Homeಚಳವಳಿಆಶಾ ಕಾರ್ಯಕರ್ತರೆ ಆಸೆ ಈಡೇರಿಸಿದ ಆಂಧ್ರ ಸಿಎಂ ಜಗನ್ : ಆದರೆ ಕರ್ನಾಟಕದಲ್ಲಿ??

ಆಶಾ ಕಾರ್ಯಕರ್ತರೆ ಆಸೆ ಈಡೇರಿಸಿದ ಆಂಧ್ರ ಸಿಎಂ ಜಗನ್ : ಆದರೆ ಕರ್ನಾಟಕದಲ್ಲಿ??

ಕರ್ನಾಟಕದ ಆಶಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ಕಳೆದ 9 ತಿಂಗಳುಗಳಿಂದಲೂ ಸಂಬಳ/ ಪ್ರೋತ್ಸಾಹ ಧನ ನೀಡಿಲ್ಲ ಎಂದರೆ ನೀವು ನಂಬಲೇಬೇಕು.

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಆಂಧ್ರಪ್ರದೇಶದಲ್ಲಿ ಇತ್ತಿಚಿಗಷ್ಟೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅಲ್ಲಿನ ಆಶಾ ಕಾರ್ಯಕರ್ತರ ಸಂಬಳವನ್ನು 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿ ಸುದ್ದಿಯಾಗಿದ್ದಾರೆ.

ಇದೇನಪ್ಪ ಇಷ್ಟು ತ್ವರಿತಗತಿಯಲ್ಲಿ ಇಂಥಾ ನಿರ್ಧಾರ ಅಂತಿರಾ. ಜಗನ್ ಮೋಹನ್ ರೆಡ್ಡಿ ಚುನಾವಣೆಗೂ ಮುನ್ನ ಆಂಧ್ರ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದ್ದ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚಳದ ಕುರಿತು ಆಶ್ವಾಸನೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಜಗನ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 42 ಸಾವಿರ ಆಶಾ ಕಾರ್ಯಕರ್ತರ ವೇತನವನ್ನು ದಿಡೀರ್ ಹತ್ತು ಸಾವಿರಕ್ಕೆ ಏರಿಸಿದ್ದಾರೆ. ಈ ಕಾರ್ಯಕ್ಕಾಗಿ ಅವರು ಅಭಿನಂದನಾರ್ಹರು.

ಯಾರಿದು ಆಶಾ ಕಾರ್ಯಕರ್ತರು?
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್( ಎನ್.ಆರ್.ಹೆಚ್.ಎಮ್)ನ ಅಡಿಯಲ್ಲಿ 2005ರಲ್ಲಿ ಜಾರಿಯಾದ ರಾಷ್ಟ್ರೀಯ ಸ್ವಾಸ್ಥ ಮಿಷನ್‍ನ ಯೋಜನೆಯ ಭಾಗವಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯವನ್ನು ಉತ್ತಮಪಡಿಸಲು, ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಆಶಾ ಹೆಸರಿನಲ್ಲಿ ಈ ಯೋಜನೆ ಪ್ರಾರಂಭವಾಯಿತು. 2012ರಲ್ಲಿ ಈ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲು ಪ್ರತಿ ಗ್ರಾಮದಲ್ಲೂ ಆಶಾ ಕಾರ್ಯಕರ್ತೆ ಇರಬೇಕು ಎಂಬ ನಿಯಮವನ್ನು ಜಾರಿ ಮಾಡಿದ್ದರು.

ಆದರೆ ಪ್ರತಿ ಹಳ್ಳಿಯಲ್ಲಿ ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯಿಂದ ಕೆಲಸ ಮಾಡುವಂತಹ ಆಶಾ ಕಾರ್ಯಕರ್ತರ ಜೀವನದ ಬಗೆಗೂ ಕಾಳಜಿ ವಹಿಸಬೇಕಾದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರೆತಿವೆ. ಬಹಳ ದಿನಗಳಿಂದ ಆಶಾ ಕಾರ್ಯಕರ್ತರಿಂದ ಹೆಚ್ಚು ಕೆಲಸ ಮಾಡಿಸಿ ಕಡಿಮೆ ಸಂಬಳವನ್ನು ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರನ್ನು ನಿರ್ಲಕ್ಷ್ಯ ಮಾಡಿವೆ. ಇವರನ್ನು ನೌಕರರನ್ನಾಗಿ ಪರಿಗಣಿಸುವುದಿಲ್ಲ ಬದಲಿಗೆ ಗುತ್ತಿಗೆ ಆಧಾರದಲ್ಲಿ ಸ್ಕೀಮ್ ವರ್ಕರ್ ಎಂದು ಕರೆಯಲಾಗುತ್ತಿದೆ. ಇ.ಎಸ್.ಐ, ಪಿ.ಎಫ್ ಯಾವುದೇ ಸೌಲಭ್ಯಗಳಿಲ್ಲದ ನತದೃಷ್ಟರು ಇವರು.

ಕರ್ನಾಟಕದ ಸ್ಥಿತಿಯೇನು?
ಕರ್ನಾಟಕದಲ್ಲಿ ಆಶಾ ಕಾರ್ಯಕರ್ತರ ಕೆಲಸವನ್ನು ಸೇವೆ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಕೆಲವು ಸಾವಿರ ಗೌರವಧವನ್ನು ನೀಡಲಾಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುತ್ತಿದ್ದ ಮಹಿಳೆಯರು ವೇತನ ಹೆಚ್ಚಿಸಬೇಕೆಂದು ನೂರಾರು ಬಾರಿ ಹೋರಾಟ ಪ್ರತಿಭಟನೆಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ 2017ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ವತಿಯಿಂದ ನಡೆದ ದೊಡ್ಡ ಹೋರಾಟ ಗಮನಸೆಳೆಯುವಂತದ್ದು. ತದನಂತರ ರಾಜ್ಯಸರ್ಕಾರ 3500 ರೂಗಳನ್ನು ಮಾಸಿಕ ವೇತನ ನಿಗದಿಗೊಳಿಸಿತು.

ಆದರೆ ಕೇಂದ್ರ ಸರ್ಕಾರ ಕೇವಲ ಪ್ರೋತ್ಸಾಹ ಧನ ಮಾತ್ರ ಕೊಡುತ್ತಿದೆ. ಗರ್ಭಿಣಿಗೆ ನೋವು ಬಂದೊಡನೆ ಯಾವುದೇ ಸಮಯವಾಗಿರಲಿ ಸುರಕ್ಷಿತ ಹೆರಿಗೆಗೆ ಹಳ್ಳಿಯಿಂದ ಜಿಲ್ಲೆ/ತಾಲೂಕು ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದರೆ ಆಶಾಗೆ ಸಿಗುವ ಪ್ರೋತ್ಸಾಹಧನ ಕೇವಲ ರೂ 200! ಬಾಣಂತಿಯ 45 ದಿನಗಳ ಆರೋಗ್ಯ ವಿಚಾರಣಾ ಭೇಟಿಗೆ ರೂ 250! ಚುಚ್ಚುಮದ್ದು ಹಾಕಿಸಿದರೆ ರೂ 50! ಗರ್ಭಿಣಿ ಮಹಿಳೆಗೆ ತಪಾಸಣೆ ಮಾಡಿಸಿ ಮಾತ್ರೆ ಕೊಡಿಸಿದರೆ ರೂ 75! ಲಾರ್ವಾ ಸರ್ವೆಗೆ ಮನೆಯೊಂದಕ್ಕೆ 1 ರೂ. ಮಾತ್ರ!! ಇವೆಲ್ಲಾ ಪ್ರೋತ್ಸಾಹಧನವಂತೆ! ಅದು ಅಲ್ಲದೇ ಕರ್ನಾಟಕದಲ್ಲಿ ಕಳೆದ 9 ತಿಂಗಳುಗಳಿಂದಲೂ ಈ ಪ್ರೋತ್ಸಾಹ ಧನ ನೀಡಿಲ್ಲ ಎಂದರೆ ನೀವು ನಂಬಲೇಬೇಕು.

ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯಡಿ ಸುಮಾರು 40,000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸುವ ಇವರು, ಗರ್ಭಿಣಿ ಮಹಿಳೆಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ, ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶದಲ್ಲಿ ಜಾರಿಯಾಗಿರುವ ವೇತನ ಕರ್ನಾಟಕದಲ್ಲಿ ಏಕೆ ಕೊಡಲು ಸಾಧ್ಯವಿಲ್ಲ? ಹಾಗೆ ನೋಡಿದರೆ ಆಂಧ್ರಕ್ಕಿಂತಲೂ ಕರ್ನಾಟಕದಲ್ಲಿಯೇ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ ಅಲ್ಲವೇ? ಕಳೆದ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿಯವರು ಈಗಿರುವ 3500 ರೂಗಳ ಜೊತೆಗೆ 500 ರೂ ಗಳನ್ನು ನವೆಂಬರ್ 1 ರಿಂದ ಹೆಚ್ಚಳ ಮಾಡುತ್ತೇವೆ ಎಂದು ಘೋಷಿಸಿದ್ದರು! ಇವರಿಗೆ ಮಾನವೀಯತೆ ಇಲ್ಲವೇ? ಹಗಲು ರಾತ್ರಿ ದುಡಿಯುವ ಈ ಹೆಣ್ಣು ಮಕ್ಕಳಿಗೆ ಗೌರವಯುತವಾಗಿ ಬದುಕುವಷ್ಟು ಸಂಬಳ ನೀಡಲು ಹಿಂದೇಟು ಏಕೆ?

ಸಭೆಯೊಂದರಲ್ಲಿ ಡಿ ನಾಗಲಕ್ಷ್ಮಿಯವರು

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಕರ್ನಾಟಕದಲ್ಲಿ ಈ ವಿಚಾರವಾಗಿ ಪ್ರಾಮಾಣಿಕವಾಗಿ ಮತ್ತು ನಿರಂತರವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಕಾರ್ಯದರ್ಶಿಯಾದ ಡಿ.ನಾಗಲಕ್ಷಿಯವರನ್ನು ಮಾತನಾಡಿಸಿತು. ಅವರು “ಆಂಧ್ರದಲ್ಲಿನ ಆಶಾ ಕಾರ್ಯಕರ್ತರ ದುಡಿಮೆಗೆ ಅಲ್ಲಿನ ಸರ್ಕಾರ 10 ಸಾವಿರ ವೇತನ ನಿಗದಿ ಮಾಡುವ ಮೂಲಕ ಗೌರವಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ತಾಯಿ ಮರಣ, ಶಿಶುಮರಣ ದರ ಕಡಿಮೆಯಾಗುವಲ್ಲಿ ಆಶಾ ಕಾರ್ಯಕರ್ತರೆ ಮುಖ್ಯ ಕಾರಣರಾಗಿದ್ದಾರೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಕನಿಷ್ಠ ವೇತನ 12 ಸಾವಿರ ಕೊಡಬೇಕೆಂಬ ನಮ್ಮ ಹಕ್ಕೊತ್ತಾಯವನ್ನು ಈಡೇರಿಸಿಲ್ಲ. ಹಾಗಾಗಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ರೂಪಿಸಲಿದ್ದೇವೆ. ನಾಗರೀಕ ಸಮಾಜನ ನಮಗೆ ಬೆಂಬಲ ನೀಡಬೇಕಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...