ಸಂಸದ ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ನಾಯಕರಿಗೆ ಖಡಕ್ ಉತ್ತರ ನೀಡಿದ್ದಾರೆ.
ಕಳೆದ ವಾರ ಲಂಡನ್ನಲ್ಲಿ ಪಕ್ಷದ ಸಂಸದ ರಾಹುಲ್ ಗಾಂಧಿಯವರು ಹೇಳಿದ ಮಾತುಗಳಿಗೆ ಸಂಬಂಧಿಸಿದಂತೆ, ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಬಿಜೆಪಿ ಮುಖಂಡರು, ಸಂಸತ್ತನಲ್ಲಿ ಅವರನ್ನು ಗುರಿಯಾಗಿಸಿ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.
ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು, ”ದೇಶದ ಪ್ರಜಾಪ್ರಭುತ್ವದ ಮೂಲಭೂತ ರಚನೆಯ ಮೇಲೆ ಭಾರತ ಸರ್ಕಾರ ದಾಳಿ ಮಾಡುತ್ತಿದೆ” ಎಂದು ಹೇಳಿದ್ದರು.
”ಭಾರತ ಮೌನವಾಗಿರಬೇಕೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಯಸುತ್ತದೆ. ಭಾರತದಲ್ಲಿ ಎಲ್ಲೆಡೆ ಬಾಯಿ ಮುಚ್ಚಿಸಲಾಗುತ್ತಿದೆ. ಬಿಬಿಸಿ ಸಾಕ್ಷ್ಯಾಚಿತ್ರವೇ ಇದಕ್ಕೆ ಉದಾಹರಣೆ. ಪತ್ರಕರ್ತರನ್ನು (ಭಾರತದಲ್ಲಿ) ಬೆದರಿಸಲಾಗುತ್ತದೆ, ಅವರ ಮೇಲೆ ದಾಳಿ ಮಾಡಲಾಗುತ್ತದೆ. ಸರ್ಕಾರ ಹೇಳಿದಂತೆ ಕೇಳುವ ಪತ್ರಕರ್ತರಿಗೆ ಬಹುಮಾನ ನೀಡಲಾಗುತ್ತದೆ” ಎಂದು ಕೇಂದ್ರ ಬಿಜೆಪಿಯ ವಿರುದ್ಧ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಆಸ್ಕರ್ ವಿಜೇತ ನಾಟು ನಾಟು ಸಾಂಗ್, ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರ ನಿದೇರ್ಶಿಸಿದ್ದು ಮೋದಿ ಎನ್ನಬೇಡಿ: ಖರ್ಗೆ ವ್ಯಂಗ್ಯ
ಫ್ಯಾಸಿಸ್ಟ್ ಆರ್ಎಸ್ಎಸ್ನ ಭಾಗವಾಗಿರುವ ಬಿಜೆಪಿ, ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ಧಾರೆ. ಲಂಡನ್ ಮೂಲದ ಚಿಂತಕರ ಚಾಥಮ್ ಹೌಸ್ನಲ್ಲಿ ನಡೆದ ಸಂವಾದದಲ್ಲಿ ನಡೆದ ಸಂವಾದದಲ್ಲಿ ಈ ಹೇಳಿಕೆ ನೀಡಿದ್ದರು.
”ಭಾರತದ ಸಂಸ್ಥೆಗಳನ್ನು ಸಂಪೂರ್ಣವಾಗಿ ಹಿಡಿತಕ್ಕೆ ತಗೆದುಕೊಂಡಿರುವ ಆರ್ಎಸ್ಎಸ್, ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನೇ ಬದಲಾಯಿಸಿದೆ” ಎಂದು ರಾಹುಲ್ ಹೇಳಿದ್ದಾರೆ.
ನೋಟು ಅಮಾನ್ಯೀಕರಣ, ಕಿಸಾನ್ ಮಸೂದೆ, ಜಿಎಸ್ಟಿ ಹೇರಿಕೆ ಮತ್ತು ಚೀನಾದ ಆಕ್ರಮಣದ ಕುರಿತಾದ ಚರ್ಚೆಗಳನ್ನು ನಡೆಸಲು ಪ್ರತಿಪಕ್ಷಗಳಿಗೆ ಯಾವುದೇ ಅವಕಾಶ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ, ಎರಡೂ ಮನೆಗಳು ಸೋಮವಾರದಿಂದ ಪ್ರಾರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತದ ಮೊದಲ ಎರಡು ದಿನಗಳು ಗದ್ದಲ ಗಲಾಟೆ ನಡೆದಿದೆ. ಬುಧವಾರ ಕೂಡ ಬಿಜೆಪಿ ಸಂಸದರಿಂದ ಕ್ಷಮೆಯಾಚಿಸುವ ಬೇಡಿಕೆಯ ಮಧ್ಯೆ ಲೋಕಸಭಾ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ಭಾರತವನ್ನು ದೂಷಿಸುತ್ತಿದ್ದಾರೆಂದು ಬಿಜೆಪಿ ನಾಯಕರು ಮತ್ತು ಹಲವಾರು ಹಿರಿಯ ಮಂತ್ರಿಗಳು ಆರೋಪಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಂತರಿಕ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಬುಧವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ”ಮೋದಿ ಅವರು ವಿದೇಶದಲ್ಲಿ ತಮ್ಮ ಅಭಿಪ್ರಾಯಗಳೊಂದಿಗೆ ದೇಶದ ನಾಗರಿಕರನ್ನು ಅವಮಾನಿಸಿದ್ದಾರೆ” ಎಂದು ಹೇಳಿದರು.
“ಮೋದಿ ಜಿ ಐದು-ಆರು ದೇಶಗಳಿಗೆ ಹೋದಾಗ … ಭಾರತದಲ್ಲಿ ಜನಿಸುವುದು ಪಾಪ” ಎಂದಿರುವುದಾಗಿ ಖರ್ಗೆ ಹೇಳಿದರು.
ಹಿರಿಯ ಪತ್ರಕರ್ತೆ ಪಲ್ಲವಿ ಘೋಷ್ ಅವರು, ಈ ಹಿಂದೆ ನರೇಂದ್ರ ಮೋದಿ ಅವರು ವಿದೇಶದಲ್ಲಿ ಮಾತನಾಡಿದ ಕೆಲವು ಭಾಷಣದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
And this from the congress earlier – pic.twitter.com/0A1OoRW4DH
— pallavi ghosh (@_pallavighosh) March 15, 2023
”ಇಲ್ಲಿ ಪ್ರಜಾಪ್ರಭುತ್ವ ಕಡಿಮೆಯಾಗುತ್ತಿದೆ, ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲಾಗುತ್ತಿದೆ, ಟಿವಿ ಚಾನೆಲ್ಗಳು ಒತ್ತಡಕ್ಕೊಳಗಾಗುತ್ತಿವೆ ಮತ್ತು ಸತ್ಯವನ್ನು ಮಾತನಾಡುವ ಜನರು ಜೈಲಿನಲ್ಲಿದ್ದಾರೆ. ಹಾಗಾಗಿ ಇದನ್ನು ಪ್ರಜಾಪ್ರಭುತ್ವ ಕೊನೆಗೊಳಿಸುವ ಪ್ರಕ್ರಿಯೆ ಅನ್ನದೇ ಮತ್ತೇನನ್ನಬೇಕು? ಎಂದು ಖರ್ಗೆ ಖಾರವಾಗಿಯೇ ಪ್ರಶ್ನಿಸಿದ್ದಾರೆ.