ಹಾಸನ ಟಿಕೆಟ್ ವಿಚಾರದಲ್ಲಿ ಜೆಡಿಎಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಎಚ್ಡಿ ರೇವಣ್ಣ ಅವರು ಪತ್ನಿಗೆ ಟಿಕೆಟ್ ನೀಡದಿದ್ದರೆ ನನಗೂ ಟಿಕೆಟ್ ಬೇಡ ಎಂದು ಹೇಳುತ್ತಿದ್ದರೆ, ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತನಿಗೆ ಜೆಡಿಎಸ್ ಟಿಕೆಟ್ ನೀಡಲಾಗುತ್ತದೆ ಎಂಬ ಹೇಳಿಕೆಯನ್ನು ಪುನರುಚ್ಚಾರಿಸಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ”ಮನೆ ಹಾಳು ಮಾಡುವ ಶಕುನಿಗಳು ಹಾಸನದಲ್ಲಿ ಇದ್ದಾರೆ. ಕುರುಕ್ಷೇತ್ರದ ಯುದ್ದ ಶಕುನಿಯಿಂದಲೇ ಆಗಿದೆ, ಇಲ್ಲಿಯೂ ಶಕುನಿಗಳು ತಲೆ ಕೆಡಿಸುತ್ತಿದ್ದಾರೆ. ಶಕುನಿಗಳು ನನ್ನ ಕುಟುಂಬದಲ್ಲಿ ಇಲ್ಲ, ಹಾಸನದಲ್ಲಿ ಇದ್ದಾರೆ” ಎಂದು ಗರಂ ಆದರು.
ಹಾಸನ ಟಿಕೆಟ್ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ”ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡುತ್ತಿದ್ದಾರೆ. ಬೇರೆ ಪಕ್ಷದವರು, ಬುದ್ಧಿ ಜೀವಿಗಳು ಮತ್ತು ಹಿತಶತ್ರುಗಳು ತಲೆ ಕೆಡೆಸಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ, ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿದಿದ್ದಾರೆ.
”ದೇವೇಗೌಡರಿಗೂ ಸಹ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು ವಿಷಯ ನುಂಗಿಕೊಂಡಿದ್ದೇನೆ, ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಆಗೋದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ ಸಹ, ತಪ್ಪುಗಳು ಮಾಡದಿದ್ದರೂ ತಲೆ ಮೇಲೆ ಹೊತ್ತು ಕೊಳ್ಳಬೇಕಾಯಿತು. ಈಗಲೂ ಅದೇ ರೀತಿ ವಾತಾವರಣ ಸೃಷ್ಟಯಾಗಿದೆ” ಎಂದು ಕುಮಾರಸ್ವಾಮಿ ಭಾವುಕರಾದರು.
ಈ ವೇಳೆ, ‘ನಾನು ಜೆಡಿಎಸ್ ಅಧ್ಯಕ್ಷನಾಗಿದ್ದ ವೇಳೆ 59 ಸೀಟ್ ಬಂದಿದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ಡಿಕೆ, ”59 ಸೀಟ್ ಪಡೆಯಲು ಯಾರ ಕೊಡುಗೆ ಎಷ್ಟು ಎಂಬುದು ಗೊತ್ತು. ಈ ಬಾರಿ ಚುನಾವಣೆಯಲ್ಲಿ 59 ಸೀಟ್ ಕ್ರಾಸ್ ಮಾಡುತ್ತೇನೆ. ಒಬ್ಬನೇ ಹೋರಾಟ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಗೆಲ್ಲುತ್ತೇನೆ” ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಕೆಎಂಎಫ್ ಮುಳುಗಿಸುವ ಹುನ್ನಾರ: ಅಮುಲ್ ಆಗಮನಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ
ಪತ್ನಿ ಭವಾನಿಗೆ ಹಾಸನ ಟಿಕೆಟ್ ನೀಡಬೇಕು- ರೇವಣ್ಣ ಪಟ್ಟು
ಇತ್ತೀಚೆಗೆ ಎಚ್.ಡಿ. ರೇವಣ್ಣ ಅವರು ತಮ್ಮ ಆಪ್ತರೊಡನೆ ಸಮಾಲೋಚನೆ ಮಾಡುವ ವೇಳೆ, ಹಾಸನ ಟಿಕೆಟ್ ಗೊಂದಲ ಕಗ್ಗಂಟಾಗಿರುವ ಬಗ್ಗೆ ತೀವ್ರ ಬೇಸರ ಪಟ್ಟುಕೊಂಡಿದ್ದಾರೆ. ಹಾಸನದಲ್ಲಿ ಭವಾನಿಯವರಿಗೆ ಟಿಕೆಟ್ ಕೊಡಬೇಕು ಎಂದು ನಾನು ಪಟ್ಟು ಹಿಡಿದು ಕೇಳುವಂಥ ಪರಿಸ್ಥಿತಿ ಬಂದೊಂದಗಿದೆ. ಒಂದು ವೇಳೆ, ಹಾಸನದಲ್ಲಿ ಭವಾನಿಯವರಿಗೆ ಟಿಕೆಟ್ ನೀಡದೇ ಹೋದರೆ, ನನಗೂ ಟಿಕೆಟ್ ಬೇಡ. ನಾನೂ ಸಹ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
”ಹಾಸನ ಕ್ಷೇತ್ರದಲ್ಲಿ ಬಿಜೆಪಿಯನ್ನು ಎದುರಿಸಲು ಪ್ರಬಲ ಅಭ್ಯರ್ಥಿ ಅಗತ್ಯ. ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿ ಸಿದರೆ ಗೆಲುವು ಸಾಧ್ಯವಿಲ್ಲ. ಮತ್ತೆ ಕ್ಷೇತ್ರ ಕೈತಪ್ಪಿದರೆ, ಕಾರ್ಯಕರ್ತರು ಅನಾಥಪ್ರಜ್ಞೆ ಅನುಭವಿಸಬೇಕಾಗುತ್ತದೆ. ಈ ಬಾರಿ ಏನಾದರೂ ಆಗಲಿ, ಪಕ್ಷ ಗೆಲ್ಲಬೇಕು” ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.
”ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಹೊಳೆನರಸೀಪುರದಲ್ಲಿ ಗೆದ್ದು ಏನು ಮಾಡುವುದು? ನನಗೂ ಅಲ್ಲಿನ ಟಿಕೆಟ್ ಬೇಡ. ಈ ಬಗ್ಗೆ ದೇವೇಗೌಡರಿಗೆ ಸಂದೇಶ ರವಾನಿಸುವೆ” ಎಂದು ಮುಖಂಡರಿಗೆ ರೇವಣ್ಣ ತಿಳಿಸಿದ್ದಾರೆ.
”ಹಿರಿಯ ಸಹೋದರ ಬಾಲಕೃಷ್ಣೇ ಗೌಡ ಸೇರಿದಂತೆ ದೇವೇಗೌಡರ ಆಪ್ತರ ಮೂಲಕ ಈ ಸಂದೇಶವನ್ನು ದೇವೇಗೌಡರಿಗೆ ರವಾನಿಸಿದ್ದರು.”
ಈ ಕುರಿತು ದೇವೇಗೌಡರೂ ರೇವಣ್ಣ ಜೊತೆಗೆ ಚರ್ಚಿಸಿದ್ದು, ಗೊಂದಲಕ್ಕೆ ಅವಕಾಶ ವಿಲ್ಲದಂತೆ ಚರ್ಚಿಸಿ ತೀರ್ಮಾನಿಸಲಾಗುವುದು. ಆತುರದ ನಿರ್ಧಾರ ಕೈಗೊಳ್ಳ ಬಾರದೆಂದು ತಾಕೀತು ಮಾಡಿದ್ದರು.
ಭವಾನಿ ಅವರು ಪಟ್ಟು ಸಡಿಲಿಸುತ್ತಿಲ್ಲ. ಪುತ್ರರು ಕೂಡ ತಾಯಿಯನ್ನು ಹಾಸನದಿಂದ ಕಣಕ್ಕಿಳಿಸಲೇಬೇಕೆಂದು ಹಟ ತೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೊನೆಯ ಅಸ್ತ್ರವಾಗಿ ”ನನಗೆ ಹೊಳೆನರಸೀಪುರ ಟಿಕೆಟ್ ಬೇಡ” ಎಂಬ ದಾಳವನ್ನು ರೇವಣ್ಣ ಉರುಳಿಸಿದ್ದರು ಎಂದು ಹೇಳಲಾಗಿತ್ತು.
As if it’s dynastic politics.