Homeಮನರಂಜನೆ"ಸೈಂಟಿಫಿಕ್ ಪೆಪ್ಪರಮಿಂಟ್" ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

“ಸೈಂಟಿಫಿಕ್ ಪೆಪ್ಪರಮಿಂಟ್” ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

- Advertisement -
- Advertisement -

ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕೇಂದ್ರದ ಸಾಂಸ್ಕೃತಿಕ ವಕ್ತಾರರನ್ನು ಸಂದರ್ಶಿಸಲಾಯಿತು. ಈ ದೇಶದ ಮುಂದಿನ ಐವತ್ತು ವರ್ಷಗಳ ಶಿಕ್ಷಣ, ಸಾಂಸ್ಕೃತಿಕ ನಡೆ ಕುರಿತ ಕಾಣ್ಕೆಯನ್ನು ವಕ್ತಾರರು ಹಂಚಿಕೊಂಡರು.

ಅದರ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು: ಹೊಸ ಶಿಕ್ಷಣ ನೀತಿಯ ಒತ್ತು ಏನು?

ಸಾಂಸ್ಕೃತಿಕ ವಕ್ತಾರ: ನೋಡಿ ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ನೆಹರೂ ಮತ್ತು ಎಡಚರು ಮಾಡಿದ್ದಾರೆ . ನಾವು ಅದನ್ನು ತಿದ್ದಿ ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಬೇಕಾಗಿದೆ. ಭಾರತ ವಿಶ್ವಗುರುವಾಗಲು ಇದು ಬುನಾದಿ.

ನಾನು: ಇದನ್ನು ಹೇಗೆ ಸಾಧಿಸಲಾಗುತ್ತದೆ?

ಸಾಂವ: ಈಗ ನೋಡಿ ಮೊನ್ನೆ ಗ್ರಹಣ ಆಯಿತು. ಎಡಚರು ಇದನ್ನು ಖಗೋಳ ಶಾಸ್ತ್ರೀಯ ಘಟನೆ ಅನ್ನುತ್ತಾರೆ. ಆದರೆ ನಮ್ಮ ಹಳ್ಳಿಹಳ್ಳಿಗಳಲ್ಲೂ ಇದನ್ನು ಸಾವಿರಾರು ವರ್ಷಗಳಿಂದ ಗಮನಿಸಿದ್ದಾರೆ. ಇದರ ಪರಿಣಾಮಗಳನ್ನು ನಿವಾರಿಸಲು ಪರಿಹಾರ ಕ್ರಮ ಮಾಡುತ್ತಾರೆ. ಹಾಗಿದ್ದರೆ ಅವರು ಅಜ್ಞಾನಿಗಳೇ? ಉದಾ: ಗ್ರಹಣ ಕಾಲದಲ್ಲಿ ವಿಕಿರಣ ಪರಿಣಾಮ ಆಗುತ್ತೆ. ಅದಕ್ಕೇ ಮಕ್ಕಳನ್ನು ತಿಪ್ಪೆಯಲ್ಲಿ ಹುಗಿದಿಡುವ ಸಂಪ್ರದಾಯ ಇದೆ. ಯಾಕೆ ಹೇಳಿ? ಗೋವಿನ ಸೆಗಣಿಗೆ ವಿಕಿರಣವನ್ನು ತಡೆಯುವ ಶಕ್ತಿ ಇದೆ.

ನಾನು: ಅಂದರೆ?

ಸಾಂ ವ: ಅಂದರೆ ನಾವು ಈ ಬಗ್ಗೆ ವಿಶೇಷ ಸಂಶೋಧನೆಗೆ ಅನುದಾನ ನೀಡುತ್ತೇವೆ. ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಗ್ರಹಣ ಕಾಲದಲ್ಲಿ ಅಂಗನವಾಡಿ ಮತ್ತು ಶಾಲಾಮಕ್ಕಳನ್ನು ಶಾಲಾ ಆವರಣದಲ್ಲೇ ತಿಪ್ಪೆಯಲ್ಲಿ ಹೂತಿಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಚಾಲೂ ಮಾಡಲಾಗುವುದು. ವಿದೇಶಗಳಲ್ಲೂ ಇದರ ವೈಜ್ಞಾನಿಕ ಮಹತ್ವವನ್ನು ಸಾರಲೂ ವಿದೇಶದಲ್ಲಿರುವ ಭಾರತೀಯ ಮಕ್ಕಳನ್ನು ಬಳಸಿ ಅಲ್ಲಿ ಪ್ರಾತ್ಯಕ್ಷಿಕೆ ಮಾಡಿ ವಿದೇಶಗಳಲ್ಲೂ ನಮ್ಮ ಆಚರಣೆಯ ಮಹತ್ವವನ್ನು ಪ್ರಚುರಪಡಿಸಲಾಗುವುದು.

ನಾನು : ಮತ್ತೆ ಈ ದರ್ಭೆಗೆ ವಿಶೇಷ ಮಹತ್ವ ಇದೆ ಎಂದು ಹೇಳ್ತಿದ್ರು..

ಸಾಂವ: ದರ್ಭೆ? ಅದು ಜಗತ್ತಿನಲ್ಲೇ ವಿಶೇಷ. ಅದರ ಒಂದು ತುಂಡು ಹಾಕಿದರೂ ವಿಕಿರಣ ತಾಗೋದಿಲ್ಲ. ಅಷ್ಟೇಕೆ, ನಾವೀಗ ದರ್ಭೇಯನ್ನೇ ಉಪಯೋಗಿಸಿ ಬೆನ್ನಟ್ಟುವ ಕ್ಷಿಪಣಿ ತಯಾರು ಮಾಡುವ ತಂತ್ರಜ್ಞಾನದ ಸಂಶೋಧನೆ ಆರಂಭಿಸಿದ್ದೇವೆ

ನಾನು: ಅದು ಹೇಗೆ?

ಸಾಂವ: ಅಯ್ಯೋ, ರಾಮಾಯಣದಲ್ಲಿ ಶ್ರೀರಾಮ ದೇವರು ದರ್ಭೆಗೆ ಮಂತ್ರ ಆವಾಹನೆ ಮಾಡಿ ಕಾಕಾಸುರನನ್ನು ಬೆನ್ನಟ್ಟಲಿಲ್ಲವೇ? ಹಾಗೇ ಶತ್ರು ಕ್ಷಿಪಣಿ/ ವಿಮಾನದ ಶಾಖವನ್ನೇ ಬೆನ್ನು ಹತ್ತಿ ಅದನ್ನು ನಾಶ ಮಾಡೋದು. ದರ್ಭೆ ಸಣ್ಣಕ್ಕೆ ಇರುವ ಕಾರಣ ಅದು ರಾಡಾರಿನಲ್ಲೂ ಕಾಣಿಸೋದಿಲ್ಲ. ಅದಕ್ಕೆ ಆಗ್ನೇಯಾಸ್ತ, ಬ್ರಹ್ಮಾಸ್ತ್ರದಂಥಾ ಮಂತ್ರವನ್ನು ಆವಾಹಿಸಲು ವಿಶೇಷ ವಿಪ್ರ ಪುರೋಹಿತರನ್ನು ಸೈನ್ಯ ನಿಯೋಜಿಸಲಿದೆ.

ನಾನು: ಅದ್ಭುತ. ಇದನ್ನು ಜಗತ್ತಿಗೆ ಹೇಳಬೇಕು!!

ಸಾಂವ: ( ನಕ್ಕು) ನೋಡಿ.. ಇದು ಡಿಫೆನ್ಸ್ ಸೀಕ್ರೆಟ್. ಇದನ್ನು ನಾವು ಯಾರಿಗೂ ಹೇಳೋದಿಲ್ಲ ಹ್ಹ.. ಹ್ಹಾ..

ನಾನು: ಅದ್ಭುತ.. ಇನ್ನು ಇಂಥಾ ಎಷ್ಟು ಯೋಜನೆಗಳಿದಾವೆ?

ಸಾಂವ: ತುಂಬಾ ಇದೆ. ಆದರೆ ಕೆಲವನ್ನು ನಾವು ಗುಪ್ತವಾಗಿ ಮಾಡಬೇಕಿದೆ. ಉದಾ: ನಾವು ಈಗಾಗಲೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೆದುಳು ಮತ್ತು ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಗುಂಪು ಗುಂಪಿಗೆ ಮಾಡಿದ್ದೇವೆ. ಇದರಲ್ಲಿ ಮೆದುಳನ್ನು ಮೆತ್ತಗೆ ಮಾಡಿ ವಿಧೇಯತೆಯನ್ನು ಮುದ್ರಿಸುವುದನ್ನು ಮಾಡಲಾಗುತ್ತದೆ. ಇನ್ನು ಹೃದಯದ್ದು ಸ್ವಲ್ಪ ಬೇರೆ. ಅದು ಮೃದು ಇದ್ದರೆ ಕಷ್ಟ. ಅದಕ್ಕೇ ಕೆಲವು ಮೂಲಿಕೆ ಬಳಸಿ ಅದು ಕಲ್ಲಾಗುವ ತರ ಮಾಡುವುದು. ರಕ್ತಪರಿಚಲನೆ ಬಿಟ್ಟು ಬೇರೆ ಭಾವನೆಗಳ ಕೆಲಸ ಹೃದಯಕ್ಕೆ ಇರೋದು ವೇಸ್ಟ್ .

ನಾನು: ಅದ್ಭುತ.. ಇದು ಯಾವಾಗ ಚಾಲೂ ಆಗುತ್ತೆ?

ಸಾಂವ: ಚಾಲೂ? ಎಲ್ಲಿದ್ದೀರಿ ನೀವು..? ಈಗ ನಮ್ಮ ಪರವಾಗಿ ಮಾತಾಡಿ, ಬೀದಿಗಿಳಿದು ಗಲಾಟೆ ಮಾಡೋರು ಯಾರು ಅಂದ್ಕೊಂಡ್ರಿ? ಅದು ಈಗಾಗಲೇ ಲಕ್ಷಾಂತರ ಮಂದಿಗೆ ಮಾಡಿಯಾಗಿದೆ..

ನಾನು: ಅದ್ಭುತ: ಈ ಒಟ್ಟಾರೆ ನೀತಿಗೆ ಏನೆಂದು ಕರೆಯಲಾಗುತ್ತೆ?

ಸಾಂವ: ನೋಡಿ ನೆಹರೂ ಇದನ್ನು ಸೈಂಟಿಫಿಕ್ ಟೆಂಪರಮೆಂಟ್ ಅಂತ ಕರಿತಿದ್ರು. ಎಂಥಾ ಟೆಂಪರ್? ಅದಕ್ಕೇ ನಾವಿದನ್ನು ಪೆಪ್ಪರಮಿಂಟ್.. ಸೈಂಟಿಫಿಕ್ ಪೆಪ್ಪರಮಿಂಟ್ ಎಂದು ಕರೆಯುತ್ತೇವೆ. ಪೆಪ್ಪರಮಿಂಟ್ ಅಂದ್ರೇನು? ಗೊತ್ತಲ್ಲ. ಮಕ್ಕಳಿಗೆ ಇಷ್ಟ. ಅದಕ್ಕೇ ಈ ಯೋಜನೆಗೆ ಆ ಹೆಸರು

ನಾನು: ಸೂಪರ್ ಸಾರ್… ಅಭಿನಂದನೆಗಳು..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

0
ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯಲ್ಲಿ ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಕಂಗೆಟ್ಟ ಬುಡಕಟ್ಟು ಗ್ರಾಮದ 600ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ...