ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಸಂಸದ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಪಿಸಿ ಮೋಹನ್ ಮಹಿಳೆಯೋರ್ವರ ಪ್ರಶ್ನೆ ಉತ್ತರಿಸಲು ಸಾಧ್ಯವಾಗದೆ ಪಲಾಯನ ಮಾಡಿದ ಘಟನೆ ನಡೆದಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಹಲಸೂರು ಲೇಕ್ ಬಳಿ ಬೆಳಿಗ್ಗೆ ವಾಕಿಂಗ್ ಹೋಗುತ್ತಿರುವವರ ಬಳಿ ಮತಯಾಚನೆ ನಡೆಸಲು ಬಂದಿದ್ದರು, ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಪಿಸಿ ಮೋಹನ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಂಸದರಾದ ನಿಮ್ಮನ್ನು ನಾನು ಕ್ಷೇತ್ರದಲ್ಲಿ ನೋಡಿಲ್ಲ ಎಂದು ಹೇಳಿದ್ದಾರೆ. ಆಗ ಸಂಸದರು, ನಾನು ಕ್ಷೇತ್ರದಲ್ಲಿ ಇದ್ದೆ, ನಾನು ಕಿಟ್ ವಿತರಿಸಿದ್ದೇನೆ ಎಂದು ಹೇಳಲು ಮುಂದಾಗಿದ್ದು, ಬಳಿಕ ಮಹಿಳೆ ಪ್ರಶ್ನೆಯನ್ನು ಮುಂದುವರಿಸಿದಾಗ ಸಂಸದರು ಸ್ಥಳದಿಂದ ಪಲಾಯನ ಮಾಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಬಳಿಕ ವಿಡಿಯೋದಲ್ಲಿ ಮಾತನಾಡಿದ ಮಹಿಳೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಸಂಸದ ಪಿಸಿ ಮೋಹನ್ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಹಲಸೂರ್ ಲೇಕ್ ಸ್ಥಿತಿ ತುಂಬಾ ಕೆಟ್ಟದಾಗಿದೆ.ಕೋವಿಡ್ ಸಂದರ್ಭದಲ್ಲಿ ಜನರ ಸಂಪರ್ಕಕ್ಕೆ ಸಿಕ್ಕಿಲ್ಲ, ಜನ ಪಿಸಿ ಮೋಹನ್ ಎಂದರೆ ಯಾರು ಎಂದು ಕೇಳುತ್ತಾರೆ, ನೀವು ಏನು ಮಾಡಿದ್ದೀರಿ ಎಂದು ಕೇಳಿದರೆ, ಅವರು ತಾವು ಮಾಡದ ಕೆಲಸಕ್ಕೆ ಪ್ರಚಾರ ಮಾಡುತ್ತಾ ಹೋಗುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇಂತಹ ಎಂಪಿ ಬೆಂಗಳೂರು ಸೆಂಟ್ರಲ್ಗೆ ಬೇಕಾ, ಜನ ಎಚ್ಚೆತ್ತುಕೊಳ್ಳಿ, ಇಂತಹ ವ್ಯಕ್ತಿಗಳಿಗೆ ದಯವಿಟ್ಟು ಮತ ಹಾಕಲು ಹೋಗಬೇಡಿ ಎಂದು ಆಗ್ರಹಿಸಿದ್ದಾರೆ.ಈ ಕುರಿತ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.
ಈ ಕುರಿತು ವಿಜಯ್ ತೊಟ್ಟತ್ತಿಲ್ ಎಕ್ಸ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬೆಂಗಳೂರು ಸೆಂಟ್ರಲ್ನ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಅವರು ಸಂಸದರಾಗಿ ಕೆಲಸ ಮಾಡಿದ್ದನ್ನು ಪ್ರಶ್ನಿಸಿದಾಗ ನಿಂದಿಸಿ ಓಡಿಹೋದರು. ಬಿಜೆಪಿ ಸಂಸದರು ತಮ್ಮ ಏಳಿಗೆಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ ಮತ್ತು ಜನರಿಗಾಗಿ ಅಥವಾ ಕ್ಷೇತ್ರಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರಿಗೆ ಹಲವೆಡೆ ಮುಜುಗರವಾಗಿದೆ. ಇಂದು ಬೆಂಗಳೂರಿನ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣದಿಂದಾಗಿ ಹಣ ಕಳೆದುಕೊಂಡಿರುವ ಠೇವಣಿದಾರರ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೂಡ ಕೇಳಿ ಬಂದಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಏಪ್ರಿಲ್ 13ರಂದು ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣದಿಂದಾಗಿ ಠೇವಣಿ ಕಳೆದುಕೊಂಡಿದ್ದ ಸಂತ್ರಸ್ತರ ಸಭೆಯನ್ನು ಕರೆಯಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಠೇವಣಿದಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BJP Candidate from Bangalore Central PC Mohan abuses & runs away when questioned about his work as an MP.
People have understood that BJP MP’s only bothered about their prosperity and have not done anything for the people or for the constituency! #NoVoteForBJP pic.twitter.com/n8Kti70stC
— Vijay Thottathil (@vijaythottathil) April 15, 2024
ಇದನ್ನು ಓದಿ: ಇಸ್ರೇಲ್-ಗಾಝಾ ಯುದ್ಧದ ವೇಳೆ ಅತ್ಯಧಿಕ ಪತ್ರಕರ್ತರ ಹತ್ಯೆ: ಸಿಪಿಜೆ ವರದಿ