12000 ಸಂಬಳ, ಕೆಲಸದ ಭದ್ರತೆ, 15 ತಿಂಗಳಿನಿಂದ ಬರಬೇಕಾದ ಬಾಕಿ ಹಣ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಬೆಂಗಳೂರಿನಲ್ಲಿ 30ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಡೆಸಿದ ಬೃಹತ್ ಪ್ರತಿಭಟನೆ ಕಡೆಗೂ ಅಂತ್ಯಕಂಡಿದೆ.
ಬೆಳಿಗ್ಗೆಯೇ ರೈಲುನಿಲ್ದಾಣದಿಂದ ಬೃಹತ್ ಮೆರವಣಿಗೆಯ ಮೂಲಕ ಫ್ರೀಡಂಪಾರ್ಕ್ನಲ್ಲಿ ಜಮಾಯಿಸಿದ ಮಹಿಳೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಗ್ಯ ಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಸ್ಥಳದಲ್ಲಿಯೇ ಈಡೇರಿಸಬೇಕೆಂದು ಪಟ್ಟು ಹಿಡಿದಿದ್ದರು.
ಆದರೆ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಲಿ ಸಂಧಾನ ಸಭೆ ನಡೆಸುವಂತೆ ಆದೇಸಿಸಿದ್ದರು. ಆಶಾ ಕಾರ್ಯಕರ್ತೆಯರ ಏಳು ಬೇಡಿಕೆಗಳಿಗೂ ಒಪ್ಪಿಕೊಂಡು ಸಮಯಾವಕಾಶ ನೀಡುವಂತೆ ಸೂಚಿಸಿದ್ದರು.
ಅದರಂತೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದರು. AIUTUC ವತಿಯಿಂದ ನಡೆದ ಹೋರಾಟವನ್ನು ಆಶಾ ಕಾರ್ಯಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿಯವರು ಮತ್ತು ಅಧ್ಯಕ್ಷರಾದ ಸೋಮಶೇಖರ್ ಯಾದಗಿರಿಯವರು ಮುನ್ನಡೆಸಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನವನ್ನು ಒಟ್ಟಿಗೆ ಸೇರಿಸಿ 12000 ಕೊಡಬೇಕು ಎಂದು ಹಕ್ಕೊತ್ತಾಯ ಮಾಡಲಾಗಿತ್ತು. ಇದಕ್ಕೆ ಒಪ್ಪಿದ ಸರ್ಕಾರ ಪ್ರತಿತಿಂಗಳು 10 ರಿಂದ 15ನೇ ತಾರೀಖಿನ ಒಳಗೆ ನೀಡುತ್ತೇವೆ ಎಂದು ಹೇಳಿದೆ. ಈಗ ರಾಜ್ಯ ಸರ್ಕಾರ ನಿಡುತ್ತಿರುವ ನಿಶ್ಚಿತ ಗೌರವಧನ 4ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲು ಬಜೆಟ್ನಲ್ಲಿ ಮನವಿ ಮಾಡಲಾಗುವುದು ಎಂದು ಅಧಿಕಾರಗಳು ಹೇಳಿದ್ದಾರೆ.
ಆಶಾ ನಿಧಿ ತಂತ್ರಾಂಶಗಳನ್ನು ಮಾರ್ಚ್ ಒಳಗೆ ಸರಿಪಡಿಸಲಾಗುವುದು. ಅದರಲ್ಲಿ ಆಶಾ ಕಾರ್ಯಕರ್ತೆಯರ ವಿವರಗಳನ್ನು ಲಿಂಕ್ ಮಾಡುವುದನ್ನು ತೆಗೆಯಲು ಸರ್ಕಾರ ಒಪ್ಪಿದೆ.
ಪ್ರತಿತಿಂಗಳು ಸಚಿವರೊಂದಿಗೆ ಪ್ರತಿ ತಿಂಗಳು ಒಂದು ದಿನ ಆಶಾ ಕಾರ್ಯಕರ್ತೆಯರ ಸಂಘಟಕರೊಂದಿಗೆ ಸಭೆ ನಡೆಸಲಾಗುವುದು. ವಾಟ್ಸಾಪ್ ಗುಂಪು ಮಾಡಿ ಸಂವಾದ ನಡೆಸುವುದು.
15 ತಿಂಗಳಿಂದ ಬಾಕಿ ಇರುವ ವೇತನ ಪಾವತಿಗೆ ಸಂಬಂಧಿಸಿದಂತೆ ಸರಾಸರಿ ಮೊತ್ತ ಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರಲ್ಲಿ ಭಾಗಶಃ ನಮ್ಮ ಹಕ್ಕೊತ್ತಾಯಗಳು ಈಡೇರಿವೆ. ಇನ್ನು ಕೆಲವು ಭರವಸೆಯ ರೂಪದಲ್ಲಿಯೇ ಇವೆ. ಹಾಗಾಗಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆಯನ್ನು ನಿಲ್ಲಿಸುತ್ತಿದ್ದೇವೆ. ಆದರೆ ಭರವಸೆ ಈಡೇರುವವರೆಗೂ ಕೆಲಸಕ್ಕೆ ತೆರಳುವುದಿಲ್ಲ. ಸರ್ಕಾರಕ್ಕೆ ಮಾರ್ಚ್ವರೆಗೆ ಗಡುವು ನೀಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.