ಎರಡು ದಿನಗಳಿಂದ ಕಾಣೆಯಾಗಿದ್ದ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಶವಗಳು ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದ ನರ್ಮದಾ ಕಾಲುವೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿಯಿಂದ ಇಬ್ಬರು ಬಾಲಕಿಯರು ಕಾಣೆಯಾಗಿದ್ದರು.
ಬಾಲಕಿಯರ ಸಂಬಂಧಿಕರು ನೀಡಿದ ದೂರಿನನ್ವಯ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಮತ್ತು ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ಆಗಿದೆ.
ಎಫ್ಐಆರ್ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ (ಸಂಚೋರ್) ರೂಪ್ ಸಿಂಗ್ ಬುಧವಾರ ತಿಳಿಸಿರುವುದಾಗಿ ‘ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಯನ್ನು ವೈದ್ಯಕೀಯ ಮಂಡಳಿಯು ಮಾಡಿದೆ. ಆದರೆ ಬಾಲಕಿಯರ ಕುಟುಂಬ ಸದಸ್ಯರು ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕೆಂಬ ಆಗ್ರಹ ಬಂದಿದೆ.
ಬಾಲಕಿಯರ ಸಂಬಂಧಿಕರು ಮತ್ತು ಸ್ಥಳೀಯ ನಿವಾಸಿಗಳು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಪ್ರತಿಭಟನೆಯನ್ನು ಕೊನೆಗೊಳಿಸಲು ಬಾಲಕಿಯರ ಕುಟುಂಬ ಸದಸ್ಯರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯರನ್ನು ಕೊಂದು ನಾಲೆಗೆ ಎಸೆಯಲಾಗಿದೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. “ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ” ಎಂದು ಸಿಂಗ್ ಹೇಳಿದ್ದಾರೆ.
ದಲಿತ ಕಾರ್ಮಿಕರ ಹತ್ಯೆ: ಅಪರಾಧಿಗೆ ಮರಣದಂಡನೆ ವಿಧಿಸಿದ ರಾಜಸ್ಥಾನ ಸ್ಥಳೀಯ ಕೋರ್ಟ್
2008ರಲ್ಲಿ ಘಟಿಸಿದ ನಾಲ್ವರು ದಲಿತ ಕಾರ್ಮಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಧೋಲ್ಪುರ್ ಸ್ಥಳೀಯ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ನರೇಂದ್ರ ಮೀನಾ ಅವರು ಬುಧವಾರ ಶಿಕ್ಷೆ ಘೋಷಿಸಿದ್ದು, ಅಪರಾಧಿ ಕೀರ್ತಿ ರಾಮ್ ಗುರ್ಜಾರ್ ಎಂಬಾತನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಯದ್ ಮಹಿರ್ ಹಸನ್ ರಿಜ್ವಿ ಮಾಹಿತಿ ನೀಡಿದ್ದಾರೆ.
ಇಲ್ಲಿನ ಬ್ಯಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಇನ್ನೂ ಮೂವರು ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದು ರಿಜ್ವಿ ಹೇಳಿದ್ದಾರೆ.
ಜುಲೈ 9, 2008ರಂದು ಸಂತ್ರಸ್ತ ಜೈಪಾಲ್ ಸಿಂಗ್ ದೂರು ನೀಡಿದ್ದರು. “ನಮ್ಮ ತಂದೆ ರತನ್ ಲಾಲ್, ಚಿಕ್ಕಪ್ಪರಾದ ನತ್ತಿಲಾಲ್, ರಾಮಸ್ವರೂಪ್, ಸಹೋದರರಾದ ಭನ್ವರ್ ಲಾಲ್ ಮತ್ತು ಪಪ್ಪು ಅವರು ನರೇಗಾ ಅಡಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಹೋಗಿದ್ದರು. ಹಳೆ ದ್ವೇಷದಿಂದ ಕೀರ್ತಿ ರಾಮ್ ಗುರ್ಜರ್, ಸುರೇಶ್, ಬಿರ್ಮಾ, ಚಂದ್ರಭಾನ್ ಅಲಿಯಾಸ್ ಅಟ್ಟಾ, ಪುರಾನ್ ಮತ್ತು ಭಗವಾನ್ ಸಿಂಗ್ ಇತರರು ಅಲ್ಲಿಗೆ ಬಂದು ಜಾತಿ ನಿಂದನೆ ಮಾಡಿದರು. ದಲಿತ ಕಾರ್ಮಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದರು” ಎಂದು ದೂರಿನಲ್ಲಿ ತಿಳಿಸಿದ್ದರು.
ಇದನ್ನೂ ಓದಿರಿ: ತುಮಕೂರು: ದಲಿತ ಅರ್ಚಕನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ
ಗುಂಡಿನ ದಾಳಿಯಲ್ಲಿ ರತನ್ ಲಾಲ್, ನತ್ತಿಲಾಲ್, ರಾಮಸ್ವರೂಪ್ ಮತ್ತು ರಾಮ್ವೀರ್ ಸಾವನ್ನಪ್ಪಿದ್ದು, ಆರೋಪಿಗಳು ಪರಾರಿಯಾಗಿದ್ದರು.
ಬುಧವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಕೀರ್ತಿ ರಾಮ್ ಗುರ್ಜರ್ನನ್ನು ಹತ್ಯೆಗೈದ ಅಪರಾಧಿ ಎಂದು ತೀರ್ಮಾನಿಸಿದ್ದಾರೆ. ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಮರಣದಂಡನೆಯನ್ನು ವಿಧಿಸಿದರು.
ಇತರ ಮೂವರು ಆರೋಪಿಗಳಾದ ಸುರೇಶ್, ಬಿರ್ಮಾ ಮತ್ತು ಭಗವಾನ್ ಸಿಂಗ್ ಅವರು ಧೋಲ್ಪುರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಅವರ ವಿಚಾರಣೆ ನಡೆಯುತ್ತಿದೆ ಎಂದು ರಿಜ್ವಿ ತಿಳಿಸಿದ್ದಾರೆ.
ಏಪ್ರಿಲ್ 15, 1982 ರಂದು ಧೋಲ್ಪುರ್ ಜಿಲ್ಲೆ ರಚನೆಯಾಯಿತು. ಇಲ್ಲಿನ ಜಿಲ್ಲೆಯ ನ್ಯಾಯಾಲಯವು ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ರಿಜ್ವಿ ಹೇಳಿದ್ದಾರೆ.