ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣದ ಕ್ರೆಡಿಟ್ ಪಡೆಯಲು ಹರಸಾಹಸ ಪಡುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರವರು 2017ರಲ್ಲಿ ವೆಬ್ಸೈಟ್ನಲ್ಲಿ ಪ್ರಕಟಗೊಂಡ ಫೋಟೊ ತೋರಿಸಿ ರಸ್ತೆ ಕಿತ್ತುಬಂದಿಲ್ಲವೆಂದು ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಿದರು. ಆದರೆ ಉದ್ಘಾಟನೆಯಾದ ಮರುದಿನವೇ ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆಯ ಟಾರ್ ಕಿತ್ತು ಬಂದಿದೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ರಸ್ತೆ ಕಿತ್ತು ಬಂದಿಲ್ಲ ಎಂದು ವಾದ ಮಾಡಿದ್ದ ಪ್ರತಾಪ್ ಸಿಂಹರವರು, “ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದರು. ಅದರೊಟ್ಟಿಗೆ ರಸ್ತೆ ಕಿತ್ತುಬಂದಿರುವುದರ ಕುರಿತ ಪ್ರಜಾವಾಣಿ ಪತ್ರಿಕೆ ವರದಿಯ ಫೋಟೊ ಮತ್ತು ಬೆಂಗಳೂರು ಮೈಸೂರು ಹೆದ್ದಾರಿಯ Expansion joint ಎಂದು ಮತ್ತೊಂದು ಫೋಟೊವನ್ನು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ರಸ್ತೆ ಕಿತ್ತು ಬಂದಿರುವ ಆರೋಪವನ್ನು ನಿರಾಕರಿಸಿದ್ದರು.
ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ. pic.twitter.com/MqoCSJYlDt
— Pratap Simha (@mepratap) March 15, 2023
ಆದರೆ ಸಂಸದ ಪ್ರತಾಪ್ ಸಿಂಹರವರು ಬೇರೆ ಫೋಟೊ ತೋರಿಸಿ, ರಸ್ತೆ ಸರಿಯಾಗಿತ್ತು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹಲವು ಪ್ರಜ್ಞಾವಂತರು ಮತ್ತು ಕಾಂಗ್ರೆಸ್ ಪಕ್ಷ ಆರೋಪಿಸಿತ್ತು. ಈ ಕುರಿತು ಒಂದಷ್ಟು ಸಂಶೋಧನೆ ನಡೆಸಿದಾಗ ಪ್ರತಾಪ್ ಸಿಂಹರವರು ಹಂಚಿಕೊಂಡಿರುವ ಫೋಟೊ ಅಕ್ಟೋಬರ್ 05, 2017ರಲ್ಲಿಯೇ C for Civil ಎಂಬ ವೆಬ್ಸೈಟ್ನಲ್ಲಿ ಪ್ರಕಟಗೊಂಡಿರುವುದು ಕಂಡುಬಂದಿದೆ. ಅದರ ಸ್ಕ್ರೀನ್ ಶಾಟ್ ಅನ್ನು ಈ ಕೆಳಗೆ ನೋಡಬಹುದು.
ಪ್ರತಾಪ್ ಸಿಂಹರವರು ಹಂಚಿಕೊಂಡಿರುವ ಹಳೆಯ ಫೋಟೊದಲ್ಲಿನ ರಸ್ತೆ ಬದಿಯ ಡಿವೈಡರ್ಗೆ ಹಳದಿ – ಕಪ್ಪು ಬಣ್ಣ ಬಳಿಯಲಾಗಿದೆ. ಆದರೆ ಸದ್ಯ ಕಿತ್ತು ಹೋಗಿರುವ ಬೆಂಗಳೂರು ಮೈಸೂರು ರಸ್ತೆ ಬದಿಯ ಡಿವೈಡರ್ಗೆ ಬಿಳಿ ಮತ್ತು ಕಪ್ಪು ಬಣ್ಣ ಬಳಿಯಲಾಗಿದೆ. ಅಂದರೆ ಸಂಸದರು ತಮ್ಮ ಹುಳುಕು ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಹಲವು ಪ್ರಜ್ಞಾವಂತರು ಆರೋಪಿಸಿದ್ದಾರೆ.
ಪ್ರತಾಪೂ ಏನು ಮಾಡಿದಾನೆ …. ಗೂಗಲ್ ಗೆ ಹೋಗಿ ಜಾಯಿಂಟ್ ಅಂತ ಏನೋ ಸರ್ಚ ಮಾಡಿದಾನೆ… ಈ ಪೋಟೋ ಸಿಕ್ಕಿದೆ…. ಈ ಪೋಟೋ ಎತ್ತಿಕೊಂಡು ಮೈಸೂರು ಬೆಂಗಳೂರು ರೋಡ್ ರಿಪೇರಿ ಇಸ್ಟೆ ಅಂತ ಬಳಾಂಗ್ ಶುರು ಮಾಡಿದ್ದಾನೆ ಪ್ರೆಂಡ್ಸ… ಎಂದು ಸಾಮಾಜಿಕ ಕಾರ್ಯಕರ್ತರಾದ ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಎಷ್ಟು ಸುಲಭವಾಗಿ ಸಂಸದರು ಸುಳ್ಳು ಹೇಳ್ತಿದ್ದಾರೆ.
ಮೊದಲ ಫೋಟೋದಲ್ಲಿ ರಸ್ತೆಯ ಬದಿಯಲ್ಲಿ ಹಳದಿ, ಕಪ್ಪು ಬಣ್ಣವೇ ಇಲ್ಲ.
ಎರಡನೆಯ ಫೋಟೋದಲ್ಲಿ ಹಳದಿ, ಕಪ್ಪು ಬಣ್ಣ ಇದೆ.
ಎಷ್ಟು ಚನ್ನಾಗಿ ಒಂದಕ್ಕೊಂದು ಸಂಬಂಧವೇ ಇಲ್ಲದ ಬೇರೆ ಬೇರೆ ಫೋಟೋಗಳನ್ನ ತೋರಿಸಿ ಜನರನ್ನ ಮಂಗ ಮಾಡ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ಶರತ್ ಚಂದ್ರರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ ಸಹ ಕಿಡಿಕಾರಿದೆ. “ಮಾನ್ಯ ಸಂಸದರೇ, ಯಾರ ಕಿವ ಮೇಲೆ ಹೂವ ಇಡ್ತೀದಿರಿ? ಒಂದರಲ್ಲಿ ಹಳದಿ ಪಟ್ಟಿ, ಮತ್ತೊಂದರಲ್ಲಿ ಬಿಳಿ ಪಟ್ಟಿ, ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ? ಅಂದಹಾಗೆ
◆ನ್ಯೂನ್ಯತೆಗಳಿರುವ ರಸ್ತೆಯನ್ನು ತುರತುರಿಯಲ್ಲಿ ಉದ್ಘಾಟಿಸಿದ್ದೇಕೆ?
◆ಇಂತಹ ಹಲವು ನ್ಯೂನ್ಯತೆಗಳಿಗೆ 80 ಅಪಘಾತಗಳಾದವೇ?
◆ನ್ಯೂನ್ಯತೆಯ ರಸ್ತೆಗೆ ಜನ ಟೋಲ್ ನೀಡಬೇಕೆ?” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಮಾನ್ಯ ಸಂಸದರೇ, ಯಾರ #KiviMeleHoova ಇಡ್ತೀದಿರಿ?
ಒಂದರಲ್ಲಿ ಹಳದಿ ಪಟ್ಟಿ, ಮತ್ತೊಂದರಲ್ಲಿ ಬಿಳಿ ಪಟ್ಟಿ, ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ?
ಅಂದಹಾಗೆ
◆ನ್ಯೂನ್ಯತೆಗಳಿರುವ ರಸ್ತೆಯನ್ನು ತುರತುರಿಯಲ್ಲಿ ಉದ್ಘಾಟಿಸಿದ್ದೇಕೆ?
◆ಇಂತಹ ಹಲವು ನ್ಯೂನ್ಯತೆಗಳಿಗೆ 80 ಅಪಘಾತಗಳಾದವೇ?
◆ನ್ಯೂನ್ಯತೆಯ ರಸ್ತೆಗೆ ಜನ ಟೋಲ್ ನೀಡಬೇಕೆ? https://t.co/O028dID9TZ— Karnataka Congress (@INCKarnataka) March 15, 2023
ಒಟ್ಟಿನಲ್ಲಿ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣದ ಕ್ರೆಡಿಟ್ ಪಡೆಯಲು ಬಿಜೆಪಿ ಸರ್ಕಾರ ಮತ್ತು ಸಂಸದ ಪ್ರತಾಪ್ ಸಿಂಹರವರು ಹಲವಾರು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಪ್ರತಾಪ್ ಸಿಂಹರವರಂತೂ ವಾರಕ್ಕೊಮ್ಮೆಯಾದರೂ ಫೇಸ್ಬುಕ್ ಲೈವ್ ಬಂದು ಕಾಮಗಾರಿ ಕುರಿತು ಮಾತನಾಡುತ್ತಿದ್ದರು. ಆದರೆ ಕಳಪೆ ಮತ್ತು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ, ಕಮಿಷನ್ ಹೊಡೆಯಲಾಗಿದೆ, ಅಧಿಕ ಟೋಲ್ ಮೂಲಕ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಪ್ರತಿನಿತ್ಯ ಕೇಳಿ ಬರುತ್ತಿವೆ. ಈಗಾಗಲೇ 80ಕ್ಕೆ ಹೆಚ್ಚು ಅಪಘಾತಗಳು ಸಂಭವಿಸಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಕ್ರೆಡಿಟ್ ಸಹ ಬಿಜೆಪಿಯವರಿಗೆ ಸಲ್ಲಬೇಕೆಲ್ಲವೆ ಎಂಬ ಆಕ್ರೋಶ ಸಹ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಉದ್ಘಾಟನೆಯ ಮರುದಿನವೇ ಕಿತ್ತೋದ ಟಾರ್; ಟೋಲ್ ಸಂಗ್ರಹಕ್ಕೆ ವಿರೋಧ