HomeದಿಟನಾಗರFact Check: ನಮಾಝ್‌ಗಾಗಿ ಹಮೀದ್ ಅನ್ಸಾರಿ ರಾಜ್ಯಸಭೆ ಕಲಾಪ ಮುಂದೂಡುತ್ತಿದ್ದರು ಎಂಬುವುದು ಸುಳ್ಳು

Fact Check: ನಮಾಝ್‌ಗಾಗಿ ಹಮೀದ್ ಅನ್ಸಾರಿ ರಾಜ್ಯಸಭೆ ಕಲಾಪ ಮುಂದೂಡುತ್ತಿದ್ದರು ಎಂಬುವುದು ಸುಳ್ಳು

- Advertisement -
- Advertisement -

ಮಾಜಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಮಾಜಿ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಪರಸ್ಪರ ಮಾತನಾಡಿರುವ ವಿಡಿಯೋವೊಂದು ಭಾರೀ ವೈರಲ್‌ ಆಗಿದ್ದು, “ಹಮೀದ್ ಅನ್ಸಾರಿ ಅವರು ನಮಾಝ್‌ಗೆ ತೆರಳುವ ಸಲುವಾಗಿ ರಾಜ್ಯಸಭೆ ಕಲಾಪವನ್ನು ಮುಂದೂಡುತ್ತಿದ್ದರು. ಈ ಕುರಿತು ಮಾಯಾವತಿ ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿದ್ದರು” ಎಂದು ಶೀರ್ಷಿಕೆ ಕೊಟ್ಟು ಹಂಚಿಕೊಳ್ಳಲಾಗ್ತಿದೆ.

ಫೆ.10, 2024ರಂದು ಆಂಧ್ರ ಪ್ರದೇಶ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ ಅವರು ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, “ಹಮೀದ್ ಅನ್ಸಾರಿ ಅವರನ್ನು ಉಪ ರಾಷ್ಟ್ರಪತಿಯಾಗಿ ಕಾಂಗ್ರೆಸ್ ನಾಮನಿರ್ದೇಶನ ಮಾಡಿತ್ತು. ಅವರು ಪ್ರಾರ್ಥನೆ ಸಲ್ಲಿಸಲು ಕಲಾಪದ ವೇಳೆ ಪ್ರತಿದಿನ 12:00 ಗಂಟೆಗೆ ರಾಜ್ಯಸಭೆಯಿಂದ ಹೊರಡುತ್ತಿದ್ದರು. ಎಲ್ಲಾ ಸದಸ್ಯರು ಸಾಂವಿಧಾನಿಕ ಕಲಾಪವನ್ನು ನಿಲ್ಲಿಸಿ, ಅವರ ವಾಪಸಾತಿಗೆ ಕಾಯುತ್ತಾ ಖಾಲಿ ಕೂರುತ್ತಿದ್ದರು. ಮಾಯಾವತಿ ಅವರು ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಕಾಂಗ್ರೆಸ್ ಅವರನ್ನು ಬೆಂಬಲಿಸಿರಲಿಲ್ಲ. ಈಗ ಕಾಂಗ್ರೆಸ್ ಜಾತ್ಯತೀತೆಯ ಬಗ್ಗೆ ಪಾಠ ಮಾಡುತ್ತಿದೆ” ಎಂದು ಬರೆದುಕೊಂಡಿದ್ದರು.

ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಅವರು ಫೆ.7, 2024ರಂದು ಈ ವಿಡಿಯೋ ಹಂಚಿಕೊಂಡಿದ್ದು, “ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ಅವರು ರಾಜ್ಯಸಭೆ ಕಲಾಪವನ್ನು ಪ್ರತಿದಿನ 12:00 ಗಂಟೆಗೆ ಮುಂದೂಡಿ ನಮಾಜ್ ಮಾಡಲು ಹೋಗುತ್ತಿದ್ದರು. ಎಲ್ಲಾ ಸಂಸದರು ಸಂವಿಧಾನಾತ್ಮಕ ಕೆಲಸಗಳನ್ನು ನಿಲ್ಲಿಸಿ ಅವರಿಗಾಗಿ ಕಾಯುತ್ತಾ ಕೂರುತ್ತಿದ್ದರು. ಹಮೀದ್ ಅನ್ಸಾರಿ ಅವರನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡಿತ್ತು. ಮಾಯಾವತಿಯವರು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅನ್ಸಾರಿಯವರ ಉತ್ತರವನ್ನು ನೋಡಿ” ಎಂದಿದ್ದರು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಗೂಗಲ್‌ನಲ್ಲಿ ಈ ವಿಡಿಯೋ ಕುರಿತು ನಾವು ಹುಡುಕಾಟ ನಡೆಸಿದಾಗ, ಇದು 2012ರಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಗಿನ ರಾಜ್ಯಸಭೆ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಮತ್ತು ಮಾಯಾವತಿ ನಡುವೆ ನಡೆದ ಚರ್ಚೆಯದ್ದು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ “ಪ್ರತಿದಿನ 12 ಗಂಟೆಯ ನಂತರ ಕಲಾಪ ಸ್ಥಗಿತಗೊಳ್ಳುತ್ತಿದೆ. ನೀವು ಸದನದ ಅಧ್ಯಕ್ಷರು, ಪ್ರತಿದಿನ 12 ಗಂಟೆಗೆ ಎದ್ದು ಹೊರಡುತ್ತೀರಿ. ಹೀಗಾದರೆ ಯಾರು ಸಂಸತ್ತಿನ ಕಲಾಪಗಳ ಅಧ್ಯಕ್ಷತೆ ವಹಿಸುತ್ತಾರೆ? ಸದನವು ಕ್ರಮ ಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಿ” ಎಂದು ಹಮೀದ್ ಅನ್ಸಾರಿಗೆ ಮಾಯಾವತಿ ಹೇಳಿರುವುದನ್ನು ನೋಡಬಹುದು.

ಮಾಯಾವತಿ ಪ್ರಶ್ನೆ ಮಾಡುತ್ತಿದ್ದಂತೆ ಹಮೀದ್ ಅನ್ಸಾರಿ ಅವರು ಕುಳಿತುಕೊಳ್ಳುವಂತೆ ಮನವಿ ಮಾಡಿರುವುದು ವಿಡಿಯೋದಲ್ಲಿದೆ. ಇಲ್ಲಿ ಮಾಯಾವತಿ ಅವರು ಅನ್ಸಾರಿ ಅವರಿಗೆ ಪ್ರಶ್ನೆ ಕೇಳಿರುವ ವಿಡಿಯೋ ನಿಜವಾದದ್ದೆ. ಆದರೆ, ಮಾಯಾವತಿ “ನೀವು 12 ಗಂಟೆಗೆ ಎದ್ದು ಹೊರಡುತ್ತೀರಿ ಎಂದು ಹೇಳಿದ್ದಾರೆಯೇ ಹೊರತು, ಎಲ್ಲೂ ನಮಾಝ್‌ಗೆ ಎದ್ದು ಹೋಗುತ್ತೀರಿ” ಎಂದು ಹೇಳಿಲ್ಲ.

ಮಾಯಾವತಿ ಅವರು ಮಾತನಾಡಿರುವ ಸಂಪೂರ್ಣ ವಿಡಿಯೋ ಇಲ್ಲಿದೆ

ವೈರಲ್ ವಿಡಿಯೋವನ್ನು ಮೊದಲು ಫೆಬ್ರವರಿ 4,2024 ರಂದು ಬಹುಜನ ಸಮಾಜ ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆ ಬಳಿಕ ಅದನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದು, ಅನ್ಸಾರಿ ಮತ್ತು ಕಾಂಗ್ರೆಸ್ ಮುಸ್ಲಿಂ ಪರ ಎಂದು ಆರೋಪಿಸಿದ್ದಾರೆ.

ಡಿಸೆಂಬರ್ 2012ರ ಮಾಧ್ಯಮ ವರದಿಗಳ ಪ್ರಕಾರ, ಮಾಯಾವತಿ ಅವರು ಸರ್ಕಾರಿ ಉದ್ಯೋಗ ಬಡ್ತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ವಿಷಯದ ಬಗ್ಗೆ ಮಾತನಾಡಲು ಬಯಸಿದ್ದರು. ಆದರೆ, ಸಮಾಜವಾದಿ ಪಕ್ಷದ ಪ್ರತಿಭಟನೆಯಿಂದಾಗಿ ಸಂಸತ್ ಕಲಾಪ ಅಸ್ತವ್ಯಸ್ತಗೊಂಡಿತ್ತು. ಇದು ಮಾಯಾವತಿ ಅವರನ್ನು ಕೆರಳಿಸಿತ್ತು.

ವರದಿ ಲಿಂಕ್ ಇಲ್ಲಿದೆ 

ಅದೇ ದಿನ, ಮಾಯಾವತಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದರು. “ಅನ್ಸಾರಿ ಅವರು ಪ್ರತಿದಿನ ಮಧ್ಯಾಹ್ನ ಸಂಸತ್ತಿನಿಂದ ಹೊರಡುತ್ತಾರೆ. ಮಧ್ಯಾಹ್ನದ ನಂತರ ಬೇರೆಯವರು ರಾಜ್ಯಸಭೆಯ ಅಧ್ಯಕ್ಷ ಪೀಠದಲ್ಲಿ ಕೂರುತ್ತಾರೆ. ಇದರಿಂದಾಗಿ ಸರ್ಕಾರಿ ಉದ್ಯೋಗ ಬಡ್ತಿಯಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಕೋಟಾ ಒದಗಿಸುವ ಮಸೂದೆಯನ್ನು ಚರ್ಚಿಸಲಾಗಲಿಲ್ಲ. ಸದನವನ್ನು ಕ್ರಮಬದ್ಧವಾಗಿಟ್ಟಿಲ್ಲ ಎಂದು ಅನ್ಸಾರಿ ಮತ್ತು ಸರ್ಕಾರವನ್ನು ಮಾಯಾವತಿ ದೂಷಿಸಿದ್ದರು.

ಈ ಘಟನೆಯ ಬಗ್ಗೆ ಹಮೀದ್ ಅನ್ಸಾರಿ ತಮ್ಮ ಆತ್ಮಚರಿತ್ರೆ “ಬೈ ಮೆನಿ ಎ ಹ್ಯಾಪಿ ಆಕ್ಸಿಡೆಂಟ್” ನಲ್ಲಿ ಬರೆದಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಅನ್ಸಾರಿ ಪ್ರಕಾರ, ಮಾಯಾವತಿ ಮರುದಿನ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಪುಸ್ತಕದಲ್ಲಿ ನಮಾಝ್‌ಗಾಗಿ ಎದ್ದು ಹೋಗಿದ್ದಕ್ಕೆ ಮಾಯಾವತಿ ಪ್ರಶ್ನೆ ಎತ್ತಿದ್ದರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ, ಇದು 12 ವರ್ಷಗಳ ಹಿಂದೆ ಸಂಸತ್ತಿನಲ್ಲಿ ನಡೆದ ಘಟನೆಯ ವಿಡಿಯೋವನ್ನು ಕೋಮು ಕೋನದಲ್ಲಿ ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ : Fact Check : ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...