ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು 6 ವಾರಗಳಲ್ಲಿ ಘೋಷಿಸಬೇಕು ಎಂದು ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು ತಡೆಹಿಡಿದಿದೆ.
ಬಿಬಿಎಂಪಿ ಕೌನ್ಸಿಲ್ ಅವಧಿ ಸೆ.10ಕ್ಕೆ ಕೊನೆಗೊಂಡಿದ್ದು, ಬೆಂಗಳೂರಿನ 198 ವಾರ್ಡ್ಗಳಿಗೆ ಚುನಾವಣೆ ನಡೆಯಬೇಕಿತ್ತು. “ಬೆಂಗಳೂರು ರಾಜಕೀಯ ಚುನಾವಣ ಪ್ರಚಾರಗಳಿಗೆ ಸಾಕ್ಷಿಯಾಗುತ್ತಿತ್ತು. ಆದರೆ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಮತದಾನವು ಕನಿಷ್ಠ ನಾಲ್ಕರಿಂದ ಆರು ತಿಂಗಳು ವಿಳಂಬವಾಗಬಹುದು” ಎಂದು ಅಧಿಕಾರಿಗಳು 4 ತಿಂಗಳ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ವಿಳಂಬ: ಅಧಿಕಾರಿಗಳದ್ದೇ ಆಡಳಿತ!
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠವು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿತ್ತು.
ಚುನಾವಣೆ ನಡೆಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ನಲ್ಲಿ ಹಲವು ಪಿಐಎಲ್ಗಳು ಸಲ್ಲಿಕೆಯಾಗಿದ್ದವು. ಇದನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಇನ್ನು 6 ವಾರಗಳಲ್ಲಿ ಚುನಾವಣೆ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತ್ತು. ಈಗ ಈ ಆದೇಶವನ್ನು ಸುಪ್ರೀಂ ತಡೆ ಹಿಡಿದಿರುವುದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗಬಹುದು.
ಚುನಾವಣೆ ವಿಳಂಬದ ಬಗ್ಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಪೋರೇಟರ್ಗಳು ಕೋಪಗೊಂಡಿದ್ದು, ಸರ್ಕಾರ ಸಾಂವಿಧಾನಿಕ ಪ್ರಕ್ರಿಯೆಯನ್ನು ಮಟ್ಟಹಾಕಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಗೆದ್ದರೆ ದೆಹಲಿ ಮಾದರಿಯ ’ಮೊಹಲ್ಲಾ ಕ್ಲಿನಿಕ್’ ಆರಂಭ: ಆಮ್ ಆದ್ಮಿ ಪಕ್ಷ