ಬಂಟ್ವಾಳದ ಪಾಣೆಮಂಗಳೂರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಮೇಲಕ್ಕೆತ್ತಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲ್ಲಡ್ಕ ಬಳಿಯ ಕೊಳಕೀರು ನಿವಾಸಿ ಚಂದ್ರಹಾಸ ಮೂಲ್ಯ ಇವರ ಮಗನಾದ ನಿಶಾಂತ್ (28) ಎಂದು ಗುರುತಿಸಲಾಗಿದೆ. ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯಿಂದ ಹಾರಿದ್ದಾರೆ ಎನ್ನಲಾಗಿದೆ.
ನಿಶಾಂತ್ ಹಾರಿದ್ದನ್ನು ಗಮನಿಸಿದ ಗೂಡಿನಬಳಿಯ ಯುವಕರಾದ ಝಿಯಾದ್ ಗೂಡಿನಬಳಿ, ಮಹೊಮ್ಮದ್ ಗೂಡಿನಬಳಿ, ಶಮೀರ್ ಗೂಡಿನಬಳಿ, ಮುಖ್ತಾರ್ ಅಕ್ಕರಂಗಡಿ, ತೌಸೀಫ್ ಗೂಡಿನಬಳಿ ಮುಂತಾದವರು ತಕ್ಷಣ ನದಿಗೆ ಧುಮುಕಿ ನದಿಯಿಂದ ಅವರನ್ನು ಮೇಲಕ್ಕೆತ್ತಿ ವಾಹನದಲ್ಲಿ ಹಾಕಿಕೊಂಡು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ.
Posted by Naanu Gauri on Sunday, May 24, 2020
ಈ ಬಗ್ಗೆ ನಾನುಗೌರಿ.ಕಾಮ್ ನೊಂದಿಗೆ ಮಾತನಾಡಿದ ಝಿಯಾದ್ ಗೂಡಿನಬಳಿ, “ಯುವಕನೊಬ್ಬ ಸೇತುವೆಯಿಂದ ಹಾರಿದ ಎಂದು ತಿಳಿದೊಡನೆ ನಾವು ಐದು ಮಂದಿ ನದಿಗೆ ಧುಮುಕಿ ಅವರನ್ನು ದಡಕ್ಕೆ ತಂದು, ಬಾಯಿಯ ಮೂಲಕ ಕೃತಕ ಉಸಿರಾಟ ಕೊಟ್ಟು ಹಾಗೂ ಇತರ ಪ್ರಥಮ ಚಿಕಿತ್ಸೆ ಕೊಟ್ಟು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ”
“ಕೆಲವರು ಕೊರೊನಾ ಸಮಯದಲ್ಲಿ ಬಾಯಿಯ ಮೂಲಕ ಉಸಿರಾಟ ಕೊಡಬೇಡಿ ಎಂದರೂ, ಜೀವವೊಂದನ್ನು ಉಳಿಸುವ ಭರದಲ್ಲಿ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪ್ರಥಮ ಚಿಕಿತ್ಸೆ ಕೊಟ್ಟು ಆಸ್ಪತ್ರೆಗೆ ದಾಖಲಿಸಿದರೂ ನಮ್ಮ ಕೈಯಲ್ಲಿ ಜೀವವೊಂದನ್ನು ಉಳಿಸಲು ಆಗಲಿಲ್ಲ ಎನ್ನುವುದೇ ಅತ್ಯಂತ ದುಃಖದ ವಿಷಯ” ಎಂದು ಝಿಯಾದ್ ಬೇಸರಪಟ್ಟರು.
ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಂಟ್ವಾಳ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ತಿಳಿಸಿದ್ದಾರೆ.
ಓದಿ: ಸಿಎಎ ವಿರೋಧಿಗಳ ಬೇಟೆ ಮುಂದುವರಿಕೆ; ಇಬ್ಬರು JNU ವಿದ್ಯಾರ್ಥಿನಿಯರ ಬಂಧನ