ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಟೋಲ್ ಕಟ್ಟುವವರು ಯಾರು? ಹೀಗಾಗಿಯೇ ನಾವು ಸರ್ವೀಸ್ ರಸ್ತೆ ಪೂರ್ಣ ಮಾಡಿಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ ಶ್ರೀಧರ್ ತಿಳಿಸಿದ್ದಾರೆ.
ರಾಮನಗರದಲ್ಲಿಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ನಾನು ಯಾವತ್ತು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೆಯನ್ನು ದಶಪಥ ರಸ್ತೆ ಎಂದು ಹೇಳಿಲ್ಲ. ನೀವು ಮಾಧ್ಯಮಗಳು ಹಾಗೆ ಬರೆದರೆ ನಾನೇನು ಮಾಡಲಿ? ಕೇಂದ್ರ ಸರ್ಕಾರದ ಕ್ಯಾಬಿನೆಟ್ನಲ್ಲಿ ಆರು ಪಥ ಎಂದೇ ಅನುಮೋದನೆಗೊಂಡಿದೆ” ಎಂದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಯವರು ಸೇರಿದಂತೆ ಎಲ್ಲಾ ಬಿಜೆಪಿಗರು ಇದು ದಶಪಥ ರಸ್ತೆ ಎಂತಲೇ ಪ್ರಚಾರ ಮಾಡಿದ್ದರು. ಆದರೆ ಅಲ್ಲಿರುವ ಕೇವಲ ಆರು ಪಥದ ರಸ್ತೆ. ಇನ್ನ ಸರ್ವೀಸ್ ರಸ್ತೆ ಸಹ ಪೂರ್ಣ ಇಲ್ಲ ಎಂಬ ಉತ್ತರವನ್ನು ಇದೀಗ ಯೋಜನಾ ನಿರ್ದೇಶಕರೆ ನೀಡಿದ್ದಾರೆ.
ರೈಲ್ವೆ ಟ್ಯ್ರಾಕ್ ಬಳಿ ಏಕೆ ಸರ್ವೀಸ್ ರಸ್ತೆ ಕಂಟಿನ್ಯೂಟಿ ಕೊಟ್ಟಿಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, “ದೊಡ್ಡ ಸೇತುವೆಗಳು ಮತ್ತು ರೈಲ್ವೆ ಟ್ರ್ಯಾಕ್ಗಳಿಗೆ ಕಂಟಿನ್ಯೂಟಿ ಕೊಡಬಾರದೆಂದು ಕಾನೂನಿನಲ್ಲಿದೆ. ಹಾಗೆ ಕೊಟ್ಟಲ್ಲಿ ಎಲ್ಲರೂ ಸರ್ವೀಸ್ ರಸ್ತೆಯಲ್ಲಿ ಹೋದರೆ ಇಲ್ಲಿ ಟೋಲ್ ಕಟ್ಟುವವರು ಯಾರು? ಇಲ್ಲಿ ಸರ್ಕಾರಿ ಹಣದಲ್ಲಿ ಕಟ್ಟಿದ್ದೇವೆ. ಕೆಲವೆಡೆ ಖಾಸಗೀ ಸರ್ಕಾರಿ ಸಹಭಾಗಿತ್ವದಲ್ಲಿ ರಸ್ತೆ ಕಟ್ಟಿದಾಗ ಲಾಭ ಬರುವುದನ್ನು ನಾವು ನೋಡಬೇಕಲ್ಲವೆ?” ಎಂದರು.
ಈ ಹೊಸ ರಸ್ತೆಯಲ್ಲಿ ಅಪಘಾತಗಳಾಗುತ್ತಿವೆ. ಹಿಂದೆ ಮಳೆ ನೀರು ತುಂಬಿಕೊಂಡಿತ್ತು. ಕಳ್ಳತನ ನಡೆದಾಗ ಸಹಾಯ ಕೇಳಿದರೂ ಹೆದ್ದಾರಿ ಪ್ರಾಧಿಕಾರ ನೆರವಿಗೆ ಬಂದಿಲ್ಲ ಎಂಬ ಪ್ರಶ್ನೆಗೆ “180 ಮಿ.ಮೀ ಮಳೆಯಾದರೆ ನಾನು ಹೊಣೆಯೇ? ಇನ್ನು ಪ್ರತಿಯೊಬ್ಬ ಪ್ರಯಾಣಿಕರಿಗೂ ಅವನದೇ ಆದ ಜವಾಬ್ದಾರಿ ಇರಬೇಕು. ಅವರವರ ಜವಾಬ್ದಾರಿ ಅರಿತುಕೊಂಡು ಹೋಗಬೇಕೆ ಹೊರತು ಯಾರೂ ಸಹಾಯಕ್ಕೆ ಬರುವುದಿಲ್ಲ” ಎಂದರು.
ಕಳಪೆ ಕಾಮಗಾರಿಯ ಬಗ್ಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದ, ಓರಿಸ್ಸಾದ ಅಧಿಕಾರಿಗಳು ಬಂದು ಪರೀಕ್ಷಿಸಿ ಉತ್ತಮವಾಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ನೀವು ಒಂದು ಮನೆ ಕಟ್ಟುತ್ತೀರಿ ಎಂದಿಟ್ಟುಕೊಳ್ಳಿ. ಅದು ಶೇ.ನೂರರಷ್ಟು ಕ್ವಾಲಿಟಿ ಇರುತ್ತದೆಯೇ? ಒಂದೇ ದಿನಕ್ಕೆ ಸರಿ ಹೋಗುತ್ತದೆಯೇ ಎಂಬ ಹಾರಿಕೆಯ ಉತ್ತರ ನೀಡಿದರು.
ಯಾಕಿಷ್ಟು ಬೇಜವಾಬ್ದಾರಿ ಉತ್ತರ ನೀಡುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ಆಗದೇ ಅವರು ಸುದ್ದಿಗೋಷ್ಠಿಯಿಂದಲೇ ಹೊರನಡೆದರು.
ಇದನ್ನೂ ಓದಿ; 2017ರ ಗೂಗಲ್ ಫೋಟೊ ತೋರಿಸಿ ರಸ್ತೆ ಕಿತ್ತುಬಂದಿಲ್ಲವೆಂದು ಸುಳ್ಳು ಹೇಳಿಕೆ: ಸಿಕ್ಕಿಬಿದ್ದ ಸಂಸದ ಪ್ರತಾಪ್ ಸಿಂಹ