HomeಮುಖಪುಟExplained : 370ನೇ ವಿಧಿ ರದ್ದು; 1947ರಿಂದ ಇದುವರೆಗೆ ನಡೆದಿದ್ದೇನು?

Explained : 370ನೇ ವಿಧಿ ರದ್ದು; 1947ರಿಂದ ಇದುವರೆಗೆ ನಡೆದಿದ್ದೇನು?

- Advertisement -
- Advertisement -

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಇಂದು (ಡಿ.11) ಎತ್ತಿ ಹಿಡಿದಿದೆ. ಆಗಸ್ಟ್‌ 5, 2019ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತ್ತು. ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು.

ಜಮ್ಮು-ಕಾಶ್ಮೀರವನ್ನು ಆಳ್ವಿಕೆ ಮಾಡುತ್ತಿದ್ದ ಮಹಾರಾಜ ಹರಿಸಿಂಗ್ ಮತ್ತು ಭಾರತ ಸರ್ಕಾರ ಸಹಿ ಹಾಕಿದ 1947ರ ಒಪ್ಪದಂತೆ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಇದು ಜಮ್ಮು ಕಾಶ್ಮೀರವನ್ನು ಭಾರತ ರಾಜ್ಯವಾಗಿ ಪರಿಗಣಿಸಿತ್ತು. ಆದರೆ, ಅಲ್ಲಿನ ಭದ್ರತೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕದ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮಿತಿಗಳನ್ನು ವಿಧಿಸಿತ್ತು.

370ನೇ ವಿಧಿಯಡಿ ನವೆಂಬರ್‌ 17, 1952ರಿಂದ 31 ಅಕ್ಟೋಬರ್ 2019ರವರೆಗೆ ಜಮ್ಮು-ಕಾಶ್ಮೀರ ಭಾರತದ ರಾಜ್ಯವಾಗಿತ್ತು. ಆದರೆ, ಅಲ್ಲಿನ ಆಂತರಿಕ ವ್ಯವಹಾರದಲ್ಲಿ ವಿಶೇಷ ನಿಯಮವಿತ್ತು. ಜಮ್ಮು-ಕಾಶ್ಮೀರ ತನ್ನದೇ ಆದ ವಿಶೇಷ ಸಂವಿಧಾನ ಮತ್ತು ರಾಜ್ಯ ಧ್ವಜ ಹೊಂದಿತ್ತು. ಸಂವಿಧಾನ ವಿಧಿ XXIರಡಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನವನ್ನು ‘ತಾತ್ಕಾಲಿಕ, ಪರಿವರ್ತಿತ ಮತ್ತು ವಿಶೇಷ ನಿಬಂಧನೆಗಳು’ ಎಂದು ಉಲ್ಲೇಖಿಸಲಾಗಿತ್ತು. ಇದು ಜಮ್ಮು ಕಾಶ್ಮೀರದ ಚುನಾಯಿತ ವಿಧಾನಸಭೆಗೆ ಭಾರತದ ಸಂವಿಧಾನ ಜಮ್ಮು-ಕಾಶ್ಮೀರದಲ್ಲಿ ಎಷ್ಟು ಜಾರಿಗೊಳಿಸಬಹುದು ಎಂದು ಮಿತಿ ಹೇರುವ ಅಧಿಕಾರಿ ನೀಡಿತ್ತು.

ರಾಷ್ಟ್ರಪತಿ ಆಳ್ವಿಕೆ 2019

ಆಗಸ್ಟ್‌ 5,2019ರಲ್ಲಿ ಸಂವಿಧಾನ 370ನೇ ವಿಧಿ ರದ್ದುಗೊಳಿಸುವ ಪ್ರಸ್ತಾಪ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕಾರಗೊಂಡಿತ್ತು. ಆ ಬಳಿಕ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಭಾರತೀಯ ಸಂವಿಧಾನದ ಎಲ್ಲಾ ವಿಧಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುತ್ತದೆ ಎಂದು ಘೋಷಣೆ ಮಾಡಿತ್ತು. ಇದೇ ವೇಳೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಜಮ್ಮು-ಕಾಶ್ಮೀರವನ್ನು ಕೇಂದ್ರ ಸರ್ಕಾರ ವಿಂಗಡನೆ ಮಾಡಿತ್ತು. ಇದು 2019, ಅಕ್ಟೋಬರ್ 31ರಿಂದ ಜಾರಿಗೆ ಬಂದಿತ್ತು.

370ನೇ ವಿಧಿ ರದ್ದತಿಯ ಪರಿಣಾಮಗಳೇನು?

370ನೇ ವಿಧಿ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಇಡೀ ರಾಜ್ಯ ಸಂಪೂರ್ಣ ಅಭಿವೃದ್ದಿ ಪತದತ್ತ ದಾಪುಗಾಲಿಡುತ್ತಿದೆ. ಅಲ್ಲಿನ ಜನರಿಗೆ ಭಾರತದ ಇತರ ರಾಜ್ಯಗಳ ಜನರಿಗೆ ದೊರೆತಂತೆ ಸಂವಿಧಾನದಡಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಇತರ ರಾಜ್ಯಗಳ ಜನರು ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಮಾಡುವ ಮೂಲಕ ಅಲ್ಲಿನ ಆರ್ಥಿಕ, ಸಾಮಾಜಿಕ ಬೆಳವಣಿಗೆ ಆಗಿದೆ. ಜನರಿಗೆ ಉದ್ಯೋಗ ದೊರೆತಿದೆ. ಉತ್ಪಾದನೆ ಹೆಚ್ಚಾಗಿದೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ.

ಫೆಬ್ರವರಿ 3, 2021ರಂದು ರಾಜ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರಿಸಿದ ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಬಳಿಕ ಸಂಪೂರ್ಣ ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆ. ಬ್ಲಾಕ್ ಅಭಿವೃದ್ದಿ ನಿಗಮ, ಜಿಲ್ಲಾ ಅಭಿವೃದ್ದಿ ನಿಗಮ, ಪಂಚ್‌ಗಳು ಮತ್ತು ಸರ್‌ಪಂಚ್‌ಗಳು ( ಗ್ರಾಮ ಪಂಚಾಯತ್‌) ಸೇರಿದಂತೆ ಪಂಚಾಯತ್ ರಾಜ್‌ನ ಎಲ್ಲಾ ಸ್ಥಳೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಏನಿದು 370ನೇ ವಿಧಿ?

ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ ಅಸ್ತಿತ್ವದಲ್ಲಿತ್ತು. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿತ್ತು. ಈ ಸಂವಿಧಾನದ 1ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿತ್ತು. ಉಳಿದೆಲ್ಲಾ ವಿಧಿಗಳು 1957ರ ಜನವರಿ 26ರಂದು ಜಾರಿಗೆ ಬಂದಿತ್ತು.

ಜಮ್ಮು-ಕಾಶ್ಮೀರದ ಸಂವಿಧಾನವನ್ನು ದೇಶದಲ್ಲಿ ಜಾರಿಯಲ್ಲಿದ್ದ ಎರಡನೇ ಸಂವಿಧಾನ ಎಂದು ಹೇಳಲಾಗುತ್ತಿತ್ತು. ಸಂವಿಧಾನ ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಾಗಿತ್ತು. ಈ ಸಂವಿಧಾನ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತಿತ್ತು. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿತ್ತು.

35–ಎ ಕಲಂ ಏನು ಹೇಳುತ್ತದೆ?

370ನೇ ವಿಧಿಯಡಿ ಇದ್ದ 35–ಎ ಕಲಂ ಅನ್ನು ಕೂಡ ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದು ಜಮ್ಮು-ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35–ಎ ಕಲಂ ಪ್ರಕಾರ, ಜಮ್ಮು-ಕಾಶ್ಮಿರದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರ ರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ದೊರೆಯುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪು: 

ನಾಲ್ಕು ವರ್ಷಗಳ ಹಿಂದೆ 370ನೇ ವಿಧಿ ರದ್ದು ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಕೇಂದ್ರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಇಂದು ತೀರ್ಪು ನೀಡಿದೆ.

ಐವರು ನ್ಯಾಯಮೂರ್ತಿಗಳಾದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರು 16 ದಿನಗಳ ಕಾಲ ಅರ್ಜಿದಾರರು ಮತ್ತು ಕೇಂದ್ರದ ವಾದವನ್ನು ಆಲಿಸಿದ್ದರು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ಈ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರದ ಒಪ್ಪಿಗೆಯೊಂದಿಗೆ ಸಂವಿಧಾನದ ಎಲ್ಲ ನಿಬಂಧನೆಗಳನ್ನು ರಾಷ್ಟ್ರಪತಿಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಬಹುದಿತ್ತು. ರಾಜ್ಯ ವಿಧಾನಸಭೆಯ ಒಪ್ಪಿಗೆಯನ್ನೂ ಪಡೆಯುವ ಅಗತ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಚುನಾವಣೆ ನಡೆಸಲು ಆದೇಶ:

ತೀರ್ಪು ಪ್ರಕಟಿಸುವ ವೇಳೆ ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶ:

ಈ ನಡುವೆ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಜಮ್ಮು ಕಾಶ್ಮೀರದಿಂದ ಬೇರ್ಪಡಿಸುವ ನಿರ್ಧಾರದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. “ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಬೇರ್ಪಡಿಸುವ ನಿರ್ಧಾರದ ಸಿಂಧುತ್ವವನ್ನು ನಾವು ಎತ್ತಿ ಹಿಡಿಯುತ್ತೇವೆ” ಎಂದು ಸಿಜೆಐ ಹೇಳಿದ್ದಾರೆ.

ಇದನ್ನೂ ಓದಿ : 370ನೇ ವಿಧಿ ರದ್ದು: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸುಪ್ರೀಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಕೆಟ್‌ ಕೈತಪ್ಪಿದಕ್ಕೆ ‘ಮತದಾನ’ ಮಾಡದ ಬಿಜೆಪಿ ಸಂಸದ: ಶೋಕಾಸ್ ನೋಟಿಸ್ ಜಾರಿ

0
ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಮತದಾನ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಎರಡು ದಿನಗಳಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜಾರ್ಖಂಡ್‌ನ...