ಅತ್ಯುತ್ತಮ ಸಾರ್ವಜನಿಕ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳ ದೆಹಲಿ ಮಾದರಿಯಲ್ಲಿ ಜಾರ್ಖಂಡ್ನಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ ಮಾಡುತ್ತೇವೆ ಎಂದು ಕೇಜ್ರಿವಾಲ್ ಭೇಟಿ ಬಳಿಕ ಜಾರ್ಖಂಡ್ನ ನೂತನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘೋಷಿಸಿದ್ದಾರೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆಯ ನಂತರ, ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಕೈಗೊಂಡ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಉಪಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಸೊರೆನ್ ಹೇಳಿದ್ದಾರೆ.
“ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು. ದೆಹಲಿಗೆ ಜಾರ್ಖಂಡ್ ವತಿಯಿಂದ ಶುಭಾಶಯಗಳನ್ನು ತಿಳಿಸುತ್ತೇವೆ. ಅಲ್ಲಿ ಆಮ್ ಆದ್ಮಿ ಸರ್ಕಾರವು ಕೈಗೊಂಡ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಉಪಕ್ರಮಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಜಾರ್ಖಂಡ್ನಲ್ಲಿ ಇದೇ ರೀತಿಯ ಉಪಕ್ರಮಗಳನ್ನು ಜಾರಿಗೆ ತರಲು ಇದು ಪ್ರೇರಣೆಯಾಗಿದೆ” ಎಂದು ಸೊರೆನ್ ಟ್ವೀಟ್ ಮಾಡಿದ್ದಾರೆ.
It was a pleasure to receive Sh @HemantSorenJMM ji. I congratulate him for taking over as CM of Jharkhand. Jharkhand will definitely progress under his dynamic leadership. Both states will learn from each other. https://t.co/cnFTVyppxi
— Arvind Kejriwal (@ArvindKejriwal) January 3, 2020
ಇದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ “ಹೆಮಂತ್ಸೊರೆನ್ ಅವರಿಂದ ಅಭಿನಂದನೆಗಳನ್ನು ಸ್ವೀಕರಿಸಲು ಸಂತೋಷವಾಗಿದೆ. ಜಾರ್ಖಂಡ್ನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಜಾರ್ಖಂಡ್ ಖಂಡಿತವಾಗಿಯೂ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಪ್ರಗತಿ ಸಾಧಿಸಲಿದೆ. ಎರಡೂ ರಾಜ್ಯಗಳು ಪರಸ್ಪರ ಕಲಿಯುತ್ತವೆ” ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯನಿರತ ಅಧ್ಯಕ್ಷರಾದ ಸೊರೆನ್ ಅವರು ಡಿಸೆಂಬರ್ 29 ರಂದು ರಾಜ್ಯದ 11 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷ ಬೆಂಬಲ ನೀಡಿದೆ.