ಇತ್ತೀಚಿನ ದಿನಗಳಲ್ಲಿ ಸುಳ್ಳುಸುದ್ದಿಗಳು ವ್ಯಾಪಕವಾಗಿ ಹೆಚ್ಚಳವಾಗಿದೆ. ಸಾಮಾಜಿಕ ಮಾದ್ಯಮಗಳಲ್ಲಿ ಯಾರ್ಯಾರೋ ಸುಳ್ಳು ಸುದ್ದಿಗಳನ್ನು ಹಬ್ಬುತ್ತಾರೆ, ಆದರೆ ಸಮಾಜದ ಮೇಲೆ ಜವಾಬ್ಧಾರಿ ಇರುವ ಪತ್ರಿಕೆ, ಟಿವಿ, ವೆಬ್ ಮಾದ್ಯಮಗಳಲ್ಲೂ ಇತ್ತೀಚೆಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು, ಪ್ರಕಟಿಸುವುದು, ಸಣ್ಣ ಸುದ್ದಿಗೆ ವಿಭಿನ್ನ ಬಣ್ಣ ಹಚ್ಚಿ ವೈಭವೀಕರಿಸುವುದು ಕಂಡು ಬರುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಉತ್ತಪ್ರದೇಶದಲ್ಲಿ ಘಟನೆಯೊಂದು ನಡೆದಿದ್ದು, ವ್ಯಕ್ತಿಯೋರ್ವ ‘ನನ್ನ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಮಾದ್ಯಮವನ್ನು ನಿಂದಿಸಲು 2 ಗಂಟೆ ಅವಕಾಶ ಕೊಡಿ’ ಎಂದು ಮ್ಯಾಜಿಸ್ಟ್ರೇಟ್ ಮೊರೆ ಹೋಗಿದ್ದಾರೆ.
ತನ್ನ ವಿರುದ್ಧ ಮಾನಹಾನಿಕಾರಕ ಮತ್ತು ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿದ ಉತ್ತರಪ್ರದೇಶದ ಪ್ರತಾಪ್ಗಢದ ನಿವಾಸಿ ಪ್ರತೀಕ್ ಸಿನ್ಹಾ, ಪತ್ರಿಕೆಯೊಂದರ ಕಚೇರಿಯ ಮುಂದೆ ಮೈಕ್ ಮೂಲಕ ನಿಂದಿಸಲು ಅನುಮತಿ ಕೊಡಿ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆದಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಬರೆದ ಪತ್ರದಲ್ಲಿ, ಜನವರಿ 15ರಂದು ಮಧ್ಯಾಹ್ನ 12 ಗಂಟೆಗೆ ಪತ್ರಿಕೆ ಕಚೇರಿಯ ಹೊರಗಡೆ ಪತ್ರಿಕೆಯ ಬ್ಯೂರೋ ಮುಖ್ಯಸ್ಥ ಮತ್ತು ವರದಿಗಾರರನ್ನು ಎರಡು ಗಂಟೆಗಳ ಕಾಲ ನಿಂದಿಸಲು ಅನುಮತಿ ಕೇಳುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಉತ್ತರಪ್ರದೇಶದ ಇತಿಹಾಸದಲ್ಲಿ ವ್ಯಕ್ತಿಯೋರ್ವರು ಮೊದಲ ಬಾರಿಗೆ ತನ್ನ ವಿರುದ್ಧ ಪತ್ರಿಕೆ ಮಾಡಿರುವ ವರದಿಯೊಂದರ ವಿರುದ್ಧ ಈ ರೀತಿ ಪ್ರತಿಭಟಿಸಲು ಅವಕಾಶವನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ದಿನಪತ್ರಿಕೆಯೊಂದರ ಲೇಖನವು ಪ್ರತೀಕ್ ಸಿನ್ಹಾ ಅವರನ್ನು ಭೂಕಬಳಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದೆ. ನಿಂದನೆಗೆ ಅವಕಾಶ ಕೋರುವ ಮೊದಲು ಅವರು ಪತ್ರಿಕಾ ಕಚೇರಿಗೆ ಮಾನನಷ್ಟದ ಕುರಿತು ನೊಟೀಸ್ನ್ನು ಕೂಡ ಕಳುಹಿಸಿದ್ದಾರೆ.
ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ, ಯಾವುದೇ ಕಾರಣವಿಲ್ಲದೆ ಜನವರಿ 9ರಂದು ತನ್ನ ಜಮೀನಿನಲ್ಲಿ ಬುಲ್ಡೋಜರ್ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರತೀಕ್ ಸಿನ್ಹಾ ಉಲ್ಲೇಖಿಸಿದ್ದಾರೆ. ಇದನ್ನು ಉಲ್ಲೇಖಿಸಿ ಪತ್ರಿಕೆ ಅವನನ್ನು “ಮಾಫಿಯಾ” ಎಂದು ಕರೆದಿದೆ. ಪತ್ರಿಕೆಯಲ್ಲಿ ಬಂದಿರುವ ಲೇಖನ ಸಾಕ್ಷ್ಯಾಧಾರಗಳ ಕೊರತೆಯಿಂದ ಕೂಡಿದೆ ಮತ್ತು ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಪತ್ರಿಕೆಯ ಬ್ಯೂರೋ ಮುಖ್ಯಸ್ಥ ಮತ್ತು ವರದಿಗಾರರನ್ನು ಎರಡು ಗಂಟೆಗಳ ಕಾಲ ನಿಂದಿಸಲು ಅನುಮತಿ ಕೊಡಿ. ನಾನು ಬೇರೆ ಯಾವುದೇ ರೀತಿಯ ಹಿಂಸಾಚಾರ ನಡೆಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ಎಂದು ವಿನಂತಿ ಪತ್ರದಲ್ಲಿ ಪ್ರತೀಕ್ ಸಿನ್ಹಾ ಹೇಳಿದ್ದಾರೆ.
ಇದನ್ನು ಓದಿ:‘ತೈವಾನ್’ ಸ್ವಾತಂತ್ರ್ಯವನ್ನು ‘ಅಮೆರಿಕ’ ಬೆಂಬಲಿಸುವುದಿಲ್ಲ!