ದೇಶಕ್ಕೆ ನಿರಂಕುಶ ಪ್ರಭುತ್ವ ಹಾನಿಕರವಾಗಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದ್ದು, ಅಂತಹ ಸರಕಾರ ಈ ಹಿಂದೆ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಮುಂಬೈನ ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ಮಾತನಾಡಿದ ಉದ್ದವ್ ಠಾಕ್ರೆ, ದೇಶಕ್ಕೆ ಬಲಿಷ್ಠ ನಾಯಕನ ಅವಶ್ಯಕತೆ ಇದೆ, ಆ ನಾಯಕ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಜಲಗಾಂವ್ ಜಿಲ್ಲೆಯ ಭಾರತೀಯ ಜನತಾ ಪಕ್ಷ (ಬಿಜೆಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಮತ್ತು ವಂಚಿತ್ ಬಹುಜನ ಅಘಾಡಿ (ವಿಬಿಎ) ಪದಾಧಿಕಾರಿಗಳು ಶಿವಸೇನಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ದವ್ ಠಾಕ್ರೆ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಸಮಾಧಾನ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ.
ನಿರಂಕುಶ ಆಡಳಿತವು ದೇಶಕ್ಕೆ ಹಾನಿಕಾರಕವಾಗಿದೆ. ಒಂದು ಕಾಲದಲ್ಲಿ ಸಮ್ಮಿಶ್ರ ಸರ್ಕಾರ ಬೇಡ ಎಂಬ ಭಾವನೆ ಇತ್ತು. ಆದರೆ ಪಿ ವಿ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಅವರು ಸಮ್ಮಿಶ್ರ ಸರ್ಕಾರಗಳನ್ನು ಚೆನ್ನಾಗಿ ನಡೆಸಿದ್ದರು. ಕೆಲವು ಸಂದರ್ಭಗಳನ್ನು ಹೊರತುಪಡಿಸಿ, ಸಮ್ಮಿಶ್ರ ಸರ್ಕಾರಗಳು ದೇಶದಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ನಮಗೆ ಬಲಿಷ್ಠ ದೇಶ ಮತ್ತು ಸಮ್ಮಿಶ್ರ ಸರ್ಕಾರ ಬೇಕು. ನಮಗೆ ಬಲಿಷ್ಠ ನಾಯಕ ಬೇಕು, ಬಲಿಷ್ಠ ನಾಯಕ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬಲ್ಲರು ಎಂದು ಠಾಕ್ರೆ ಹೇಳಿದರು.
ವಿರೋಧ ಪಕ್ಷದ ಇಂಡಿಯಾ ಬಣವು ದೇಶಕ್ಕೆ ಉತ್ತಮವಾದ ಸಮ್ಮಿಶ್ರ ಸರ್ಕಾರವನ್ನು ನೀಡಬಹುದು. ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷಗಳು ಶೀಘ್ರದಲ್ಲೇ ರಾಜ್ಯದಲ್ಲಿ ಜಂಟಿ ರ್ಯಾಲಿಗಳನ್ನು ನಡೆಸಲಿವೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಶಿವಸೇನೆ ಕುರಿತ ‘ನಕಲಿ’ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಪಕ್ಷವು ನಿಮ್ಮ ಪದವಿಯಂತೆ ಇರಲಿಲ್ಲ” ಎಂದು ಹೇಳಿದರು. ಮುಂಬೈ ಬಳಿಯ ಮಹಾರಾಷ್ಟ್ರದ ಬೋಯಿಸರ್ನಲ್ಲಿ ತಮ್ಮ ಪಕ್ಷದ ಪಾಲ್ಘರ್ ಲೋಕಸಭಾ ಅಭ್ಯರ್ಥಿ ಭಾರತಿ ಕಾಮ್ಡಿ ಅವರನ್ನು ಬೆಂಬಲಿಸಿ ಪ್ರಚಾರ ನಡೆಸುತ್ತಿದ್ದ ಪ್ರಚಾರ ಸಭೆಯಲ್ಲಿ ಠಾಕ್ರೆ ಈ ಹೇಳಿಕೆಗಳನ್ನು ನೀಡಿದ್ದರು.
ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಶಿವಸೇನೆ ಮುಖ್ಯಸ್ಥ ಬಾಲ್ ಠಾಕ್ರೆ ಸ್ಥಾಪಿಸಿದ ಶಿವಸೇನೆಯನ್ನು ನಕಲಿ ಎಂದು ಕರೆಯಲಾಗುತ್ತಿದೆ, ಅದನ್ನು ನಕಲಿ ಎಂದು ಕರೆಯಲು ಅದು ನಿಮ್ಮ ಪದವಿಯಂತಲ್ಲ ಎಂದು ಉದ್ದವ್ ಹೇಳಿದ್ದಾರೆ.
ಇದನ್ನು ಓದಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯೂಟ್ಯೂಬ್ ಚಾನೆಲ್ಗಳಿಗೆ ನಿರ್ಬಂಧ: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ