ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಕಳೆದರು ದಲಿತರಿಗೆ ಇನ್ನೂ ಕೆಲವು ವಿಚಾರಗಳಲ್ಲಿ ಸ್ವಾತಂತ್ರ ಸಿಕ್ಕಿಲ್ಲ. ಇಂದಿಗೂ ಅವರು ಕೆಲವು ಕಡೆ ದೇವಸ್ಥಾನ ಪ್ರವೇಶ ಮಾಡುವಂತಿಲ್ಲ, ಇಂತಹ ಅಸ್ಪೃಶ್ಯತೆ ಆಚರಣೆ ನಡೆಯುತ್ತಲೇ ಇದೆ. ಇದನ್ನು ಹೋಗಲಾಡಿಸಲು ಕಾನೂನು ಇದ್ದರೂ ಕೂಡ, ಸವರ್ಣೀಯರು ಈ ಅಮಾನವೀಯ ಆಚರಣೆಯನ್ನು ಮುಂದುವರೆಸಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡುವ ದಲಿತ ಅರ್ಚಕನ ಮೇಲೆ ಜಾತ್ರೆಯಂದು ಸವರ್ಣೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಾತ್ರೆಯ ಸಮಯದಲ್ಲಿ ದಲಿತ ಅರ್ಚಕನ ಮೇಲೆ ಸವರ್ಣೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬಿದರೆಗುಡಿ ಗ್ರಾಮದಲ್ಲಿರುವ ಮುಜಾರಾಯಿ ಇಲಾಖೆಗೆ ಸೇರಿದ ಬಿದರೆಗುಡಿಯ ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ದೇವಸ್ಥಾನದ ಅರ್ಚಕ ಲಿಂಗರಾಜು ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಹೊನ್ನವಳ್ಳಿ, ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿದಿರಾಂಬಿಕ ಹಾಗೂ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ದೇವಿಯ ಬ್ರಹ್ಮ ರಥೋತ್ಸವ ನಡೆದಿದೆ. ಈ ರಥೋತ್ಸವದ ವೇಳೆ ಅರ್ಚಕ ಲಿಂಗರಾಜು ಅವರನ್ನು ದೇವಸ್ಥಾನಕ್ಕೆ ಕರೆಸಿ ಅನ್ಯ ಜನಾಂಗದ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಲ್ಲೆಗೆ ಒಳಗಾದ ಅರ್ಚಕನಿಗೆ ಚಿಕಿತ್ಸೆ ಪಡೆಯಲು ಬಿಟ್ಟಿಲ್ಲ ಅಷ್ಟು ಮಾತ್ರವಲ್ಲದೆ, ಅಲ್ಲಿ ಪೂಜೆಗೆ ಬಂದಿದ್ದ ಇತರೆ ದಲಿತರ ಮೇಲೂ ಹಲ್ಲೆಗೆ ಯತ್ನ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ
ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಳೆದ ತಿಂಗಳು ಇಂತಹ ಅಮಾನುಷ ಘಟನೆಗೆ ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯೇ ಸಾಕ್ಷಿಯಾಗಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಜಾತಿನಿಂದನೆ, ಹಲ್ಲೆ ವಿರುದ್ದ ದೂರು ನೀಡಿದ ದಲಿತ ಕುಟುಂಬಗಳ ಎರಡು ಮನೆಗಳಿಗೆ ಸವರ್ಣೀಯರು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಅಮಾನವೀಯ ಘಟನೆ ನಡೆದಿತ್ತು.
ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಸವರ್ಣಿಯರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದ ಘಟನೆ ನಡೆದಿತ್ತು. ದೇವಸ್ಥಾನ, ಕಿರಾಣಿ ಶಾಪ್, ಹೊಟೇಲ್ಗಳಿಗೆ ದಲಿತರು ಹೋದರೆ ಅಂಗಡಿ ಮಾಲೀಕರು ಯಾವ ವಸ್ತುಗಳನ್ನೂ ನೀಡುತ್ತಿಲ್ಲ. ಯಾಕೆ ಕೊಡಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ ವಾಗ್ವಾದ ನಡೆದಿದೆ. ನಿಮಗೆ ಏನಾದ್ರೂ ಕೊಟ್ಟರೆ ದಂಡ ಹಾಕುತ್ತಾರೆ ಎಂದು ಅಂಗಡಿಕಾರರು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ಇನ್ನು ಗ್ರಾಮದಲ್ಲಿ ನಡೆಯುವ ಕೆಟ್ಟ ಆಚರಣೆಯ ಬಗ್ಗೆ ಯುವಕರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.