ನೂರಕ್ಕಿಂತ ಹೆಚ್ಚಿದ್ದ ಮುಸುಕುದಾರಿ ಗುಂಪೊಂದು ಇಂದು ಮಧ್ಯಾಹ್ನ ಏಕಾಏಕಿ ಸಿಂಘು ಗಡಿಯ ಒಂದು ಬದಿಯಲ್ಲಿ (ದೆಹಲಿ ಕಡೆಗೆ) ಪ್ರತಿಭಟನೆ ನಡೆಸುತ್ತಿದ್ದ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ರೈತರ ಕಡೆಗೆ ನುಗ್ಗಿ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ, ರೈತರ ಹಲವು ಟೆಂಟುಗಳನ್ನು ಧ್ವಂಸಗೊಳಿಸಿದೆ. ಇದಕ್ಕೆ ಅಲ್ಲಿನ ರೈತ ಪ್ರತಿಭಟನಾಕಾರರೂ ಪ್ರತ್ಯುತ್ತರ ನೀಡಲು ಆರಂಭಿಸಿದ ಕೂಡಲೇ ಗುಂಪಿನೊಂದಿಗೆ ಘರ್ಷಣೆ ಆರಂಭವಾಗಿತು. ಇದರಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅದೇ ಸಿಂಘು ಗಡಿಯಲ್ಲಿ ಹರಿಯಾಣದ ಕಡೆಗೆ ಕಾಯ್ದೆ ವಿರೋಧಿಸಿ ಸಂಯುಕ್ತ್ ಕಿಸಾನ್ ಮೋರ್ಚಾ ಅಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿ ಯಾವುದೇ ದಾಳಿ ಆಗಿಲ್ಲ, ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಹೋರಾಟ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಬಿಗಿಭದ್ರತೆಯ ನಡುವೆಯೂ ಈ ಗುಂಪು ಹೇಗೆ ನುಗ್ಗಿತು ಎಂಬುದು ತಿಳಿದಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ. ಕೋಲು, ರಾಡುಗಳನ್ನು ಹೊಂದಿದ ಗುಂಪನ್ನು ತಡೆಯಲು ಪೊಲೀಸರು ವಿಫಲ ಯತ್ನ ನಡೆಸಿದರು.
ರೈತರು ಈ ಜಾಗ ಖಾಲಿ ಮಾಡಬೇಕೆಂದು ಅಗ್ರಹಿಸುತ್ತಿದ್ದ ದುಷ್ಕರ್ಮಿಗಳ ಗುಂಪು, ಅಲ್ಲಿನ ಟಾಯ್ಲೆಟ್, ವಾಶಿಂಗ್ ಮಶಿನ್ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ನಾಶ ಮಾಡಲು ಯತ್ನಿಸಿತು.
ಪೊಲೀಸರ ನೆರವು ಸಿಗದಾಗ ಕೆಲವು ರೈತರು ಕೂಡ ದುಷ್ಕರ್ಮಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಕೆಲ ಹೊತ್ತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು ಎನ್ನಲಾಗಿದೆ.. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ನುಗ್ಗಿದ ಈ ಗುಂಪು ಯಾರದು?
ಇಂಥದ್ದೇ ಸಂಘಟನೆಗೆ ಸೇರಿದ ಗುಂಪೆಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲವಾದರೂ, ನಿನ್ನೆ ಸ್ಥಳೀಯರ ಹೆಸರಲ್ಲಿ ಒಂದು ಸಣ್ಣ ಗುಂಪು ಪ್ರತಿಭಟನೆ ಮಾಡಿತ್ತು. ಬಹುಪಾಲು ಮಾಧ್ಯಮಗಳು ಸ್ಥಳೀಯರಿಂದ ಪ್ರತಿಭಟನೆ ಎಂದೇ ಬಿಂಬಿಸಿದ್ದವು.
ಅದರೆ, ಅಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್ನಲ್ಲಿ, ಹಿಂದೂ-ಸೇನಾ ಸಂಘಟನ್ನವರು ಆ ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಕೆಲವು ಸ್ಥಳಿಯರನ್ನು ಸೇರಿಸಿಕೊಂಡಿದ್ದರು. ತಮ್ಮದೇ ಸಂಘಟನೆ ಪ್ರತಿಭಟನೆ ನಡೆಸಿದೆ ಎಂದು ಹಿಂದೂ-ಸೇನಾ ಸಂಘಟಣ್ ಅಧ್ಯಕ್ಷ ಅಲ್ಟ್ ನ್ಯೂಸ್ ಎದುರು ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್ ಮಜ್ರಾ