ತುಮಕೂರು: ನಗರದ ಸಪ್ತಗಿರಿ ಬಡಾವಣೆಯ ನಿವಾಸಿ, ಗುತ್ತಿಗೆದಾರ ಟಿ.ಎನ್. ಪ್ರಸಾದ್ ತಾಲ್ಲೂಕಿನ ದೇವರಾಯನದುರ್ಗದ ಅತಿಥಿ ಗೃಹದಲ್ಲಿ ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸರ್ಕಾರವೇ ಕಾರಣವೆಂದು ಪ್ರತಿಪಕ್ಷ ಕಾಂಗ್ರೆಸ್ ದೂರಿದೆ.
ಮೃತ ಗುತ್ತಿಗೆದಾರನನ್ನು ತುಮಕೂರು ನಗರದ ಸಪ್ತಗಿರಿ ಬಡಾವಣೆ ಮೂಲದ ಟಿ.ಎನ್. ಪ್ರಸಾದ್ (50) ಎಂದು ಗುರುತಿಸಲಾಗಿದೆ. ಪಿಡಬ್ಲ್ಯೂಡಿ ಇಲಾಖೆಯ ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಟಿ.ಎನ್. ಪ್ರಸಾದ್, ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಮೃತ ದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು.
ಘಟನೆ ಕುರಿತು ಮಾತನಾಡಿರುವ ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮ್, “ಮೃತ ಟಿ.ಎನ್.ಪುಸಾದ್ ಸಾಲದ ಸುಳಿಯಲ್ಲಿ ಸಿಲುಕಿದ್ದರು, ಸಾಲದ ಒತ್ತಡ ಜಾಸ್ತಿಯಾಗಿದ್ದು, ಕೆಲಸ ನಿರ್ವಹಿಸಿದ್ದ ಬಿಲ್ ಗಳು ಸಹ ಪಾವತಿ ಆಗಿರಲಿಲ್ಲ. ಅಲ್ಲದೆ, ಇತ್ತೀಚೆಗೆ ತಾನು ವಾಸವಾಗಿದ್ದ ಮನೆಯನ್ನು ಸಹ ಮಾರಾಟ ಮಾಡಿದ್ದಾರೆ. ರಾಜ್ಯದ ಭ್ರಷ್ಟ ಆಡಳಿತ ಹಾಗೂ ರಾಜಕಾರಣಿಗಳ ವ್ಯವಸ್ಥೆ ಈ ಸಾವಿಗೆ ಕಾರಣ” ಎಂದು ದೂರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಭ್ರಷ್ಟ ಬಿಜೆಪಿಯ 40% ಕಮಿಷನ್ ಲೂಟಿಗೆ ಮತ್ತೊಂದು ಬಲಿಯಾಗಿದೆ. ಸಾಲ ಮಾಡಿ ಕಾಮಗಾರಿಗೆ ಹಣ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಅಮಿತ್ ಷಾ ಅವರೇ, ರಾಜ್ಯದ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವ, 40% ಕಮಿಷನ್ ವಿರುದ್ದ ಕ್ರಮ ಕೈಗೊಳ್ಳುವ ದಮ್ಮು, ತಾಕತ್ತು ಇದೆಯೇ?” ಎಂದು ಪ್ರಶ್ನಿಸಿದೆ.
ಭ್ರಷ್ಟ ಬಿಜೆಪಿಯ 40% ಕಮಿಷನ್ ಲೂಟಿಗೆ ಮತ್ತೊಂದು ಬಲಿ.
ಸಾಲ ಮಾಡಿ ಕಾಮಗಾರಿಗೆ ಹಣ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಭ್ರಷ್ಟ @BJP4Karnataka ಸರ್ಕಾರದ ಕಮಿಷನ್ ಕಿರುಕುಳಕ್ಕೆ ಬಲಿಯಾಗಿದ್ದಾರೆ.@AmitShah ಅವರೇ, ರಾಜ್ಯದ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವ, 40% ಕಮಿಷನ್ ವಿರುದ್ದ ಕ್ರಮ ಕೈಗೊಳ್ಳುವ ದಮ್ಮು, ತಾಕತ್ತು ಇದೆಯೇ? pic.twitter.com/EyNFkOu5Lc
— Karnataka Congress (@INCKarnataka) December 30, 2022
“ಬಿಜೆಪಿ ಸರ್ಕಾರದಲ್ಲಿ ಆರೋಪಿಗಳಿಗೆ ಶ್ರೀರಕ್ಷೆ, ಆರೋಪಿಸಿದವರಿಗೆ ಶಿಕ್ಷೆ! 40% ಕಮಿಷನ್ ಕಿರುಕುಳ ತಾಳಲಾರದೆ ಬಹಿರಂಗ ವೇದಿಕೆಗೆ ಬಂದು ಆರೋಪ ಮಾಡಿದ ಗುತ್ತಿಗೆದಾರರನ್ನು ಬಂಧಿಸಿದ ಸರ್ಕಾರ ಆರೋಪದ ಬಗ್ಗೆ ಸಣ್ಣ ತನಿಖೆಗೂ ವಹಿಸದ ಸಿಎಂ ಬೊಮ್ಮಾಯಿಯವರೇ, ಗುತ್ತಿಗೆದಾರರ ಸಾವುಗಳಿಗೆ ನೇರ ಹೊಣೆ. ಜೊತೆಗೆ ಬೇಜವಾಬ್ದಾರಿ ಪ್ರಧಾನಿ ಕೂಡ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಟಿ.ಎನ್. ಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಮಾಡಿರುವ ವರದಿಯಲ್ಲಿ, “ಡೆತ್ ನೋಟ್ ಸಿಕ್ಕಿದೆ. ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಅದರಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ತಿಳಿಸಲಾಗಿದೆ.
“ಗುತ್ತಿಗೆ ನಿರ್ವಹಿಸಿದ್ದಕ್ಕೆ ಸರ್ಕಾರದಿಂದ ಬಾಕಿ ಹಣ ಬರಬೇಕಿತ್ತು ಎಂಬ ಬಗ್ಗೆ ಕುಟುಂಬದವರು ದೂರು ನೀಡಿಲ್ಲ. ಅಂತಹ ಆರೋಪ ಕೇಳಿಬಂದಿಲ್ಲ” ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪೂರವಾಡ್ ಹೇಳಿದ್ದಾರೆ.
ಈ ಕುರಿತು ವರದಿ ಮಾಡಿರುವ ‘ವಿಜಯವಾಣಿ’ ಸುದ್ದಿಜಾಲತಾಣ, “ದೇವರಾಯನದುರ್ಗ ಪುವಾಸಿ ಮಂದಿರದ ರಿಪೇರಿ ಕಾಮಗಾರಿಯ ತುಂಡು ಗುತ್ತಿಗೆ ಪಡೆದಿದ್ದ ಕೊರಟಗೆರೆ ತಾಲೂಕು ತೊಗರಿಘಟ್ಟ ಮೂಲಕ ಟಿ.ಎನ್.ಪುಸಾದ್ ಕಳೆದ ಜುಲೈ ತಿಂಗಳಿನಲ್ಲಿಯೇ ಕಾಮಗಾರಿ ಮುಗಿಸಿ ಬಿಲ್ಗಾಗಿ ಲೋಕೋಪಯೋಗಿ ಇಲಾಖೆಗೆ ನಿರಂತರವಾಗಿ ಅಲೆದಾಡುತ್ತಿದ್ದರು ಎನ್ನಲಾಗಿದೆ. ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪರದಾಡಿಕೊಂಡು ಕಾಮಗಾರಿ ಮುಗಿಸಿದ್ದರೂ ಬಿಲ್ ಮಾಡಿಕೊಡಲು ಇಂಜಿನಿಯರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗುತ್ತಿಗೆದಾರರ ಸಂಘ ಆರೋಪಿಸಿದ್ದು, ಈ ಬಗ್ಗೆ ತನಿಖೆಗೂ ಆಗ್ರಹಿಸಿದೆ. ಆತ್ಮಹತ್ಯೆ ಮಾಡಿಕೊಂಡ ನಂತರ ಹಳೆಯ ದಿನಾಂಕಕ್ಕೆ ಬಿಲ್ ನೀಡಲಾಗಿರುವ ದಾಖಲೆಗಳನ್ನು ಸೃಷ್ಟಿಸಲಾಗಿದೆ” ಎಂದಿದೆ.
ಅನುಕಂಪದ ಮತದಾನಕ್ಕೆ ಕಾಯೋದು