ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಸುಳ್ಳು ಆಪಾದನೆಯ ಹೇಳಿಕೆ ನೀಡಿದ್ದಾರೆಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲು ರವಿ ಅವರ ದೂರಿನ ಮೇರೆಗೆ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲು ರವಿ ಅವರು ತಮ್ಮ ದೂರಿನಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ನಮ್ಮ ನಾಯಕರ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ (ವೈಎಸ್ಆರ್) ಅವರ ಸಾವಿಗೆ ಸೋನಿಯಾ ಗಾಂಧಿ ಸಂಬಂಧ ಕಲ್ಪಿಸಿ ನಾರಾಯಣ ಸ್ವಾಮಿ ಕೆಲವು ಕಾಮೆಂಟ್ಗಳನ್ನು ಮಾಡಿದ್ದರು.
ಮಲ್ಲು ರವಿ ದೂರಿನ ನಂತರ ನಾರಾಯಣ ಸ್ವಾಮಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದರು. ವೈಎಸ್ಆರ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಗೆ ಮಾತ್ರವಲ್ಲದೆ ಇಡೀ ಆಂಧ್ರಪ್ರದೇಶದ ಜನತೆಗೆ ಅನುಮಾನವಿದೆ. ವೈಎಸ್ಆರ್ ಸಾವಿನ ಹಿಂದೆ ಟಿಡಿಪಿ ಅಧ್ಯಕ್ಷರು ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಸೋನಿಯಾ ಗಾಂಧಿ ಅವರು ಇದ್ದಾರೆ ಎಂದು ಅವರು ಹೇಳಿಕೆ ನೀಡಿದ್ದರು.
ನಾರಾಯಣ ಸ್ವಾಮಿ ಅವರ ಹೇಳಿಕೆಯ ವೀಡಿಯೊ ತುಣುಕನ್ನು ವಿಶ್ಲೇಷಿಸಿದ ನಂತರ ಪೊಲೀಸರು ಜನವರಿ 12 ರಂದು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ತಂದೆ ವೈಎಸ್ ರಾಜಶೇಖರ್ ರೆಡ್ಡಿ ಅವರು ಸೆಪ್ಟೆಂಬರ್ 2, 2009ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು. ಅವರು ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಚಿತ್ತೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೆರಳುತ್ತಿದ್ದ ವೈಎಸ್ಆರ್ ಅವರಿದ್ದ ಹೆಲಿಕ್ಯಾಪ್ಟರ್ ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ದಟ್ಟ ಅರಣ್ಯದಲ್ಲಿ ಕಣ್ಮರೆಯಾಗಿತ್ತು. ಸಿಎಂ ಹೆಲಿಕ್ಯಾಪ್ಟರ್ ಕಣ್ಮರೆಯಾಗುತ್ತಿದ್ದಂತೆಯೇ ಹುಡುಕಾಟ ನಡೆಸಲಾಗಿತ್ತು. ಬಳಿಕ ರುದ್ರಕೋಡೋರು ಎಂಬಲ್ಲಿ ಹೆಲಿಕ್ಯಾಪ್ಟರ್ ಪತ್ತೆಯಾಗಿತ್ತು. ಹೆಲಿಕಾಪ್ಟರ್ ದುರಂತದಲ್ಲಿ ವೈಎಸ್ ರಾಜಶೇಖರ್ ರೆಡ್ಡಿ ಮೃತಪಟ್ಟಿದ್ದರು.
ಈ ಹಿಂದೆ ತಮ್ಮ ತಂದೆಯ ಸಾವಿನಲ್ಲಿ ಟಿಡಿಪಿ ನಾಯಕ ಸಿಎಂ ಚಂದ್ರಬಾಬು ನಾಯ್ಡು ಪಾತ್ರವಿದೆ ಎಂದು ವೈಎಸ್ಆರ್ ಪುತ್ರಿ ಶರ್ಮಿಳಾ ಅವರು ಆರೋಪಿಸಿದ್ದರು. ಶರ್ಮಿಳಾ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
The @shobegumbazar police of #Hyderabad have registered a case against Deputy Chief Minister of #AndhraPradesh, Narayana Swamy, for his alleged derogatory comments on former #Congress President #SoniaGandhi , after a complaint lodged by #TelanganaCongress leader Mallu Ravi. https://t.co/OI9vizLZv8 pic.twitter.com/n2l6j7J12R
— Surya Reddy (@jsuryareddy) January 13, 2024
ಇದನ್ನು ಓದಿ: ‘ತೈವಾನ್’ ಸ್ವಾತಂತ್ರ್ಯವನ್ನು ‘ಅಮೆರಿಕ’ ಬೆಂಬಲಿಸುವುದಿಲ್ಲ!