Homeಸಾಹಿತ್ಯ-ಸಂಸ್ಕೃತಿಕಥೆಬಿ.ಎಲ್.ವೇಣು ಅವರ ದುವಾ ಕಥೆ

ಬಿ.ಎಲ್.ವೇಣು ಅವರ ದುವಾ ಕಥೆ

- Advertisement -
- Advertisement -

| ಬಿ.ಎಲ್.ವೇಣು |

ಮೂಲತಃ ಚಿತ್ರದುರ್ಗದವರಾದ ಬಿ.ಎಲ್.ವೇಣುರವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ಚಿತ್ರಸಾಹಿತಿಯಾಗಿ ಅಪಾರ ಮನ್ನಣೆ ಗಳಿಸಿದವರು. ತಂದೆ-ತಾಯಿ ಇಬ್ಬರೂ ರಂಗಕಲೆ ಹಿನ್ನೆಲೆಯವರಾಗಿದ್ದರಿಂದ ಸಾಹಿತ್ಯಾಸಕ್ತಿ ಅವರಲ್ಲಿ ಸಹಜವಾಗಿಯೇ ಬೆಳೆದುಬಂದಿದೆ. ಚಾರಿತ್ರಿಕ ಹಿನ್ನೆಲೆಯ ನೆಲದಿಂದ ಬಂದ ಅವರು ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳು ಸೇರಿದಂತೆ 26 ಕಾದಂಬರಿಗಳನ್ನು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಅವರ `ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‍ಸ್ಟೋರಿಗಳ ಟ್ರೆಂಡ್‍ಗೆ ನಾಂದಿ ಹಾಡಿತಲ್ಲದೆ, ನಾಲ್ಕು ಭಾಷೆಗಳಲ್ಲಿ ತೆರೆಕಂಡಿತು. ಪುಟ್ಟಣ್ಣ ಕಣಗಾಲರ `ಅಮೃತಘಳಿಗೆ’ ಸಿನಿಮಾ ಮೂಲಕ ಸಂಭಾಷಣೆ ಬರೆಯಲು ಶುರು ಮಾಡಿದ ಅವರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಸಾಹಿತಿಯಾಗಿ ದುಡಿದಿದ್ದಾರೆ. ನಿರ್ದೇಶಕ ಭಾರ್ಗವ, ನಟ ವಿಷ್ಣುವರ್ಧನ್ ಮತ್ತು ಬಿ.ಎಲ್.ವೇಣುರವರ ಜೋಡಿ ಎಂಬತ್ತರ ದಶಕದಲ್ಲಿ ಯಶಸ್ವಿ ಸಿನಿ ಜೋಡಿಯಾಗಿ ಗುರುತಿಸಿಕೊಂಡಿತ್ತು. ಸಾಹಿತ್ಯ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅವರು ಈಗಲೂ ಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೊರಗಡೆ ತಲೆ ಎತ್ತಿ ತಿರುಗಾಡಲೂ ಶರಮ್ ಆಗ್ತದೆ. ಮಾನಸಿಕ ಹಿಂಸೆಯಿಂದಾಗಿ ಬದುಕೇ ಬೇಡವೆನ್ನಿಸಿದೆ. ನನ್ನನ್ನೇ ಉಗ್ರನಂತೆ ನೋಡುತ್ತಿದ್ದಾರೇನೋ ಎಂಬ ಅಳಕು. ಯಾರೋ ಮಾಡುವ ಗಲತ್ತಿಗೆ ನಾನೇಕೆ ಶರಮ್ ಆಗಬೇಕು? ಇತಿಹಾಸದಲ್ಲಿ ಸಂಭವಿಸಿದ್ದಕ್ಕೆಲ್ಲಾ ಹೊಣೆಗಾರನಾಗಬೇಕೇಕೆ? ನನ್ನ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲವೆಂಬ ಸಂಕಟ. ಪ್ರೇಯರ್ ಮಾಡಲು ಬಂದ ಇಸ್ಮಾಯಿಲ್ ತಂಪು ಆವರಿಸಿದ ಮಸೀದಿಯಲ್ಲೂ ಬೆವರೊಡೆದ. ಮನಸ್ಸು ಬಲೆಯಲ್ಲಿ ಸಿಕ್ಕ ಜೇಡ. ಮಸೀದಿ ಕೆಡವಿದರು. ಕೆಡವಿದವರೇ ಗದ್ದಲವೆಬ್ಬಿಸಿ ಅನೇಕರನ್ನು ಸಾಯಬಡಿದರು. ಪ್ರಾಣ್ ಬಚಾವ್ ಮಾಡಿಕೊಳ್ಳಲು ಹೊಡೆದಾಡಿದ್ದೆವು. ತಲವಾರ್ ಹಿಡಿದುಬಂದವರು ಇವರ ಮನೇಲಿ ವೆಪನ್ಸ್ ಅದಾವೆ ಅಂದರು. ಮಸೀದಿನಾಗೂ ಇಟ್ಕಂಡವರೆ ಅಂದರು. ಮಸೀದಿಗೂ ನುಗ್ಗಿದರು. ಇದೆಲ್ಲಾ ಪುರಾನಿ ಕಹಾನಿಯಾದರೂ ನಾವಿಲ್ಲೇ ಬದುಕಿದ್ದೇವೆ. ನಮ್ಮ ದೇಶದಲ್ಲೇ ಪರಕೀಯರಂತೆ! ಚರಿತ್ರೆ ಪುಟಗಳಲ್ಲೆಂದೋ ನಮ್ಮವರು ದರ್ಬಾರ್ ಮಾಡಿದ ನೆಲದಲ್ಲಿಂದು ಗುಲಾಮರಂತೆ ಬದುಕುವುದೂ ಕಷ್ಟವಾಗಿದೆ. ನೀವೆಲ್ಲಾ ಕನ್ವರ್ಟೆಡ್ ಮುಸ್ಲಿಮರು ಅಂತಾರೆ. ಹಿಂದೆ ನಮ್ಮವರೇ ಆಗಿದ್ದೀರಿ ಅಂತ ಜೋಕ್ಸ್ ಹೊಡಿತಾರೇ ವಿನಹ ತಮ್ಮವರಂತೆ ಕಂಡಿದ್ದಿಲ್ಲ. ನವಾಬರು ಆರನೂರು ವರ್ಷ ಆಳಿದರೂ ದೇಶವನ್ನು ದೋಚಲಿಲ್ಲ. ಇಲ್ಲಿಯೇ ಮೀನಾರು ಮಸೀದಿ ಮಹಲುಗಳನ್ನು ಕಟ್ಕೊಂಡು ಬೇಪಾರ್ ಮಾಡ್ಕೊಂಡು ಬದುಕಿದರು. ಬ್ರಿಟಿಷರಂಗೆ ದೇಶವನ್ನೇ ಲೂಟ್ ಮಾಡಿ ಹೊತ್ತೊಯ್ಯಲಿಲ್ಲ. ಬ್ರಿಟಿಷರನ್ನು ಓಡಿಸೋಕೆ ನಾವೂ ನಮ್ಮದೇ ವತನ್ ಅನ್ನೋ ಭಾವನೆಯಿಂದ್ಲೇ ಹೋರಾಡಿದೆವು. ಅವರು ಹೋಗಬೇಕಾದರೆ ದೇಶನಾ ಎರಡು ಭಾಗ ಮಾಡಿ ಮನಸ್ಸುಗಳನ್ನೂ ಒಡೆದರು. ದೇಶದ ಮೇಲೆ ಮೊಹಬತ್ ಇಲ್ಲದಿದ್ದರೆ ನಾವೇಕೆ ಇಲ್ಲಿ ಉಳೀತಿದ್ದೆವು? ನಮ್ಮ ಪಾಡಿಗೆ ನಾವು ಬೆವರು ಬಸಿದು ದುಡ್ಕೊಂಡು ಬದುಕ್ತಿದ್ದೀವಿ. ಯಾವನೋ ಸಾಬರವನು ಶತ್ರು ದೇಶದ ಜೊತೆ ದೋಸ್ತಿ ಮಾಡ್ಕೊಂಡು ಬಾಂಬ್ ಉಡಾಯಿಸಿ ಸೈನಿಕರ ಜೀವ ತೆಗೆದರೆ ಸಾರಾಸಗಟಾಗಿ ಅನುಮಾನಿಸೋದು ಹೀಯಾಳಿಸೋದು ಸರೀನಾ? ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಲ್ಲಿದೆ? ಮಾಧ್ಯಮಗಳಲ್ಲಿ ಬೇರೆ ಟೀಕೆ, ತೀರ್ಪು! ಗಡ್ಡಬಿಟ್ಟೋರೆಲ್ಲಾ ಘಾತಕರೆಂಬ ಇರಿಯುವ ನೋಟ. ದೇಶವನ್ನೇ ಬಿಟ್ಟು ತೊಲಗಿ ಎಂಬಷ್ಟು ದ್ವೇಷ. ಬುದ್ಧ ಬಸವ ಗಾಂಧಿ ಹುಟ್ಟಿದ ದೇಶದಲ್ಲೇ ನಿಮ್ಮ ಹಾಗೆ ಹುಟ್ಟಿದ್ದೇವಲ್ಲ. ಗಾಂಧಿಯನ್ನು ಕೊಂದಿದ್ದು ಯಾರು? ಮುಸಲ್ಮಾನರಾ? ಬ್ರಿಟಿಷರಾ? ಹೇಳಿ? ಪಾಕಿಸ್ತಾನಕ್ಕೇ ನುಗ್ಗಿ ಬಗ್ಗುಬಡಿದು, ವಾಜಪೇಯಿರಂತಹ ಸಜ್ಜನನಿಂದ ‘ದುರ್ಗಿ’ ಅಂತ ತಾರೀಫ್ ಮಾಡಿಸಿಕೊಂಡ ಇಂದಿರಾಗಾಂಧಿನಾ, ಜಂಟ್ಲಮೆನ್ ರಾಜೀವಗಾಂಧಿನಾ ಕೊಂದಿದ್ದು ನಾವಾ? ಹಿಂದುಗಳಲ್ಲೂ ಭಯೋತ್ಪಾದಕರಿಲ್ಲವೆ ಅಂತ ಕೇಳಿದ್ರೆ ಉರ್ಕೊಂಡು ಬೀಳ್ತಿರಲ್ವೆ. ಭಯೋತ್ಪಾದಕರಿಗೆ ಯಾವ ಜಾತಿ? ಯಾವ ಧರ್ಮ? ಅವರಿಗೆ ಬೇಕಿರೋದು ಗೆಲವೂ ಅಲ್ಲ. ಎದುರಿಗೆ ನಿಂತು ಹೋರಾಡೋರಿಗೆ ಸೋಲು ಗೆಲವು ಮುಖ್ಯ. ಮೋಸಗಾರರಿಗೆ ಬೇಕಿರೋದು ನೆತ್ತರು. ಮೊನ್ನೆ ಅಸುನೀಗಿದ ನಲವತ್ತು ನಾಲ್ಕಕ್ಕೂ ಹೆಚ್ಚು ಸೈನಿಕರಲ್ಲಿ ನಸೀರ್ ಅಹ್ಮದ್ ಕೂಡ ಇದ್ದನಲ್ಲ. ಅವನದ್ದು ದೇಶನಿಷ್ಠೆಯಲ್ಲವೆ? ಜೀವ ಅಲ್ಲವೆ? ಕುಟುಂಬಸ್ಥನಲ್ಲವೆ? ನೆನಪಿಸಿಕೊಳ್ಳೋರೇ ಇಲ್ಲ! ಹಡಬೆ ಚಾನಲ್‍ನವರೂ ತುಟಿಬಿಚ್ಚಲಿಲ್ಲ! ಯಾರಿಗೂ ನಾವು ನೀವೆಲ್ಲಾ ಒಟ್ಟಿಗೆ ಬಾಳೋದು ಬೇಕಿಲ್ಲ. ದೇಶದ ಶಕ್ತಿ ಹೆಚ್ಚೋದೂ ಬೇಕಿಲ್ಲ.

ರಾಜಕಾರಣಿಗಳ ಪಾಲಿಗೆ ನಾವು ಕೇವಲ ಮತಬ್ಯಾಂಕ್. ನಾವೇನು ಅರ್ಜಿ ಹಾಕ್ಕೊಂಡು ಹುಟ್ಟಿದ್ದೆವಾ? ಕನ್ನಡ ಮಾತನಾಡೋರೆಲ್ಲಾ ಕನ್ನಡಿಗರು ಅನ್ನೋದಾದ್ರೆ ನಾವೂ ಕನ್ನಡಿಗರು. ಹಿಂದಿ ಒಂದಿಷ್ಟು ಗೊತ್ತು. ಉರ್ದು ಗೊತ್ತೇ ಇಲ್ಲ. ನಮ್ಮ ಮಕ್ಕಳೂ ಕಾನ್ವೆಂಟಿಗೇ ಹೋಗೋದು. ಹೀಗೆಲ್ಲಾ ಪ್ರಮಾಣೀಕರಿಸಬೇಕಾದ್ದೂ ಎಂತಹ ಪರಿಶಾನಿ ನೋಡಿ. ದಾಡಿ ಬಿಟ್ಟರೂ ತಪ್ಪು ಬುರ್ಕಾ ತೊಟ್ಟರೂ ತಪ್ಪು. ಒಂದು ಹಿಡಿಯಷ್ಟು ಪ್ರೀತಿ ತೋರಿಸಿದರೂ ಸಾಗರದಷ್ಟು ಪ್ರೀತಿ ಕೊಡೋರು ಕಣ್ರಿ ನಾವು. ಸಲೀಮ್ ಅನಾರ್ಕಲಿ, ಲೈಲಾ ಮಜ್ನು, ಶಿರಿನ್ ಪರಿಹಾದ್ ರಕ್ತವೇ ನಮ್ಮಲ್ಲೂ ಹರೀತಿದೆ. ನಮ್ಮಲ್ಲೂ ಸೂಫಿ ಸಂತರು, ಕಲಾಂನಂತಹ ವಿಜ್ಞಾನಿಗಳು ಹುಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಲಡಾಯಿಗೈದ ಟಿಪ್ಪುನಂತಹ ಶೂರರೂ ಹುಟ್ಟಿದ್ದಾರೆ. ಟಿಪ್ಪು ಹೋರಾಡಿದ್ದು ತನ್ನ ಪಟ್ಟಪದವಿಗಳಿಗಾಗಿ ಅಂತ ವಾದ ಹೂಡೋದು ಯಾವ ನ್ಯಾಯ? ಹಾಗಾದರೆ ಝಾನ್ಸಿರಾಣಿ, ಕಿತ್ತೂರ ರಾಣಿ, ಅಬ್ಬಕ್ಕ ಹೋರಾಡಿದ್ದೇಕೆ? ಇವರೆಲ್ಲಾ ಬ್ರಿಟಿಷರೊಂದಿಗೆ ರಾಜಿಯಾಗಿ ಹಾಯಾಗಿರಬಹುದಿತ್ತಲ್ಲ. ಹಾಗಾಗಿದ್ದಿದ್ದರೆ ಭಾರತ ದೇಶ ಎಂದಿಗೂ ನಮ್ಮದಾಗುತ್ತಿರಲಿಲ್ಲ. ಗಾಂಧೀಜಿ ಬರುವವರೆಗೂ ಹೋರಾಟದ ಕಾವನ್ನು ಕಾಪಾಡಿಕೊಂಡು ಬಂದ ದೇಶಪ್ರೇಮಿಗಳಲ್ಲವೆ ಇವರು? ಈಗೀಗ ಊಟ ಸೇರ್ತಾ ಇಲ್ಲ. ನಿದ್ರೆ ಬರ್ತಾ ಇಲ್ಲ. ಹೊರಗೆ ಹೆಜ್ಜೆ ಇಡಲೂ, ಕಚೇರಿಯಲ್ಲಿ ದುಡಿಯಲೂ ಮುಜುಗರ. ಯಾರೇನಂದರೂ ಸಹನೆಗೆಡುವಂತಿಲ್ಲ. ಬೈದವರನ್ನ ಬಂಧುಗಳಯ್ಯಾ ಅಂತ ಬಸವಣ್ಣೋರೇ ಅಂದಾಗ ನಮ್ಮಂಥವರ ಪಾಡೇನು. ನಾವೂ ದೇಶವಾಸಿಗಳಲ್ಲವೆ. ಭಾಯಿ ಔರ್ ಬೆಹನ್‍ಗಳಲ್ಲವೆ? ಸೈನಿಕರಲ್ಲಿ ಜಾತಿಮತ ಹುಡುಕೋದು ಸಣ್ಣತನವಲ್ಲವೆ

ನಮ್ಮವರೂ ಸೇನೆಯಲ್ಲಿಲ್ಲವೆ? ಯಾರೂ ಸತ್ತೇ ಇಲ್ಲವೆ!? ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ವಿಷವೃಕ್ಷವನ್ನ ಒಂದೇ ಸಲ ಕಿತ್ತು ಹಾಕಿ ನೆಮ್ಮದಿಯಾಗಿ ಬಾಳಲಾದರೂ ಅವಕಾಶ ಕೊಡಿ. ಮುಖ್ಯವಾಹಿನಿಗೆ ಬನ್ನಿರೆಂಬ ವಾಹಿನಿಗಳೇ ವಿಷಜಂತುಗಳಂತೆ ನೋಡುವುದು ಸುಳ್ಳೇ? ನಮ್ಮಲ್ಲಿಯೇ ಬಡಾ ಆದ್ಮಿಗಳು ಮಿಲಿಯನಿಯರ್ಸ್ ಹಾಯಾಗಿ ಮಹಲುಗಳಲ್ಲಿದ್ದಾರೆ. ಮಿಡ್ಲ್‍ಕ್ಲಾಸ್‍ಗಳ ಗತಿಯೇನು? ಸೇನೆಗೆ ಸೇರಿ ದೇಶಪ್ರೇಮವನ್ನು ಸಾಬೀತು ಮಾಡುವ ವಯಸ್ಸೂ ನನ್ನದಲ್ಲ. ಪರರನ್ನು ಕೊಂದರೆ ಜನ್ನತ್ ಸಿಗುವುದೆಂದು ನಂಬಿದವನೂ ಅಲ್ಲ. ವಾರ್‍ಗಿಂತ ಪ್ಯಾರ್ ಈವತ್ತು ಮುಖ್ಯ. ಹೊರದೇಶಗಳಿಗಿಂತ ನಾವಿಲ್ಲಿ ಸುಖವಾಗಿಯೂ ಸುರಕ್ಷಿತವಾಗಿಯೂ ಇದ್ದೇವೆ. ಆದರೆ ಬಾಳಲು ಸುಖ ಸುರಕ್ಷತೆಗಿಂತ ನಂಬಿಕೆ ಮುಖ್ಯ ಕಣ್ರಿ. ದೇಶಭಕ್ತರೆಂದು ಪ್ರೂವ್ ಮಾಡಲು ಎಲ್ಲರ ಜೊತೆ ಪಾಕ್ ಧ್ವಜ ಸುಟ್ಟೆವು. ಮಡಿದ ಧೀರರಿಗಾಗಿ ಕ್ಯಾಂಡಲ್ ಹಿಡಿದೆವು. ಕವಿತೆ ಬರೆದು ಹಾಡಿದೆವು. ಭಾರತಮಾತಾಕಿ ಜೈ ಅಂತ ಕೂಗಿದ್ದಾಯಿತು. ರಾಮಮಂದಿರ ಕಟ್ಟೋಣ ಅಂದಿದ್ದಾಯಿತು. ಹೇಗೆ ನಂಬಿಸೋದು ನಿಮ್ಮನ್ನು! ನೀವೇ ಹೇಳಿ ಕೊಡ್ರಪ್ಪಾ? ಬೆಂಕಿ ಮಧ್ಯೆ ಬದುಕೋದು ಹೇಗೆ. ನಮಗೆ ಬದುಕಲಾದರೂ ಯಾವ ದೇಶವಿದೆ? ಈ ದೇಶ ನಮ್ಮದೂ ಅಲ್ಲವೆ? ಕಾಪಾಡೋದು ಜನ್ನತ್. ನೆರೆಗೆ ಹೊರೆಯಾಗದಿದ್ದರದೇ ಜನ್ನತ್. ನೀವು ತಿನ್ನೋದು ಉಡೋದನ್ನೇ ಅಲ್ಲವೆ ನಾವೂ ಉಡೋದು ತಿನ್ನೋದು. ದಲಿತರೂ ನಿಮ್ಮವರೆ. ನೀವು ಅವರನ್ನು ಮುಟ್ಟೋಕೇ ಹಿಂಜರಿತೀರಲ್ಲ. ನಾವೆಂದೂ ಹಾಗೆ ವರ್ತಿಸಿದವರಲ್ಲ. ನಿಮ್ಮ ದೇವಾಲಯಗಳಿಗೆ ನಾವು ಬಂದಂಗೆ ನೀವು ಮಸೀದಿಗಳಿಗೇಕೆ ಬರೋದಿಲ್ಲ! ಮಸೀದಿಗಳಿಗೆಂದೂ ನಾವು ಬೀಗವೇ ಹಾಕಿದವರಲ್ಲ. ದೇವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆವ ಕೋಮುವಾದಿ ರಾಜಕಾರಣಿಗಳನ್ನು ನಂಬದಿರಿ. ನಿಮ್ಮೊಡನೆ ಒಟ್ಟಾಗೇ ಬಾಳುತ್ತಿರುವ ನಮ್ಮನ್ನು ನಂಬಿ ಪ್ಲೀಸ್. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನೀವು ಪ್ರೀತಿಸಿ ದ್ವೇಷಿಸಿ, ನಮ್ಮ ಸಾವು ಬದುಕು ಈ ನೆಲದಲ್ಲಿಯೇ. ಅಚ್ಚೆದಿನ್ ಬಾರದಿದ್ದರೆ ಬೇಡ, ಬುರೆದಿನ್ ಬಾರದಿದ್ದರೆ ಬಸ್-ಸಾಕಪ್ಪ. ಖುದಾನಲ್ಲಿ ನನ್ನ ದುವಾ ಇದೆ. ಬೊಗಸೆಯಿಂದ ಮುಖ ವರೆಸಿಕೊಂಡ ಇಸ್ಮಾಯಿಲ್ಗೆ ಕೆನ್ನೆಯ ಮೇಲಿಳಿದ ಕಣ್ಣೀರು ತಾಕಿದವು. ಎರಡೂ ಭುಜಗಳತ್ತ ನೋಡಿದ ಶಾಸ್ತ್ರ ಮಾಡಿ ನಿಟ್ಟುಸಿರಿನೊಂದಿಗೆ ಪ್ರೇಯರ್ ಮುಗಿಸಿ ಮೇಲೆದ್ದ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...