Homeಮುಖಪುಟರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದವರೆಷ್ಟು?: ಇಲ್ಲಿದೆ ವಿವರ

ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದವರೆಷ್ಟು?: ಇಲ್ಲಿದೆ ವಿವರ

ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು! ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕಾನೂನುಗಳ ವಿರುದ್ಧ ನಾನು ರಾಜೀನಾಮೆ ನೀಡಿದ್ದೇನೆ- ಶಾಸಕ ಅಭಯ್ ಸಿಂಗ್ ಚೌಟಾಲ

- Advertisement -
- Advertisement -

ಲಕ್ಷಾಂತರ ರೈತರು ಕಳೆದ 2 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕುತಂತ್ರಗಳು ನಡೆಯುತ್ತಲೇ ಇವೆ. ಇದರ ನಡುವೆ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಿಜೆಪಿಯ ಶಾಸಕರು ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ. ಜೊತೆಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಮೈತ್ರಿಯಿಂದ ಹೊರಬಂದಿವೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

1. ಹರ್‌ಸಿಮ್ರತ್ ಕೌರ್ ಬಾದಲ್‌

ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳು ಅವರಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ರಾಷ್ಟ್ರಾದ್ಯಂತ ರೈತರು ವ್ಯಾಪಕ ಪ್ರತಿಭಟನೆ ನಡೆಸುತ್ತಿರುವುದರ ಬೆನ್ನಲ್ಲೇ ಈ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್‌ನ ಶಿರೋಮಣಿ ಅಕಾಲಿ ದಳ ಪಕ್ಷವು ಕಳೆದ ವರ್ಷವೇ ಎನ್‌ಡಿಎ ಮೈತ್ರಿಕೂಟ ತೊರೆದು ಹೊರನಡೆದಿತ್ತು.

ಅಕಾಲಿ ದಳವು ಎನ್‌ಡಿಎ ಮೈತ್ರಿಕೂಟದ ಹಳೆಯ ಗೆಳೆಯನಾಗಿತ್ತು. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ಅಂಗೀಕರಿಸಲು ಹೊರಟಾಗ ಮುಖ್ಯವಾಗಿ ಪಂಜಾಬ್ ರೈತರು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಅಕಾಲಿ ದಳದಿಂದ ಕೇಂದ್ರ ಆಹಾರ ಸಂಸ್ಕರಣ ಸಚಿವೆಯಾಗಿದ್ದ ಹರ್‌ಸಿಮ್ರತ್ ಕೌರ್ ಬಾದಲ್‌ರವರು ಮಸೂದೆಗಳನ್ನು ವಿರೋಧಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಹೆಚ್ಚುತ್ತಿರುವ ಬೆಂಬಲ – ಗಡಿಗಳಲ್ಲಿ ತೀವ್ರಗೊಳ್ಳುತ್ತಿರುವ ರೈತ ಹೋರಾಟ

2. ಹನುಮಾನ್ ಬೆನಿವಾಲ್

ರೈತರನ್ನು ಬೆಂಬಲಿಸಿ ಎನ್‌ಡಿಎ ಮಿತ್ರ ಪಕ್ಷ RLP ಸಂಸದ ಹನುಮಾನ್ ಬೆನಿವಾಲ್ ಮೂರು ಸಂಸದೀಯ ಸಮಿತಿಗಳಿಗೆ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದಿಂದ ರಾಜಸ್ಥಾನದ ನಾಗೂರ್‌ನ ಸಂಸದರಾದ ಹನುಮಾನ್ ಬೆನಿವಾಲ್ ಕಳೆದ ತಿಂಗಳು ತಮ್ಮ ರಾಜೀನಾಮೆಯನ್ನು ಸ್ವೀಕರ್ ಓಂ ಬಿರ್ಲಾರವರಿಗೆ ಸಲ್ಲಿಸಿದ್ದರು.

“ಸಂಸತ್ತಿನಲ್ಲಿ ನಾನು ಭಾಗವಾಗಿದ್ದ ಹಲವು ಸಮಿತಿಗಳಲ್ಲಿ ವಿವಿಧ ಜನ ಕೇಂದ್ರಿತ ಸಮಸ್ಯೆಗಳನ್ನು ಎತ್ತಿದ್ದೆ. ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕ್ರಮ ಕೈಗೊಳ್ಳದಿದ್ದರೆ ಸಂಸದೀಯ ಸಮಿತಿಗಳಲ್ಲಿ ಇದ್ದು ಏನು ಪ್ರಯೋಜನ? ಸಮಸ್ಯೆಗಳು ಬಗೆಹರಿಯದಿರುವುದು ಮತ್ತು ರೈತರ ಆಂದೋಲನಕ್ಕೆ ಬೆಂಬಲ ನೀಡಲು ನಾನು ಸಮಿತಿಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಹೇಳಿದ್ದರು. ಬೆನಿವಾಲ್ ಕೈಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಂಸದೀಯ ಸಮಿತಿಯ ಭಾಗವಾಗಿದ್ದರು.

ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು, ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದು, ಜಾಥಾಕ್ಕೆ ಸ್ವತಃ ಹನುಮಾನ್ ಬೆನಿವಾಲ್ ನೇತೃತ್ವ ನೀಡಿದ್ದರು.

ಅಮಿತ್ ಶಾ ಜೀ, ನಡೆಯುತ್ತಿರುವ ರೈತರ ಆಂದೋಲನಕ್ಕೆ ದೇಶದಾದ್ಯಂತ ವ್ಯಕ್ತವಾಗಿರುವ ಬೆಂಬಲವನ್ನ ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು. ಕೇಂದ್ರವು ಸ್ವಾಮಿನಾಥನ್ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಬೇಕು ಮತ್ತು ದೆಹಲಿಯಲ್ಲಿ ರೈತರೊಂದಿಗೆ ತಕ್ಷಣ ಸಂವಾದವನ್ನು ನಡೆಸಬೇಕು” ಎಂದು ಬೆನಿವಾಲ್ ಈ ಹಿಂದೆ ಹೇಳಿದ್ದರು.

“ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ)ಯು ಎನ್​ಡಿಎಯ ಘಟಕವಿರಬಹುದು. ಆದರೆ ಇದಕ್ಕೆ ಶಕ್ತಿ ಬಂದಿರುವುದು ರೈತರು ಮತ್ತು ಸೈನಿಕರಿಂದ. ಈ ವಿಚಾರದಲ್ಲಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಇದ್ದಲ್ಲಿ, ನಾವು ರೈತರ ಹಿತದೃಷ್ಟಿಯಿಂದಾಗಿ ಎನ್​ಡಿಯ ಜೊತೆಗಿನ ಸಹಭಾಗಿತ್ವದ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.

3. ಅಭಯ್ ಸಿಂಗ್ ಚೌಟಾಲ

ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕ್ ದಳ (ಐಎನ್‌ಎಲ್‌ಡಿ)ದ ಶಾಸಕ ಅಭಯ್ ಸಿಂಗ್ ಚೌಟಾಲ ರಾಜೀನಾಮೆ ನೀಡಿದ್ದು, ರೈತರನ್ನು ಬೆಂಬಲಿಸಿ ರಾಜೀನಾಮೆ ನೀಡುತ್ತಿರುವವರ ಸಾಲಿಗೆ ಇವರು ಹೊಸ ಸೇರ್ಪಡೆ.

ಈ ಕುರಿತು ಸ್ವತಃ ಶಾಸಕರೆ ಟ್ವೀಟ್ ಮಾಡಿದ್ದು, “ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು! ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕಾನೂನುಗಳ ವಿರುದ್ಧ ನಾನು ರಾಜೀನಾಮೆ ನೀಡಿದ್ದೇನೆ. ಪ್ರತಿಪಕ್ಷದಲ್ಲಿ ಕುಳಿತಿರುವ ಇತರ ಎಲ್ಲ ನಾಯಕರು ಮತ್ತು ರೈತರ ಮಕ್ಕಳು ಎನಿಸಿಕೊಂಡವರು ರೈತನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಟಿಕ್ರಿ ಗಡಿಯಲ್ಲಿ ಗೌರಿ ಮೀಡಿಯಾ ತಂಡಕ್ಕೆ ಪಿಸ್ತೂಲ್‌ ತೋರಿಸಿ ಹಲ್ಲೆ ನಡೆಸುವ ಬೆದರಿಕೆ!

4. ಹರಿಂದರ್ ಸಿಂಗ್ ಖಲ್ಸಾ

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಲೋಕಸಭೆಯ ಮಾಜಿ ಸಂಸದ ಹರಿಂದರ್ ಸಿಂಗ್ ಖಲ್ಸಾ ಇಂದು ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಮಾಜಿ ಲೋಕಸಭಾ ಸದಸ್ಯರಾದ ಹರಿಂದರ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಅವರ ಪತ್ನಿಯಂದಿರು, ಮಕ್ಕಳು ಅನುಭವಿಸುತ್ತಿರುವ ದುಃಖ-ದುಮ್ಮಾನಗಳ ಬಗ್ಗೆ ಪಕ್ಷದ ಮುಖಂಡರು ಹಾಗೂ ಸರಕಾರದ ನಿರ್ಲಕ್ಷ್ಯತೆಯ ಧೋರಣೆಯನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ವರದಿ ಮಾಡಿದೆ.

5. ಲಖ್ವಿಂದರ್ ಸಿಂಗ್ ಜಖರ್

ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಂಡೀಗಢದ ಕಾರಾಗೃಹಗಳ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡಿದ್ದ 56 ವರ್ಷದ ಲಖ್ವಿಂದರ್ ಸಿಂಗ್ ಜಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ, “ನಾನು ಮೊದಲು ರೈತ, ನಂತರ ಪೊಲೀಸ್ ಅಧಿಕಾರಿ. ಇಂದು ನನಗೆ ಯಾವುದೇ ಸ್ಥಾನ ಸಿಕ್ಕಿದ್ದರೂ, ಅದಕ್ಕೆ ಕಾರಣ ನನ್ನ ತಂದೆ ಹೊಲಗಳಲ್ಲಿ ಕೃಷಿಕರಾಗಿ ಕೆಲಸ ಮಾಡಿದ್ದು. ಕೃಷಿಯಿಂದಲೇ ಸಂಪಾದಿಸಿ ಅವರು ನನ್ನನ್ನು ವಿದ್ಯಾವಂತನಾಗಿಸಿದ್ದಾರೆ. ಆದ್ದರಿಂದ, ನನಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಕೃಷಿಗೆ ಋಣಿಯಾಗಿದ್ದೇನೆ” ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಹಿಂದಕ್ಕೆ ಹೆಜ್ಜೆ ಇಡಲೊಪ್ಪದ ರೈತರು: ಸ್ಥಳ ಖಾಲಿ ಮಾಡಿದ ಹೆಚ್ಚುವರಿ ಪೊಲೀಸರು!

6. ಸೋಂಬೀರ್ ಸಾಂಗ್ವಾನ್

ಹರಿಯಾಣ ಸ್ವತಂತ್ರ ಶಾಸಕ ಸೋಂಬೀರ್ ಸಾಂಗ್ವಾನ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯ ಜಾನುವಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಂಬೀರ್ ಸಾಂಗ್ವಾನ್ ಅವರು ಪಕ್ಷೇತರ ಶಾಸಕರಾಗಿದ್ದು, ಹರಿಯಾಣ ರಾಜ್ಯದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

7. ಮಲ್ವಿಂದರ್ ಸಿಂಗ್ ಕಂಗ್

ಎನ್‌ಡಿಎ ಸರ್ಕಾರದಿಂದ ಅಂಗೀಕರಿಸಲಾದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಬಿಜೆಪಿಯ ಕಾರ್ಯದರ್ಶಿ ಮಲ್ವಿಂದರ್ ಸಿಂಗ್ ಕಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ಮೇಲಿನ ತನ್ನ ಟ್ವೀಟ್‌‌ಗಳಿಗೆ ಕ್ಷಮೆ ಕೋರಲು ನಿರಾಕರಿಸಿದ ಹಾಸ್ಯ ನಟ ಕುನಾಲ್ ಕಮ್ರಾ

8. ಪರಮಿಂದರ್ ಧುಲ್

ಎರಡು ಬಾರಿ ಬಿಜೆಪಿ ಶಾಸಕರಾಗಿದ್ದ ಪರಮಿಂದರ್ ಧುಲ್ 2020 ರ ನವೆಂಬರ್‌ನಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಇವರು ಮುಂಬರುವ ಬರೋಡಾ ಉಪಚುನಾವಣೆಯಲ್ಲಿ ಬಿಜೆಪಿಯ ರೈತ ವಿರೋಧಿ ನೀತಿಗಳ ವಿರುದ್ಧ ಪ್ರಚಾರ ಮಾಡುವುದಾಗಿ ಹೇಳಿದ್ದರು.

9. ರಾಂಪಾಲ್ ಮಜ್ರಾ

ಹರಿಯಾಣ ಬಿಜೆಪಿ ಮುಖಂಡ ಮತ್ತು ಮಾಜಿ ಮುಖ್ಯ ಸಂಸದೀಯ ಕಾರ್ಯದರ್ಶಿ ರಾಂಪಾಲ್ ಮಜ್ರಾ ಅವರು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತು ರೈತ ಹೋರಾಟವನ್ನು ಬೆಂಬಲಿಸಿ ಗುರುವಾರ ಪಕ್ಷ ತೊರೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರೊಂದಿಗೆ ನಾನು ಸಂಪೂರ್ಣವಾಗಿ ನಿಲ್ಲುತ್ತೇನೆ. ಈ ಕಾನೂನುಗಳು ರೈತ ವಿರೋಧಿ ಮಾತ್ರವಲ್ಲ, ಜಾರಿಗೆ ಬಂದಾಗ ಸಮಾಜದ ಇತರ ವರ್ಗಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್…

ಬಿಜೆಪಿಯ ಒಳಗೆ ಮನೆಮಾಡಿರುವ ಅಸಮಾಧಾನ;

ರೈತರ ಆಂದೋಲನಕ್ಕೆ ಶೀಘ್ರ ಅಂತ್ಯವಂತೂ ಕಾಣುತ್ತಿಲ್ಲ. ಸರ್ಕಾರದೊಂದಿಗಿನ ಮಾತುಕತೆ ಸ್ಥಗಿತಗೊಂಡಿದ್ದರಿಂದ, ಪಂಜಾಬ್ ಬಿಜೆಪಿಯ ಉನ್ನತ ನಾಯಕರಲ್ಲಿಯೂ ಅಸಮಾಧಾನ ಹೆಚ್ಚುತ್ತಿದೆ. ಹಿರಿಯ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಕಾಂತಾ ಚಾವ್ಲಾ “ಆಂದೋಲನ ಇಷ್ಟು ದಿನ ನಡೆಯಲು ಅವಕಾಶ ನೀಡಬಾರದಿತ್ತು ಮತ್ತು ಪ್ರಧಾನಿ ಅವರು ಬಯಸಿದ್ದರೆ ಒಂದು ದಿನದಲ್ಲಿ ಪರಿಸ್ಥಿತಿಯನ್ನು ಪರಿಹರಿಸಬಹುದು” ಎಂದು ಹೇಳಿದ್ದಾರೆ.

ಫೆಬ್ರವರಿ 15 ರಂದು ಪುರಸಭೆ ಚುನಾವಣೆಗಳು ನಡೆಯಲಿದ್ದು, ಕೃಷಿ ಕಾಯ್ದೆಗಳ ಕುರಿತಾದ ಕೇಂದ್ರದ ನಿಲುವಿಗೆ ಪಂಜಾಬ್ ಬಿಜೆಪಿಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಅಸಮಾಧಾನ ಭುಗಿಲೇಳುತ್ತಿದೆ. ಇದು ಅಲ್ಲಿನ ಬಿಜೆಪಿಯಲ್ಲಿ ಆತಂಕ ಮೂಡಿಸಿದೆ. ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆಯಬಹುದೆಂದು ಪಂಜಾಬ್ ಬಿಜೆಪಿಯ ಹಲವು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಪ್ರತಿಭಟನೆ ನಡೆಯುತ್ತಿದ್ದರೂ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ರೈತರು “ಜಗತ್ತಿಗೆ ಒಂದು ಮಾದರಿಯನ್ನು ನೀಡಿದ್ದಾರೆ” ಎಂದು ಬಿಜೆಪಿ ನಾಯಕಿ ಲಕ್ಷ್ಮೀ ಕಾಂತಾ ಚಾವ್ಲಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಮಾಲ್ವಾ ಮೂಲದ ಬಿಜೆಪಿ ನಾಯಕರೊಬ್ಬರು ಪ್ರತಿಭಟನೆಯ ನಿಜವಾದ ಚಿತ್ರಣವನ್ನು ದೆಹಲಿ ನಾಯಕತ್ವಕ್ಕೆ ಪ್ರಸ್ತುತಪಡಿಸಲು ರಾಜ್ಯ ಘಟಕ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯ ಹೊರತಾಗಿಯೂ ಸಂಸತ್ತಿನಲ್ಲಿ ಕೃಷಿ ಸುಗ್ರೀವಾಜ್ಞೆಗಳನ್ನು ಅಂಗೀಕರಿಸಲಾಯಿತು. ನಂತರ, ಅಕಾಲಿ ದಳವು ನಮ್ಮೊಂದಿಗಿನ 27 ವರ್ಷಗಳ ಮೈತ್ರಿಯನ್ನು ಮುರಿದುಕೊಂಡಿತು. ಆಗಲೂ ನಮ್ಮ ಪಕ್ಷವು ಎಚ್ಚರಗೊಳ್ಳಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ರೈತರು ರೈಲ್ ರೋಕೊ ಮತ್ತು ಅನಿರ್ದಿಷ್ಟ ಪ್ರತಿಭಟನೆಗಳನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಿದರೂ, ಕೇಂದ್ರ ಸಚಿವರೊಂದಿಗೆ ಮೊದಲ ಸಭೆಯನ್ನು ತುಂಬ ತಡವಾಗಿ ಏರ್ಪಡಿಸಲಾಯಿತು. ರೈತರು ದೆಹಲಿ ಗಡಿಗಳಿಗೆ ತಲುಪಿದಾಗಿನಿಂದ ಹನ್ನೊಂದು ಸುತ್ತಿನ ಸಭೆಗಳು ನಡೆದಿವೆ, ಆದರೆ ಯಾವುದೇ ಪ್ರಗತಿಯಿಲ್ಲ” ಎಂದು ಬಿಜೆಪಿ ನಾಯಕ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮನೆ ಮುಂದೆ ನೆರೆದ ಜನಸಂದಣಿ: ರಾತ್ರಿಯೇ ದೆಹಲಿಗೆ ಮೆರವಣಿಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...