆ ಸಿಲುಕಿದ ಮಾಜಿ ಶಾಸಕ ಸೈಲ್ ತಕ್ಷಣ ಬಣ್ಣ ಬದಲಿಸಿಬಿಟ್ಟ. ಊರವರ ಹಿತೈಷಿ ಎಂಬಂತೆ ಪೋಸು ಕೊಡುತ್ತಾ ಬಂದರು ಕಾಮಗಾರಿ ವಿರುದ್ಧ ಹೇಳಿಕೆ ಒಗಾಯಿಸತೊಡಗಿದೆ. ಪ್ರತಿಭಟನಾಕಾರರ ಮಧ್ಯೆ ಸಾವಕಾಶವಾಗಿ ತೂರಿಕೊಂಡು ಬೀಚನ್ನು ಬೆಳಗ್ಗೆಯ ವಾಕಿಂಗ್, ಸಂಜೆಯ ವಿಹಾರ, ನೆಮ್ಮದಿಗಾಗಿ ಬಳಸುತ್ತಿದ್ದ ಜನರೂ ಮೀನುಗಾರರ ಜತೆ ಸೇರಿಕೊಂಡು ಪ್ರತಿಭಟನೆ ಬಿರುಸುಗೊಳಿಸಿದರು. ಬಂದರು ವಿರೋಧಿ ಹೋರಾಟಗಾರರ ಆಕ್ರೋಶ ತಮ್ಮ ನೋವಿಗೆ ಸ್ಪಂದಿಸದ ಸಂಸದ ಅನಂತ್ಮಾಣಿ ಮತ್ತು ಶಾಸಕಿ ರೂಪಾಲಿ ಮೇಲೆ ಕೇಂದ್ರೀಕೃತವಾಗಿತ್ತು. ಈ ಇಬ್ಬರು ನಾಲಾಯಕ್ ಜನಪ್ರತಿನಿಧಿಗಳ ಫೋಟೋಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರಹಾಕಿ, ಸಗಣಿ ಮೆತ್ತಿ ಸಹಜ ಸಿಟ್ಟು ವ್ಯಕ್ತಡಿಸಿದ್ದರು.

ಮೀನುಗಾರರ ಹುಡುಗ-ಹೊನ್ನಾವರದ ಪರೇಶ್ ಮೇಸ್ತನ ಸಂಶಯಾಸ್ಪದ ಸಾವನ್ನು ಸಾಬರಿಂದಾದ ಕೊಲೆ ಎಂದು ಬಿಂಬಿಸಿದ ಬಿಜೆಪಿಯ ಕೋಮು ರಾಜಕಾರಣದ ಫಲಾನುಭವಿಯಾದ ರೂಪಾಲಿಗೆ ಮೀನುಗಾರರ ತಿರುಗಿಬಿದ್ದದ್ದು ನಿದ್ದೆಗೆಡಿಸಿಬಿಟ್ಟಿತ್ತು. ಕಾರವಾರ ಬಂದ್ ದಿನ ರೂಪಾಲಿಗೆ ಕ್ಷೇತ್ರದಲ್ಲಿರುವ ಧೈರ್ಯವೇ ಇರಲಿಲ್ಲ. ಹಾಗಾಗಿ ಆಕೆ ರಾತ್ರೋರಾತ್ರಿ ಬೆಂಗಳೂರಿಗೆ ಓಡಿದ್ದಾರೆ. ಇತ್ತ ಜನರು ಪ್ರತಿಭಟನಾ ರ್ಯಾಲಿ ಹೊರಟಿದ್ದರೆ, ಅತ್ತ ಬೆಂಗಳೂರಲ್ಲಿ ರೂಪಾಲಿ ಮೇಡಮ್ಮು ಮೀನುಗಾರರ ಮಂತ್ರಿ ಶ್ರೀನಿವಾಸ ಪೂಜಾರಿ ಜತೆ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಬಂದರ ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ, ಬೀಚ್ ಬಂದರಿಗೆ ಬಳಕೆಯಾಗುವುದಿಲ್ಲ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರಾದ ಸೈಲ್ ಮತ್ತ ಅಸ್ನೋಟಿಕರ್ ದಾರಿ ತಪ್ಪಿಸುತ್ತಿದ್ದಾರೆಂದು ಪೂಜಾರಿ-ರೂಪಾಲಿ ಒಂದೇ ಸ್ವರದಲ್ಲಿ ಯುಗಳ ಆಲಾಪ ಮಾಡಿದ್ದಾರೆ. ಸುಳ್ಳು ಹೇಳಿ ತಮ್ಮ ಜನದ್ರೋಹ ಮುಚ್ಚಿಡಲು ಹವಣಿಸಿದ್ದಾರೆ.

ವಾಸ್ತವವೆಂದರೆ, ಬಂದರು ವಿರೋಧಿಗಳು ಸೈಲ್-ಅಸ್ನೋಟಿಕರ್‍ನನ್ನೂ ನಂಬುತ್ತಿಲ್ಲ. ಈ ಇಬ್ಬರು ಸಮಯಸಾಧಕರನ್ನು ಹೊರಗಿಟ್ಟೇ ಜನರು ಕಟ್ಟಿದ ಅಖಂಡ ಹೋರಾಟವಿದು. ಸೈಲ್-ಅಸ್ನೋಟಿಕರ್ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆದರೆ ಜನರು ಮಾತ್ರ ಈ ಮಾಜಿದ್ವಯರಿಗೆ ಸಭೆಗಳಲ್ಲಿ ಭಾಷಣ ಮಾಡಲಿಕ್ಕೂ ಬಿಡುತ್ತಿಲ್ಲ. ಕಾರವಾರಕ್ಕೆ ಬಂದು ಜನರಿಗೆ ಮುಖ ತೋರಿಸುವ ನೈತಿಕ ಧೈರ್ಯವೂ ಇಲ್ಲದೆ ಚಡಪಡಿಸುತ್ತಿರುವ ಶಾಸಕಿಯಮ್ಮ ಒಂದೆಡೆಯಾದರೆ, ಮತ್ತೊಂದೆಡೆ ಹಲ್ಲೆಕೋರ ಮನಸ್ಥಿತಿಯ ಸಂಸದ ಅನಂತ್ಮಾಣಿ ಬಂದರು ವಿರೋಧಿಗಳನ್ನು ಆರಂಭಿದಲ್ಲೇ ಹೊಸಕಿ ಹಾಕಬೇಕು….. ನಂಗೆ ಮತ್ತೆ ಎಂಪಿ ಆಗೋ ಆಸೆಯಿಲ್ಲ….. ಬಂದರು ಕಟ್ಟಿಯೇ ತೀರುತ್ತೇನೆ….” ಎಂದೆಲ್ಲಾ ಅಭಿವೃದ್ಧಿ ಆಟಾಟೋಪ ಪ್ರದರ್ಶಿಸುತ್ತಿದ್ದಾನೆ.

ಮೀನುಗಾರರು ವಾರದಿಂದ ಮೀನುಗಾರಿಕೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹೂಡುತ್ತಲೇ ಇದ್ದಾರೆ. ಶಾಸಕಿ ರೂಪಾಲಿ, ಸಂಸದ ಮಾಣಿಯ ಮಳ್ಳು ಮಾತುಗಾರಿಕೆಗೆ ನಗುತ್ತಿದ್ದಾರೆ. ಹೋರಾಟಗಾರರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದ ಮಂತ್ರಿ, ಸಂಸದ, ಶಾಸಕಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ಜನರ ಮುಂದೆ ಹೇಳೋದೇ ಒಂದು ಮಾಡೋದು ಮಾತ್ರ ಮತ್ತೊಂದು. ಬಂದರು ಅಧಿಕಾರಿಗಳು ತಾತ್ಕಾಲಿಕ ಮೀನು ಮಾರುಕಟ್ಟೆ ಹಿಂದಿನಿಂದ ಕಾಮಗಾರಿ ಮಾಡಲಾಗುತ್ತದೆ ಎಂದಿದ್ದರು. ಆದರೆ ಕೆಲಸ ಆಗುತ್ತಿರುವುದು ಬೀಚ್‍ನ ದಕ್ಷಿಣಕ್ಕಿರುವ ಪ್ಯಾರಾಗೋಲಾದ ಕಡೆಯಿಂದ. ಉತ್ತರ ಬದಿಯನ್ನು ಹೊಟೇಲು, ಗಾರ್ಡನ್ ಎಂದೆಲ್ಲಾ ಹಂಚಲಾಗಿದೆ. ಹೀಗಾಗಿ ಉಳಿದಿರುವುದು ಬರೀ 1 ಕಿ.ಮೀ ಬೀಚಷ್ಟೇ. ಇದರಲ್ಲಿ ಅರ್ಧ ಅಡೆಗೋಡೆಗೆ ಬಳಿಸಿದರೆ ಬಡ ಬೆಸ್ತರಿಗೆ ಮೀನುಗಾರಿಕೆಗೆ ಅವಕಾಶವಿಲ್ಲ; ವಾಕಿಂಗ್, ವಿಹಾರ ಸಾಧ್ಯವೂ ಇಲ್ಲ.

ಬಂದರು ಕಾಮಕಾರಿ ಏಕಪಕ್ಷೀಯವಾಗಿ ದಾದಾಗಿರಿಯಿಂದ ಆಡಳಿತಗಾರರು ನಡೆಸಿದ್ದಾರೆ. ಬಂದರಿನಿಂದಾಗುವ ಅರ್ಥಿಕ, ಸಾಮಾಜಿಕ ಪರಿಸರ ಪರಿಣಾಮಗಳ ಅಧ್ಯಯನವೇ ನಡೆಸಲಾಗಿಲ್ಲ. ಸಾರ್ವಜನಿಕರಿಗೆ ಉದ್ದೇಶಿತ ಬಂದರಿನ ಮಾಹಿತಿ ನೀಡಲಾಗುತ್ತಿಲ್ಲ. ಮಹತ್ವದ ಸಂಗತಿಯೆಂದರೆ, ಈ ಯೋಜನೆಗೆ ಸಿಆರ್‍ಜೆಡ್ ಸಮಿತಿಯ ಅನುಮತಿಯೇ ಸಿಕ್ಕಿಲ್ಲ. ಮರುಪರಿಶೀಲನೆಗೆ ಸಮಿತಿ ಬಂದರು ಇಲಾಖೆಗೆ ಸೂಚಿಸಿತ್ತು. ಬಂದರು ವಿಸ್ತರಣೆ ಎಂದರೆ, ದೇಶ-ವಿದೇಶದ ಬೃಹತ್ ಸರಕು ಸಾಗಾಣಿಕಾ ಹಡಗುಗಳು ಬಂದು-ಹೋಗುವ ತಾಣ. ಇಂಥ ವಾಣಿಜ್ಯ ಬಂದರಿನ ಮಗ್ಗುಲಲ್ಲಿ ಮೀನುಗಾರಿಕರ ಜೆಟ್ಟಿ ಇರಲು ಸಾಧ್ಯವೇ ಇಲ್ಲ. ವಾಣಿಜ್ಯ ಬಂದರಿನ ಸುತ್ತ ಮಜಬೂತಾದ ಆವರಣ ಗೋಡೆ, ಅದರ ಮೇಲೆ ತಂತಿ ಮುಳ್ಳಿನ ಬೇಲಿ ಹಾಕಲಾಗುತ್ತದೆ. ಸಾರ್ವಜನಿಕರ ಚಲನವಲನ. ಮೀನುಗಾರಿಕೆ ಸುತ್ತಲಿನ ಪ್ರದೇಶದಲ್ಲಿ ನಿಶೇಧಿಸಲಾಗುತ್ತದೆ. ಕಾರವಾರದ ಬಂದರು ವಿಸ್ತರಣೆಯಾದರೆ, ಬೈತ್ಕೋಲ್ ಮೀನುಗಾರಿಕಾ ಬಂದರಿಗೆ ಗಂಡಾಂತರ ಖಂಡಿತಾ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಕಾರವಾರದ 43 ಕಿ.ಮೀ ಉದ್ದದ ಕಡಲತೀರದಲ್ಲಿ ನಿರ್ಧಿಷ್ಟ ಭಾಗಗಳಷ್ಟೇ ಮೀನುಗಾರಿಕೆ ಮತ್ತು ಮೀನುಗಾರಿಕ ವಾಸ್ತವ್ಯಕ್ಕೆ ಯೋಗ್ಯವಾದವುಗಳು. ಇದರಲ್ಲಿ 33 ಕಿ.ಮೀ ತೀರಪ್ರದೇಶ ನೌಕಾನೆಲೆಗೆ ಕೊಡುವಾಗ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಈಗಿರುವ ವಾಣಿಜ್ಯ ಬಂದರಿಗಾಗಿ 1.5 ಕಿ.ಮೀ ಕಳೆದುಕೊಳ್ಳಲಾಗಿದೆ. ಇನ್ನೊಂದು ಕಿ.ಮೀ ಕಬಳಿಸಲು ಹೊಸ ಯೋಜನೆ ಬಾಯ್ತೆರೆದು ನಿಂತಿದೆ. ಪ್ರವಾಸೋದ್ಯಮದ ನೆಪದಲ್ಲಿ ಮುನ್ಸಿಪಾಲಿಟಿ ಗಾರ್ಡನ್, ರಾಕ್-ಗಾರ್ಡನ್, ಸಾಲುಮರದ ತಿಮ್ಮಕ್ಕ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ತಿಳಮಾತಿ ಬೀಚ್, ಹೋಟೆಲ್, ರೆಸಾರ್ಟ್ ಲಾಬಿಗೆ ಹಂಚಿ ಮೀನುಗಾರರ ಆಶ್ರಯ-ಕಸಬು ತಪ್ಪಿಸಲಾಗಿದೆ. ಉಳಿದಿರುವ 3.5 ಕಿ.ಮೀ ತೀರ ಪ್ರದೇಶವನ್ನು 14,500 ಮೀನುಗಾರರ ಕುಟುಂಬಗಳು ಹಂಚಿಕೊಳ್ಳಬೇಕಿದೆ. ಅಲಿಗದ್ದಾ ತೀರದಲ್ಲಿ ದೋಣಿಗಳಿಡಲಿಕ್ಕೆ ಜಾಗವಿಲ್ಲ. ಭಾರತೀಯ ಕೋಸ್ಟ್ ಗಾರ್ಡ್, ಇಂಡಿಯನ್ ಆಯಿಲ್ ಕಂಪನಿಗಳು ಕಾರವಾರ ತೀರಕ್ಕೆ ಬರುವ ಯೋಜನೆಗಳ ಸರದಿಯಲ್ಲಿವೆ. ಬೆಸ್ತರ ಪಾಲಿಗೆ ಆಪದ್ಬಾಂಧವನಂತಿದ್ದ ಕಾರವಾರ ತೀರ ಪ್ರದೇಶವನ್ನೂ ವಾಣಿಜ್ಯ ಬಂದರು ವಿಸ್ತರಣೆಗೆ ಬಲಿಗೊಟ್ಟರೆ ಸ್ಥಳೀಯ ಮೀನುಗಾರರ ಪಾಡೇನು?

ಇದೆಲ್ಲ ಶಾಸಕಿ ರೂಪಾಲಿಯಮ್ಮ, ಅನಂತ್ಮಾಣಿಯ ಮತಾಂಧ ತಲೆಬುರುಡೆಗೆ ಅರ್ಥವಾಗುತ್ತಲ್ಲ. ಅಗತ್ಯವಿರುವ ಯಾವ ಸರ್ಕಾರಿ ಏಜೆನ್ಸಿಗಳ ಅನುಮತಿಯೂ ಇಲ್ಲದೆ ಅವಸರದಲ್ಲಿ ಶುರುವಾಗಿರುವ ಬಂದರು ಯೋಜನೆಯಿಂದ ಕಾರವಾರಿಗರಿಗೆ ಯಾವ ಲಾಭವೂ ಇಲ್ಲ. ಬಿಜೆಪಿಯ ಅಭಿವೃದ್ಧಿ ಪಂಡಿತರು ಉದ್ಯೋಗಾವಕಾಶವಿದೆ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಎಷ್ಟು ಉದ್ಯೋಗ? ಯಾವ ಉದ್ಯೋಗ? ಇದಕ್ಕೆಲ್ಲ ಉತ್ತರವಿಲ್ಲ. ಅಬ್ಬಬ್ಬಾ ಎಂದರೆ ಅಮಾಯಕರನ್ನು ಶೋಷಿಸುವ ಕೂಲಿ ಕೆಲಸ ಸಿಗಬಹುದು. ಬೃಹತ್ ಬಂದರಿನಲ್ಲಿ ಮಂಗಳೂರು-ಮುಂಬೈ ಬಂದರಿನಲ್ಲಾಗುವಂಥ ಭೂಗತ ಬಾನ್ಗಡಿ ಆಗಬಹುದು. ಸಣ್ಣ ಬಂದರಿರುವಾಗಲೇ ಅಂದಿನ ಶಾಸಕ ವಸಂತ ಅಸ್ನೋಟಿಕರ್ ಮತ್ತು ಭೂಗತ ದೊರೆ ದಿಲೀಪ್ ನಾಯ್ಕ್ ಆಮದನಿಗಾಗಿ ಹೊಡೆದಾಡಿ ಹತ್ಯೆಯಾಗಿದ್ದು ನೆನಪಿದೆಯಾ?!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...