ತಪ್ಪುದಾರಿಗೆಳೆಯುವ ಜಾಹೀರಾತುಗಳು, ಪ್ಯಾಕೇಜಿಂಗ್ ಮತ್ತು ಲೇಬಲ್ಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಬೌರ್ನ್ವಿಟಾವನ್ನು ತಯಾರಿಸುವ ಮೊಂಡೆಲೆಜ್ ಇಂಟರ್ನ್ಯಾಶನಲ್ ಇಂಡಿಯಾಗೆ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ ನೋಟಿಸ್ ನೀಡಿದೆ.
ಈ ಆರೋಗ್ಯ ಪಾನೀಯದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆಯನ್ನು ಬೌರ್ನ್ವಿಟಾ ಸಂಸ್ಥೆಗೆ ನೀಡಿದೆ.
“ನಿಮ್ಮ ಕಂಪನಿಯು ತಯಾರಿಸಿದ ಉತ್ಪನ್ನವು ಪ್ಯಾಕೇಜಿಂಗ್ ಮತ್ತು ಜಾಹೀರಾತುಗಳ ಮೂಲಕ ಗ್ರಾಹಕರನ್ನು ದಾರಿತಪ್ಪಿಸುತ್ತಿದೆ ಎಂಬುದನ್ನು ಆಯೋಗ ಗಮನಿಸುತ್ತಿದೆ” ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯು ಏಪ್ರಿಲ್ 21ರ ನೋಟೀಸ್ನಲ್ಲಿ ತಿಳಿಸಿದೆ.
“ನಿಮ್ಮ ಉತ್ಪನ್ನದ ಲೇಬಲಿಂಗ್, ಪ್ಯಾಕೇಜಿಂಗ್, ಪ್ರದರ್ಶನ ಮತ್ತು ಜಾಹೀರಾತುಗಳನ್ನು ಆಯೋಗವು ಗಮನಿಸುತ್ತದೆ. ನೀವು ಮಾಡುತ್ತಿರುವ ಪ್ರತಿಪಾದನೆಗಳು ಸಾಮಾನ್ಯ ಜನರನ್ನು ತಪ್ಪುದಾರಿಗೆಳೆಯುವಂತಿವೆ” ಎಂದು ಎಚ್ಚರಿಸಿದೆ.
ಮಕ್ಕಳ ಬೆಳವಣಿಗೆಯನ್ನು ಹೆಚ್ಚಿಸುವ ಆರೋಗ್ಯ ಪಾನೀಯವಾಗಿ ಬೌರ್ನ್ವಿಟಾವನ್ನು ಮೊಂಡೆಲೆಜ್ ಇಂಟರ್ನ್ಯಾಶನಲ್ ಇಂಡಿಯಾ ಕಂಪನಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ದೂರು ಸ್ವೀಕರಿಸಲಾಗಿದೆ ಎಂದಿರುವ ಆಯೋಗ, “ಇದು ಹೆಚ್ಚಿನ ಶೇಕಡಾವಾರು ಸಕ್ಕರೆ ಮತ್ತು ಇತರ ಪದಾರ್ಥಗಳನ್ನು ಹೊಂದಿದ್ದು, ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂಬ ಆರೋಪವನ್ನು ಪ್ರಸ್ತಾಪಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿರುವ ರೇವಂತ್ ಹಿಮತ್ಸಿಂಕಾ ಎಂಬವರು ವಿಡಿಯೊವೊಂದನ್ನು ಹಂಚಿಕೊಂಡಿದ್ದರು. “ಮಕ್ಕಳ ಪಾನೀಯವೆಂದೇ ಜನಪ್ರಿಯತೆ ಗಳಿಸಿರುವ ಇದರಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಇದನ್ನು ಸೇವಿಸುವುದರಿಂದ ಮಧುಮೇಹ ಮತ್ತು ಕ್ಯಾನ್ಸರ್ ಬರಬಹುದು” ಎಂದು ವಿಡಿಯೊದಲ್ಲಿ ಆರೋಪಿಸಿದ್ದರು. ನಂತರ ವಿವಾದವು ಭುಗಿಲೆದ್ದಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದಕ್ಕೆ 12 ಮಿಲಿಯನ್ ವೀವ್ಸ್ ಬಂದಿವೆ.
ಆದರೆ ಏಪ್ರಿಲ್ 13 ರಂದು ಮೊಂಡೆಲೆಜ್ ಇಂಡಿಯಾವು ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚನೆಯನ್ನು ನೀಡಿದ ನಂತರ ಹಿಮತ್ಸಿಂಕಾ ಅವರು ವೀಡಿಯೊವನ್ನು ಡಿಲೀಟ್ ಮಾಡಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಅವರ ಟ್ವಿಟರ್ ಹ್ಯಾಂಡಲ್ ಅನ್ನೂ ಅಮಾನತುಗೊಳಿಸಲಾಗಿದೆ.
ವೀಡಿಯೊದಲ್ಲಿ ಮಾಡಿರುವ ಆರೋಪಗಳನ್ನು ಬೌರ್ನ್ವಿಟಾ ಸಂಸ್ಥೆ ನಿರಾಕರಿಸಿದೆ. ಬಳಕೆಗೆ ಅನುಮೋದಿಸಲಾದ ಪದಾರ್ಥಗಳನ್ನು ಉಪಯೋಗಿಸಿ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಸೂತ್ರವನ್ನು ಆಧರಿಸಿ ಬೋರ್ನ್ವಿಟಾವನ್ನು ತಯಾರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.
“ಪ್ರತಿ 20 ಗ್ರಾಂ ಬೌರ್ನ್ವಿಟಾ ಸೇವೆಯು 7.5 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಇದು ಸರಿಸುಮಾರು ಒಂದೂವರೆ ಟೀ ಚಮಚಗಳಷ್ಟು ಇರುತ್ತದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ಮಕ್ಕಳಿಗೆ ದಿನನಿತ್ಯ ಶಿಫಾರಸು ಮಾಡಲಾದ ಸಕ್ಕರೆ ಸೇವನೆಯ ಮಿತಿಗಿಂತ ಕಡಿಮೆ ಇದೆ” ಎಂದು ಸ್ಪಷ್ಟಪಡಿಸಲಾಗಿದೆ.
ಶುಕ್ರವಾರ ಆಯೋಗ ನೀಡಿರುವ ನೋಟೀಸ್ನಲ್ಲಿ, “ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ ಮತ್ತು ಗ್ರಾಹಕ ಸಂರಕ್ಷಣಾ ಕಾಯಿದೆಯ ಪ್ರಕಾರ ಕಡ್ಡಾಯವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕಾಗುತ್ತದೆ. ಆದರೆ ಸಂಸ್ಥೆಯ ಉತ್ಪನ್ನಗಳು ಈ ವಿಚಾರದಲ್ಲಿ ವಿಫಲವಾಗಿವೆ” ಎಂದು ತಿಳಿಸಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.
ಇದನ್ನೂ ಓದಿರಿ: ಒಳಮೀಸಲಾತಿ ಜಾರಿ ಎಂದು ಸುಳ್ಳು ಜಾಹೀರಾತು ನೀಡದಿರಿ: ಹೋರಾಟ ಸಮಿತಿ ಆಗ್ರಹ