ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಉತ್ತರ ಅಮೆರಿಕಾದಲ್ಲಿ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವ ಕುರಿತು ‘ದಿ ಪ್ರಿಂಟ್’ ಪ್ರಕಟಿಸಿದ್ದ ಲೇಖನವನ್ನು ತೆಗೆದು ಹಾಕಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮೇಲ್ನೋಟಕ್ಕೆ ಲೇಖನವು ಅಧಿಕಾರಿಗಳ ವೃತ್ತಿ ಜೀವನ ಅಥವಾ ಅವರ ಕುಟುಂಬ ಸದಸ್ಯರ ಜೀವಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠ ತಿಳಿಸಿದೆ.
ಪತ್ರಿಕಾ ಸ್ವಾತಂತ್ರ್ಯವನ್ನು ಅತ್ಯಂತ ಉನ್ನತ ಮಟ್ಟದಲ್ಲಿ ಇರಿಸಲಾಗಿದೆ. ಲೇಖನ ತೆಗೆದು ಹಾಕುವಂತೆ ನಾವು ಆದೇಶಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.
#Breaking
"Freedom of press is placed at a very high pedestal."Delhi High Court rejects a PIL seeking directions to block an article published by The Print regarding R&AW shutting its operations in North America in the aftermath of diplomatic row in relation to the killing of… pic.twitter.com/ZAAHe5O5wq
— Bar & Bench (@barandbench) February 19, 2024
ಸರ್ಕಾರವು ಅಗತ್ಯವೆಂದು ಪರಿಗಣಿಸಿದರೆ ಸಮಸ್ಯೆಯನ್ನು ನಿಭಾಯಿಸಲು ಅಧಿಕಾರ ಹೊಂದಿದೆ ಎಂದು ನ್ಯಾಯಾಲಯವು ಪಿಐಎಲ್ ತಿರಸ್ಕರಿಸುವಾಗ ತಿಳಿಸಿದೆ.
‘ದಿ ಪ್ರಿಂಟ್’ ನವೆಂಬರ್ 30, 2023 ರಂದು “Nijjar-Pannun effect: RAW downs shutters in North America 1st time since inception in 1968”ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿತ್ತು. ಇದನ್ನು ದಿ ಪ್ರಿಂಟ್ಗೆ ಕಾಂಟ್ರಿಬ್ಯೂಟಿಂಗ್ ಎಡಿಟರ್ ಪ್ರವೀಣ್ ಸ್ವಾಮಿ ಅವರು ಬರೆದಿದ್ದರು.
ಭಾರತೀಯ ಹೈಕಮಿಷನ್ನಲ್ಲಿ ಕೆಲಸ ಮಾಡುವವರಿಂದ ತನಗೆ ಬಂದ ಮಾಹಿತಿಯ ಪ್ರಕಾರ, ಲೇಖನವು ಭಾರತೀಯ ರಾಜತಾಂತ್ರಿಕರು ಮತ್ತು ಗುಪ್ತಚರ ಕಾರ್ಯಕರ್ತರ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ ಎಂದು ವಕೀಲ ರಾಘವ್ ಅವಸ್ತಿ ಎಂಬವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು.
ವಿದೇಶದಲ್ಲಿ ಕೆಲಸ ಮಾಡುವ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ರಾಜತಾಂತ್ರಿಕರು ಗುಪ್ತಚರ ಸೇವೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಮೂಲ ಆಧಾರಿತ ಊಹಾಪೋಹಗಳನ್ನು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ಹೇರಲು ಪಿಐಎಲ್ನಲ್ಲಿ ಕೋರಲಾಗಿತ್ತು.
‘ದಿ ಪ್ರಿಂಟ್’ನ ಲೇಖನವು ಸಂಪೂರ್ಣವಾಗಿ ಮೂಲ ಆಧಾರಿತವಾಗಿದೆ. ಇದು ಭಾರತೀಯ ರಾಜತಾಂತ್ರಿಕರ ವೃತ್ತಿ ಜೀವನಕ್ಕೆ ಹಾನಿಯನ್ನುಂಟು ಮಾಡಲಿದೆ ಮತ್ತು ಅವರ ಜೀವನವನ್ನು ಅಪಾಯಕ್ಕೆ ತಳ್ಳಲಿದೆ. ತನ್ನನ್ನು ಸಂಪರ್ಕಿಸಿದ ರಾಜತಾಂತ್ರಿಕರ ಗುರುತನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧ. ಅಧಿಕಾರಿಗಳ ಗುರುತನ್ನು ಮರೆ ಮಾಚಲು ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಬಹುದು ಎಂದು ಅವಸ್ತಿ ಪಿಐಎಲ್ನಲ್ಲಿ ಹೇಳಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ರೀತಿಯ ಸುದ್ದಿಗಳ ವರದಿಯನ್ನು ನಿರ್ಬಂಧಿಸಿ ಆದೇಶಿಸಲು ಸಾಧ್ಯವಿಲ್ಲ ಎಂದು ವಾದವನ್ನು ತಿರಸ್ಕರಿಸಿದೆ. ಭಾರತ ಸರ್ಕಾರವು ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಅಧಿಕಾರವನ್ನು ಹೊಂದಿದೆ. ರಾಷ್ಟ್ರೀಯ ಭದ್ರತೆಗೆ ಏನಾದರೂ ಅಪಾಯವಿದೆ ಎಂದು ಸರ್ಕಾರ ಭಾವಿಸಿದರೆ, ಅವರು ಅದರ ಮೇಲೆ ಕಾರ್ಯನಿರ್ವಹಿಸಲು ಸ್ವತಂತ್ರರು ಎಂದು ನ್ಯಾಯಾಲಯ ಹೇಳಿದೆ. ಪಿಐಎಲ್ ಊಹೆಗಳ ಮೇಲೆ ಸಲ್ಲಿಸಲಾಗಿದೆ ಎಂದು ಅದನ್ನು ತಿರಸ್ಕರಿಸಿದೆ.
ಇದನ್ನೂ ಓದಿ : ಸಿಬಿಐನಿಂದ ಕೊಚ್ಚರ್ ದಂಪತಿಯ ಬಂಧನ: ‘ಅಧಿಕಾರದ ದುರುಪಯೋಗ’ ಎಂದ ಹೈಕೋರ್ಟ್