Homeಮುಖಪುಟಸಿಬಿಐನಿಂದ ಕೊಚ್ಚರ್ ದಂಪತಿಯ ಬಂಧನ: 'ಅಧಿಕಾರದ ದುರುಪಯೋಗ' ಎಂದ ಹೈಕೋರ್ಟ್

ಸಿಬಿಐನಿಂದ ಕೊಚ್ಚರ್ ದಂಪತಿಯ ಬಂಧನ: ‘ಅಧಿಕಾರದ ದುರುಪಯೋಗ’ ಎಂದ ಹೈಕೋರ್ಟ್

- Advertisement -
- Advertisement -

ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ,  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದಾ ಕೊಚ್ಚರ್‌ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಸಿಬಿಐ ಬಂಧಿಸಿರುವುದು “ಅಧಿಕಾರದ ದುರುಪಯೋಗ” ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ಬೋರ್ಕರ್ ಅವರ ವಿಭಾಗೀಯ ಪೀಠವು ಫೆಬ್ರವರಿ 6ರಂದು ಕೊಚ್ಚರ್‌ಗಳ ಬಂಧನವನ್ನು ಕಾನೂನುಬಾಹಿರವೆಂದು ಹೇಳಿತ್ತು, ಅವರಿಗೆ ಜಾಮೀನು ಮಂಜೂರು ಮಾಡಿರುವ ಜನವರಿ 2023ರ ಮಧ್ಯಂತರ ಆದೇಶವನ್ನು ಎತ್ತಿ ಹಿಡಿದಿತ್ತು.

ಕೊಚ್ಚರ್‌ ದಂಪತಿಯನ್ನು ಬಂಧಿಸುವ ನಿರ್ಧಾರ ಬುದ್ದಿ ಅನ್ವಯಿಸದೆ ಮತ್ತು ಕಾನೂನನ್ನು ಪರಿಗಣಿಸದೆ ಮಾಡಿರುವ ಅಧಿಕಾರದ ದುರುಪಯೋಗವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕೊಚ್ಚರ್‌ ದಂಪತಿ ತನಿಖೆಗೆ ಸಹಕರಿಸದ ಕಾರಣ ಅವರನ್ನು ಬಂಧಿಸಲಾಗಿದೆ ಎಂಬ ಸಿಬಿಐ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ ಮತ್ತು ವಿಚಾರಣೆಯ ಸಮಯದಲ್ಲಿ ಆರೋಪಿಗಳಿಗೆ ಮೌನವಾಗಿರಲು ಹಕ್ಕಿದೆ ಎಂದು ಹೇಳಿದೆ. ಮೌನದ ಹಕ್ಕನ್ನು ಭಾರತೀಯ ಸಂವಿಧಾನದ 20 (3)ನೇ ವಿಧಿಯು ನೀಡುತ್ತದೆ. ಮೌನವಾಗಿರುವ ಹಕ್ಕನ್ನು ಚಲಾಯಿಸುವುದನ್ನು ಅಸಹಕಾರದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣದಲ್ಲಿ ದಂಪತಿಯನ್ನು ಡಿಸೆಂಬರ್ 23, 2022ರಂದು ಬಂಧಿಸಲಾಗಿತ್ತು. ಬಂಧನವನ್ನು ಪ್ರಶ್ನಿಸಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲು ಕೋರಿದ್ದರು. 2023ರ ಜನವರಿಯಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ಇಬ್ಬರಿಗೆ ಜಾಮೀನು ನೀಡಿತ್ತು. ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನವನ್ನು ಬಾಂಬೆ ಹೈಕೋರ್ಟ್ ಅಕ್ರಮ ಎಂದು ಫೆಬ್ರವರಿ 6ರ ತೀರ್ಪಿನಲ್ಲಿ ಹೇಳಿತ್ತು.

ಫೆಬ್ರವರಿ 6ರ ಆದೇಶದಲ್ಲಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC)ನ ಸೆಕ್ಷನ್ 41Aಯ ಉಲ್ಲಂಘನೆಯನ್ನು ಕೋರ್ಟ್‌ ಗಮನಿಸಿದೆ. ಈ ನಿಬಂಧನೆಯು ಆರೋಪಿಯು ವಿಚಾರಣೆಗೆ ಹಾಜರಾಗಲು ಪೊಲೀಸರು ನೀಡಿದ ಸೂಚನೆಯನ್ನು ಪಾಲಿಸಿದಾಗ ಬಂಧಿಸುವ ಅಧಿಕಾರವನ್ನು ತಡೆಯುತ್ತದೆ ಮತ್ತು ಅಗತ್ಯವೆಂದು ಪೊಲೀಸರು ಅಭಿಪ್ರಾಯಪಟ್ಟಾಗ ಮಾತ್ರ ಬಂಧನವನ್ನು ಮಾಡಬೇಕೆಂದು ಹೇಳುತ್ತದೆ.

ಕೊಚ್ಚರ್‌ಗಳ ವಿರುದ್ಧ ಎಫ್‌ಐಆರ್‌ನ್ನು 2019ರಲ್ಲಿ ದಾಖಲಿಸಲಾಗಿದೆ ಮತ್ತು ಅವರನ್ನು 2022ರಲ್ಲಿ  ವಿಚಾರಣೆಗೆ ಸಮನ್ಸ್‌ ನೀಡಲಾಗಿತ್ತು. ಅಪರಾಧದ ಗಂಭೀರತೆಯ ಹೊರತಾಗಿಯೂ ಅರ್ಜಿದಾರರನ್ನು ಅಪರಾಧದ ನೋಂದಣಿ ದಿನಾಂಕದಿಂದ ಮೂರು ವರ್ಷಗಳವರೆಗೆ ವಿಚಾರಣೆಗೆ ಒಳಪಡಿಸಲಾಗಿಲ್ಲ ಅಥವಾ ಸಮನ್ಸ್ ನೀಡಲಾಗಿಲ್ಲ ಎಂದು ಕೋರ್ಟ್‌ ಗಮನಿಸಿದೆ.

ಏನಿದು ಪ್ರಕರಣ:

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳು ಮತ್ತು ಖಾಸಗಿ ಸಾಲ ನೀತಿಯನ್ನು ಉಲ್ಲಂಘಿಸಿ, ಧೂತ್‌ ಅವರ ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂಬುವುದು ಚಂದಾ ಕೊಚ್ಚರ್‌ಗಳ ವಿರುದ್ಧದ ಆರೋಪವಾಗಿದೆ.

2019ರ ಸಿಬಿಐನ ಪ್ರಥಮ ಮಾಹಿತಿ ವರದಿಯಲ್ಲಿ ಸಾಲದ ವಂಚನೆ ಆರೋಪಿಸಿ ಚಂದಾ ಕೊಚ್ಚರ್‌, ದೀಪಕ್ ಕೊಚ್ಚರ್‌ ಮತ್ತು ಧೂತ್ ಜೊತೆಗೆ ದೀಪಕ್ ಕೊಚ್ಚರ್ ಅವರ ನುಪವರ್ ರಿನ್ಯೂಬಲ್ಸ್ (ಎನ್‌ಆರ್‌ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಿಸಲಾಗಿತ್ತು.

2018ರಲ್ಲಿ ಈ ಬಗ್ಗೆ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಕೊಚ್ಚರ್‌ ಅವರು ಐಸಿಐಸಿಐ ನಿರ್ದೇಶಕಿ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದಿದ್ದರು, ಕೆಲ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಾಲಗಳನ್ನು ನಂತರ ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು.

ಇದನ್ನು ಓದಿ: ‘ಜೈ ಹಿಂದ್ ಟಿವಿ’ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿದ ಐಟಿ ಇಲಾಖೆ: ಡಿಕೆ ಶಿವಕುಮಾರ್ ಹೂಡಿಕೆಗೆ ರಾಜಕೀಯ ಸೇಡು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...