ಕೇಂದ್ರದ ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ದೆಹಲಿಯ ಮೂರು ಗಡಿಗಳಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಶಾಂತಿಯುತವಾಗಿ ನಡೆಯುತ್ತ ಬಂದಿರುವ ರೈತ ಪ್ರತಿಭಟನೆಯನ್ನು ಸಂಪೂರ್ಣ ಹಾಳುಗೆಡವಲು ಕೇಂದ್ರ ಸರ್ಕಾರವು ಮೊದಲಿನಿಂದಲು ಸಂಚು ಮಾಡುತ್ತ ಬಂದಿದೆ. ಈಗ ಅದು ದೆಹಲಿಯ ಕೆಂಪುಕೋಟೆಯ ಅಹಿತಕರ ಘಟನೆ ನೆಪವಾಗಿ ಇಟ್ಟುಕೊಂಡು ಅರೆಸೇನಾಪಡೆಗಳು, ಪೊಲೀಸರ ಬಲ ಬಳಸಿ ರೈತರ ಮೆಲೆ ಮುಗಿಬೀಳಲು ಹೊರಟಿದೆ.
ಸಂಕ್ಷಿಪ್ತವಾಗಿ ಈ ಸಂಚಿನ ಕ್ರೊನೊಲಜಿ ಹೀಗಿದೆ.
* ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟಿಸಲು ಹೊರಟಾಗ, ಹೆದ್ದಾರಿಗಳಲ್ಲಿ ಕಂದಕ ತೋಡಲಾಗಿತು. ಬ್ಯಾರಿಕೇಡ್ಗಳನ್ನು ನಿರ್ಮಿಸಿ ಅಡ್ಡ ಹಾಕಲಾಯಿತು. ಜಲಫಿರಂಗಿ, ಆಶ್ರುವಾಯು, ಲಾಠಿ ಚಾರ್ಜ್ ಮೂಲಕ ದೌರ್ಜನ್ಯ ನಡೆಸಿತು.
* ಎಲ್ಲವನ್ನೂ ಭೇದಿಸಿ ರೈತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ದೆಹಲಿಯ ಸಮೀಪ ಧಾವಿಸುತ್ತಿದ್ದಂತೆ, ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್ ಹೆಸರಿನ ಗೋಡೆಗಳನ್ನು ನಿರ್ಮಿಸಿ ದೆಹಲಿ ಪ್ರವೇಶವನ್ನು ನಿರಾಕರಿಸಿತು.
* ವಿಚಲಿತರಾಗದ ರೈತ ಸಂಘಟನೆಗಳು ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲೇ ಕುಳಿತು ಪ್ರತಿಭಟನೆಗಳನ್ನು ಹಮ್ಮಿಕೊಂಡವು. ದಿನೇ ದಿನೆ ಈ ಹೋರಾಟಕ್ಕೆ ಸಾಮನ್ಯ ನಾಗರಿಕರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಮಾತುಕತೆಯ ನಾಟಕ ಶುರು ಮಾಡಿತು.
* ಪ್ರತಿ ಮಾತುಕತೆಯಲ್ಲೂ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ಹೇಳುವ ಮೂಲಕ ರೈತರನ್ನು ರೊಚ್ಚಿಗೆಬ್ಬಿಸಲು ನೊಡಿತು.
* ಆದರೆ ರೈತರು ಶಾಂತಿ ಕಾಪಾಡಿಕೊಂಡೇ ಬಂದರು. ಗಡಿಗಳಲ್ಲೇ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಹಲವಾರು ಜನ ಶೀತ ವಾತಾವರಣಕ್ಕೆ ನಲುಗಿ ಪ್ರಾಣ ಬಿಟ್ಟರು. ಅಷ್ಟೊತ್ತಿಗೆ ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಕಳಂಕ ಹಚ್ಚುವ ಕೆಲಸ ಶುರು ಮಾಡಿತ್ತು. ಇದಕ್ಕೆ ಗೋದಿ ಮೀಡಿಯಾಗಳು, ಬಿಜೆಪಿ ಐಟಿ ಸೆಲ್ ಮತ್ತು ಮೋದಿಯ ಅಂಧಭಕ್ತರಾದ ನವ-ಮಧ್ಯಮವರ್ಗ ಸಾಥ್ ನೀಡಿದವು. ರೈತರನ್ನು ಭಯೋತ್ಪಾದಕರು, ಖಾಲಿಸ್ತಾನಿಗಳು, ದೇಶದ್ರೋಹಿಗಳು ಎಂದು ಅಪಪ್ರಚಾರ ಮಾಡುವ ಅಸಹ್ಯ ಅಭಿಯಾನ ನಡೆಯಿತು, ಅದು ಈಗಲೂ ಚಾಲ್ತಿಯಲ್ಲಿದೆ.
* ಇದ್ಯಾವುದೂ ರೈತ ಹೋರಾಟವನ್ನು ವಿಚಲಿತಗೊಲಿಸಲಿಲ್ಲ ಮತ್ತು ಹೋರಾಟಕ್ಕೆ ಜನರ ಬೆಂಬಲವು ಹೆಚ್ಚುತ್ತಲೇ ಹೋಗಿತು.
* 9 ಸುತ್ತು ಮತುಕತೆಗಳ ನಾಟಕದ ಬಳಿಕ, ಸುಪ್ರಿಂಕೋರ್ಟ್ ಅಂಗಳಕ್ಕೆ ಚೆಂಡನ್ನು ದಬ್ಬಿ ತನ್ನ ಪರ ಆದೇಶ ನಿರೀಕ್ಷೆ ಮಾಡಿತು. ಆದರೆ ಸುಪ್ರಿಂಕೋರ್ಟ್ ಕಾಯ್ದೆಗಳನ್ನು 8 ವಾರ ಅಮಾನತ್ತಿನಲ್ಲಿಡಲು ಸೂಚಿಸಿ, 4 ಜನರ ಸಮಿತಿಯನ್ನು ಸಮಾಲೋಚನೆಗೆ ನೇಮಿಸಿತು. ಕೇಂದ್ರ ಸೂಚಿಸಿದ ಈ ನಾಲ್ವರೂ ಕಾಯ್ದೆ ಪರ ಬ್ಯಾಟಿಂಗ್ ಮಾಡಿದವರೇ ಆಗಿದ್ದರಿಂದ ರೈತರು ಮಾತುಕತೆಗೆ ಒಪ್ಪಲಿಲ್ಲ.
* 10 ಮತ್ತು 11 ಸುತ್ತಿನಲ್ಲಿ, ವಿದ್ಯುತ್ ಕಾಯ್ದೆ ಮತ್ತು ತ್ಯಾಜ್ಯ ಸುಡುವ ಕಾಯ್ದೆ ಕೈ ಬಿಡಲು ಕೇಂದ್ರ ಒಪ್ಪಿತು. ಅಂತಿಮವಾಗಿ 18 ತಿಂಗಳುಗಳ ಕಾಲ ಕಾಯ್ದೆಗಳನ್ನು ಅಮಾನತಿನಲ್ಲಿಡುವ ಮಾತಾಡಿತು.
* ಸರ್ಕಾರದ ಈ ಹುನ್ನಾರ ಸ್ಪಷ್ಟವಾಗುತ್ತಿದ್ದಂತೆ, ರೈತ ಸಂಘಟನೆಗಳು ಜನವರಿ 26ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸುವ ತೀರ್ಮಾನಕ್ಕೆ ಗಟ್ಟಿಯಾಗಿ ಅಂಟಿಕೊಂಡವು. ಆಗ ಅದನ್ನು ತಡೆಯಲು ಮತ್ತೆ ಸುಪ್ರೀಂ ಮೊರೆ ಹೋದ ಕೇಂದ್ರಕ್ಕೆ ಅಲ್ಲೂ ನಿರಾಶೆಯಾಗಿತು.
* ದೆಹಲಿ ಪೊಲೀಸರು ಹೇಗಾದರೂ ರ್ಯಾಲಿ ತಡೆಯಲು ಹಲವಾರು ಷರತ್ತು ವಿಧಿಸಿದರು, ರೈತ ಒಕ್ಕೂಟ ಅದಕ್ಕೆ ಒಪ್ಪಿ ರ್ಯಾಲಿಗೆ ಸಿದ್ಧತೆ ಮಾಡಿಕೊಳ್ಳತೊಡಗಿತ್ತು.
* ಜನವರಿ 26 ರಂದು ಟ್ರ್ಯಾಕ್ಟರ್ ರ್ಯಾಲಿ ಶಾಂತಿಯುತವಾಗಿ ಆರಂಭವಾಗಿತ್ತು. ಆದರೆ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಭಿನ್ನಾಭಿಪ್ರಾಯವಿದ್ದ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿಯ ದೀಪ್ ಸಿಧು ಮತ್ತು ಸಿದಾನ ಲಖಾನ ಎಂಬುವವರು ಪೊಲೀಸ್ ಬ್ಯಾರಿಕೇಡ್ ಮುರಿದು ಕೆಂಪು ಕೋಟೆಯತ್ತ ತೆರಳಿದರು. ಅವರು ಬಿಜೆಪಿಯೊಂದಿಗೆ ಬಹಳ ಹತ್ತಿರದ ಸಂಪರ್ಕ ಹೊಂದಿರುವುದು ಜಗಜಾಹೀರಾಯಿತು.
* ಅವರು ನಿಗದಿತ ಮಾರ್ಗ ಬಿಟ್ಟು ರ್ಯಾಲಿ ಮಾಡುವುದಾಗಿ, ಕೆಂಪುಕೋಟೆ ತಲುಪುವುದಾಗಿ ತಿಳಿಸಿದವು. ಕೇಂದ್ರದ ಅಪೇಕ್ಷೆಯೂ ಇದೇ ಆಗಿತ್ತು. ಹೀಗೆ ಭಿನ್ನ ಹಾದಿ ತುಳಿದವರಿಗೆ ಹೆಚ್ಚಿನ ಅಡೆತಡೆ ಇಲ್ಲದಂತೆ ದೆಹಲಿ ಮತ್ತು ಕೆಂಪುಕೋಟೆಗೆ ಪ್ರವೇಶ ಸಿಗುವಂತೆ ಸಹಕರಿಸಲಾಯಿತು. ಅವರು ಕೆಂಪುಕೊಟೆಯಲ್ಲಿ ಸಿಖ್ ಧ್ವಜ ಮತ್ತು ರೈತ ಧ್ವಜ ಹಾರಿಸಿದ್ದನ್ನು ಸರ್ಕಾರದ ಗೋದಿ ಮಾಧ್ಯಮಗಳು ದೇಶದ್ರೋಹ ಎಂಬಂತೆ ಬಿಂಬಿಸಿದವು. ಅಲ್ಲಿ ಪೊಲೀಸರು ಮತ್ತು ಕೆಲವು ಪ್ರತಿಭಟನಾಕಾರರ ನಡುವಿನ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದನ್ನು ಬಳಸಿಕೊಂಡು, ಇಡೀ ರ್ಯಾಲಿಯೇ ಹಿಂಸಾತ್ಮಕವಾಗಿತ್ತು ಎಂದು ಬಿಂಬಿಸಲು ಹೆಣಗಾಡಲಾಯಿತು. ಎರಡು ತಿಂಗಳು ಕಾಲ ಒಂದು ಐತಿಹಾಸಿಕ ಬೃಹತ್ ಪ್ರತಿಭಟನೆ ಶಾಂತಿಯುತವಾಗಿ ನಡೆದಾಗ ಅದರ ಬಗ್ಗೆ ದೇಶದ ಜನರಿಗೆ ತಿಳಿಸದ ಗೋದಿ ಮೀಡಿಯಾ ಜ.26ರಿಂದ ಸಕ್ರಿಯವಾಗಿತು.
* ಸಂಯುಕ್ತ್ ಕಿಸಾನ್ ಮೋರ್ಚಾ ಅಡಿ ಶಾಂತಿಯುತವಾಗಿ ನಡೆದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ಪ್ರಸಾರ ಮಾಡದೇ ವೃತ್ತಿದ್ರೋಹ ಎಸಗಿದವು. ಇದೆಲ್ಲವೂ ಕ್ರೊನೊಲಜಿಯ ಭಾಗವೇ.
* ಕೆಂಪುಕೋಟೆ ಘಟನೆಗೆ ಪ್ರಮುಖ ಕಾರಣವಾದ ದೀಪ್ ಸಿಧು ಬಿಜೆಪಿ ಮನುಷ್ಯ ಎಂದು ಸಾಬೀತಾದೊಡನೆ ಸರ್ಕಾರ, ಗೋದಿ ಮಿಡಿಯಾ ಕೊಂಚ ಮುಜುಗರಕ್ಕೆ ಈಡಾದವು. ಜನರ ಗಮನ ಬೇರೆಡೆ ಸೆಳೆಯಲು ಮತ್ತೆ ಹಲವಾರು ಯತ್ನ ಶುರುವಾದವು.
* ಕ್ರೊನೊಲಜಿಯ ಈ ಹಂತದಲ್ಲಿ, ರೈತ ಒಕ್ಕೂಟದ ನಾಯಕರ ಹೆಸರುಗಳನ್ನು ಎಫ್ಐಆರ್ಗಳಲ್ಲಿ ಸೇರಿಸಲಾಗಿತು. ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ ಸೇರಿ ಹಲವರಿಗೆ ಈಗ ನೋಟಿಸ್ ಜಾರಿ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ, ತಪ್ಪಾಗಿ ಟ್ವೀಟ್ ಮಾಡಿದ ಕಾರಣಕ್ಕೆ ಶಶಿ ತರೂರ್, ರಾಜದೀಪ್ ಸರ್ದೇಸಾಯಿ ಇತರರ ನೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. (ಭೀಮಾ-ಕೊರೆಗಾಂವ್ ಪ್ರಕರಣ ನೆನಪಿಸಿಕೊಳ್ಳಿ)
* ಕೆಂಪುಕೋಟೆಯ ಅಹಿತಕರ ಘಟನೆ ಬಳಸಿಕೊಂಡು ರೈತ ಪ್ರತಿಭಟನೆಯ ಮೇಲೆ ಪೊಲೀಸ್ ಬಲ ಬಳಸುವ ಕೆಲಸಕ್ಕೆ ಪ್ರಭುತ್ವ ಮುಂದಾಗಿದೆ. ಅದರ ಮೊದಲ ಭಾಗವಾಗಿ ಉತ್ತರಪ್ರದೇಶದ ಯೋಗಿ ಸರ್ಕಾರವನ್ನು ಛೂ ಬಿಡಲಾಗಿದೆ. ಗಾಜಿಪುರ್ ಗಡಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ ರೈತ ಮುಖಂಡ ರಾಕೇಶ್ ಟಿಕಾಯತ್ ಕಣ್ಣೀರು ಸಾವಿರಾರು ರೈತರು ಗಡಗಳತ್ತ ಬಂದು ಪ್ರತಿಭಟನೆಗೆ ಸೇರಲು ಸಹಾಯಕವಾಗಿದೆ.
ಸಿಂಘು ಗಡಿಯಲ್ಲಿ ದೆಹಲಿ ಕಡೆ ಕುಳಿತಿದ್ದ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿಯ ರೈತರ ಮೇಲೆ ನಿನ್ನೆ ಮತ್ತು ಇಂದು ಸ್ಥಳೀಯರ ಹೆಸರಿನಲ್ಲಿ ಹಿಂದೂ-ಸೇನಾ ಸಂಘಟನ್ ಎಂಬ ಬಿಜೆಪಿ ಆರ್ಎಸ್ಎಸ್ ಪ್ರೇರಿತ ಸಂಘಟನೆಯ ಮುಸುಕುಧಾರಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪೊಲೀಸರು ಯಥಾಪ್ರಕಾರ ಕೈಕಟ್ಟಿಕೊಂಡು ದಾಳಿಗೆ ಅವಕಾಶ ಕೊಟ್ಟಿದ್ದಾರೆ. ಇದು ಇಡೀ ಸಿಂಘು ಹೋರಾಟಗಾರರ ಮೇಲಿನ ದಾಳಿ, ಟೆಂಟ್ಗಳನ್ನು ಕಿತ್ತರು ಎಂದು ತಪ್ಪು ಹರಡಲಾಗುತ್ತಿದೆ. ಸಿಂಘು ಗಡಿ ತೆರವುಗೊಳಿಸಲು ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ ಎಂದು ಸುದ್ದಿ ಹರಡಲಾಗುತ್ತಿದೆ.
ಆದರೆ ಸಿಂಘು ಗಡಿಯಲ್ಲಿ ಹರಿಯಾಣದ ಕಡೆಗೆ ಕಾಯ್ದೆ ವಿರೋಧಿಸಿ ಸಂಯುಕ್ತ್ ಕಿಸಾನ್ ಮೋರ್ಚಾ ಅಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿ ಯಾವುದೇ ದಾಳಿ ಆಗಿಲ್ಲ, ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಹೋರಾಟ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಆದರೆ, ಪ್ರತಿಭಟನಾನಿರತ ರೈತ ಸಂಘಟನೆಗಳು ಶಾಂತಿಯುತವಾಗಿ ಹೋರಾಟ ಮುಂದುವರೆಸುವ ಅಚಲ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿವೆ. ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ಲಕ್ಷಾಂತರ ಜನರು ಪ್ರತಿಭಟನೆಗೆ ಹರಿದು ಬರುತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದವರೆಷ್ಟು?: ಇಲ್ಲಿದೆ ವಿವರ