ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ದರವನ್ನು ಶೇ.22% ರಷ್ಟು ಹೆಚ್ಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಕಾರ್, ವ್ಯಾನ್, ಜೀಪ್ಗಳ ಏಕಮುಖ ಸಂಚಾರ ಟೋಲ್ ದರವನ್ನು ₹135 ರಿಂದ ₹165ಕ್ಕೆ ಏರಿಸಲಾಗಿದೆ. ಆ ಮೂಲಕ ಏಕಾಏಕಿ 30 ರೂ ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರ ದರವು ₹205ರಿಂದ ₹250ಕ್ಕೆ ಏರಿಕೆಗೊಂಡಿದೆ (45 ರೂ ಹೆಚ್ಚಳವಾಗಿದೆ). ಲಘು ವಾಹನಗಳು, ಮಿನಿ ಬಸ್ಗಳ ಏಕಮುಖ ಟೋಲ್ ₹220ರಿಂದ ₹270ಕ್ಕೆ (50ರೂ ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ₹405 (₹75 ಹೆಚ್ಚಳ) ನಿಗದಿ ಮಾಡಲಾಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ₹565ಕ್ಕೆ ಏರಿಕೆ ಆಗಿದೆ (₹105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ₹850 ನಿಗದಿಪಡಿಸಲಾಗಿದೆ (₹ 160 ಹೆಚ್ಚಳವಾಗಿದೆ).
ಅದೇ ರೀತಿಯಾಗಿ 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ₹615 (₹115 ಏರಿಕೆ) ಆಗಿದ್ದು, ದ್ವಿಮುಖ ಸಂಚಾರ ದರ ₹925 ಕ್ಕೆ (₹225 ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ 720 ರೂಗಳಿಂದ ₹885 (₹165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ ₹1,330 (₹250 ಹೆಚ್ಚಳ) ನಿಗದಿ ಮಾಡಲಾಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ₹1,080 (₹200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ₹1,620 (₹305 ಏರಿಕೆ) ನಿಗದಿ ಮಾಡಲಾಗಿದೆ.
ಏಪ್ರಿಲ್ 1 ರಂದು ಈ ದರ ಹೆಚ್ಚಳಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆದರೆ ಚುನಾವಣೆ ಮತ್ತು ಜನಾಕ್ರೋಶಕ್ಕೆ ಮಣಿದು ಆದೇಶ ಹಿಂಪಡೆದಿತ್ತು. ಈಗ ಜೂನ್ 1 ರಿಂದಲೇ ಈ ದರ ಹೆಚ್ಚಳ ಮಾಡಲಾಗಿದೆ. ಆದರೆ ಫಾಸ್ಟ್ ಟ್ಯಾಗ್ ಬಳಸುವುದರಿಂದ ಸವಾರರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಟೋಲ್ ದರ ಹೆಚ್ಚಳ – ಸಂಸದ ಪ್ರತಾಪ್ ಸಿಂಹ ಸಮರ್ಥನೆ
ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಮಾಡುವುದು ಸಹಜ. ಈ ಹೈವೆಗೆ ಏಪ್ರಿಲ್ ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ನಾವು ಇನ್ನೂ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿ ಟೋಲ್ ದರ ಹೆಚ್ಚಳ ಕೈಬಿಡುವಂತೆ ಮನವಿ ಮಾಡಿದ್ದೆವು. ಹಾಗಾಗಿ ಆಗ ಟೋಲ್ ದರ ಹೆಚ್ಚಳ ಆಗಿರಲಿಲ್ಲ. ಈಗ 22% ಏರಿಕೆ ಆಗಿದೆ” ಎಂದಿದ್ದಾರೆ.
ಇದನ್ನೂ ಓದಿ: ದಶಪಥವಲ್ಲ, ಇದು ಆರು ಪಥ: ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಟೋಲ್ ಕಟ್ಟುವವರು ಯಾರು?: ಯೋಜನಾ ನಿರ್ದೇಶಕರ ಹೇಳಿಕೆ