ಕಳೆದೊಂದು ತಿಂಗಳಿಂದ ಸದ್ದು ಮಾಡುತ್ತಿರುವ ಐ ಮಾನಿಟರ್ ಅಡ್ವೈಸರಿ ಹಗರಣದಲ್ಲಿ ಸಿಟ್ ತನಿಖೆ ನಡೆಯುತ್ತಿದ್ದು ಪ್ರತಿ ದಿನವೂ ಹಲವು ಆರೋಪಿಗಳು ಬಲೆಗೆ ಬೀಳುತ್ತಿದ್ದಾರೆ. ಇದುವರೆಗೂ ರಾಜಕಾರಣಿಗಳು, ಆಡಳಿತ ಮಂಡಳಿ ಸದಸ್ಯರ ಹೆಸರುಗಳು ಮಾತ್ರ ಕೇಳಿ ಬರುತ್ತಿದ್ದವು. ಆದರೀಗ ಐಎಂಎ ವಂಚನೆಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಎಲ್ಲರೂ ಪಾಲುದಾರರೆ ಆಗಿದ್ದು ಮಾಲೀಕ ಮನ್ಸೂರ್ ಖಾನ್ನಿಂದ ಲಂಚ ಸ್ವೀಕಾರ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ರವರನ್ನು ಬಂಧಿಸಲಾಗಿದೆ.
2017ರಿಂದಲೇ ಕಂಪನಿಯು ಅವ್ಯವಹಾರಕ್ಕೆ ಕೈ ಹಾಕಿತ್ತು ಮತ್ತು ಜನರಿಗೆ ವಂಚಿಸಲು ಸಿದ್ದತೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ದಾಖಲಾದ ಪರಿಣಾಮ ತನಿಖೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಬೇಕಂತಲೇ ಜಿಲ್ಲಾಧಿಕಾರಿ ವಿಜಯ್ ಶಂಕರ್ರವರು ತನಿಖೆ ನಡೆಸದೆ ಅದನ್ನು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ ನಾಗರಾಜ್ರವರಿಗೆ ವರ್ಗಾಹಿಸಿದ್ದರು. ಇನ್ನು ಇಂತಹ ವ್ಯವಹಾರ ಕುದುರಿಸುವುದರಲ್ಲಿ ನಿಷ್ಣಾತನಾದ ನಾಗರಾಜ್ ತನಿಖೆ ನಡೆಸುವ ನೆಪದಲ್ಲಿ ಮನ್ಸೂರ್ ಖಾನ್ನಿಂದ 4.5 ಕೋಟಿ ಲಂಚ ಪಡೆದು ಸರ್ಕಾರಕ್ಕೆ ಸುಳ್ಳು ವರದಿ ಸಲ್ಲಿಸಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಜುಲೈ 5 ರಂದು ಎಲ್.ಸಿ ನಾಗರಾಜ್ರನ್ನು ವಿಚಾರಣೆಗೊಳಪಡಿಸಿದಾಗ ಅನುಮಾನಗಳು ದಟ್ಟವಾದ ಹಿನ್ನೆಲೆಯಲ್ಲಿ ಅವರನ್ನು ಮತ್ತು ಅವರ ಸಹಚರ ಗ್ರಾಮಲೆಕ್ಕಿಗ ಮಂಜುನಾಥ್ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಈ ವರ್ಷದ ಏಪ್ರಿಲ್ 6 ರಂದು ಜಿಲ್ಲಾಧಿಕಾರಿ ವಿಜಯ್ ಶಂಕರ್ರವರಿಗೆ ಮನ್ಸೂರ್ ಖಾನ್ 1.5 ಕೋಟಿ ಲಂಚ ನೀಡಿದ್ದರು. ನಂತರ ಏಪ್ರಿಲ್ 8ರಂದು ಜಿಲ್ಲಾಧಿಕಾರಿ ವಿಜಯ್ ಶಂಕರ್ರವರು ವಿಚಾರಣೆಯ ಅಗತ್ಯವಿಲ್ಲ ಎಂದು ಷರಾ ಬರೆದು ಸಹಿ ಹಾಕಿದ್ದರು.
ಈ ಆಧಾರದಲ್ಲಿ ಸೋಮವಾರ ಎಸ್ಐಟಿ ಅಧಿಕಾರಿಗಳ ನೋಟಿಸ್ನಂತೆ ವಿಚಾರಣೆಗೆ ವಿಜಯ್ ಶಂಕರ್ರವರು ಹಾಜರಾದಾಗ ಅವರನ್ನು ಸಿಟ್ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಸದ್ಯಕ್ಕೆ ಉಪ ವಿಭಾಗಾಧಿಕಾರಿ ಎಲ್.ಸಿ ನಾಗರಾಜ್ ರವರನ್ನು ಎಸಿಬಿ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದೆ.
ಎಸ್ಐಟಿ ವಿಭಾಗದ ಮುಖ್ಯಸ್ಥ ರವಿಕಾಂತೇಗೌಡ ಮತ್ತು ಅಪರಾಧ ವಿಭಾಗದ ಡಿಸಿಪಿ ಗಿರೀಶ್ ರವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು ತೀವ್ರ ವಿಚಾರಣೆ ಜಾರಿಯಲ್ಲಿದೆ.
ಲಂಚ ಪಡೆದ 1.5 ಕೋಟಿ ಹಣ ಎಲ್ಲಿದೆ ಗೊತ್ತೆ: ಇನ್ನು ವಿಜಯ್ ಶಂಕರ್ ಯಾರಿಗೂ ಅನುಮಾನ ಬರಬಾರದೆಂದು ಲಂಚದ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ನೀಡಿ ತನ್ನ ಮಡದಿ ಮತ್ತು ಮಕ್ಕಳ ಹೆಸರಿನಲ್ಲಿ ಫ್ಲಾಟ್ ಖರೀದಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತು ಆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ವಿಚಾರಣೆ ನಡೆಸುತ್ತಿರುವ ಎಸ್.ಐ.ಟಿ ಅಧಿಕಾರಿಗಳು ಸಂಜೆ ವೇಳೆಗೆ ಸಂಪೂರ್ಣ ಚಿತ್ರಣ ನೀಡಲಿದ್ದಾರೆ.
ಇವರಿಗೆ ಶಿಕ್ಷೆ ಏನು?
ಈಗಾಗಲೇ ಎಲ್.ಸಿ ನಾಗರಾಜ್ ಬಂಧನವಾಗಿ ನಾಲ್ಕು ದಿನಗಳಾದ್ದರಿಂದ ಅವರನ್ನು ಅಮಾನತ್ತು ಮಾಡಬಹುದಾಗಿದೆ. ಈ ಕುರಿತು ಕ್ರಮಗಳು ಜಾರಿಯಲ್ಲಿವೆ ಎಂಬ ಸುದ್ದಿ ಕೇಳಿಬಂದಿದೆ. ಇನ್ನು ಜಿಲ್ಲಾಧಿಕಾರಿ ವಿಜಯ್ ಶಂಕರ್ರವರ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜನರ ಕಥೆ?: ಇನ್ನು ಈ ಹಗರಣದಲ್ಲಿ ನೇರ ಬಲಿಪಶುಗಳಾಗಿರುವ ಸಾವಿರಾರು ಜನ ಇದನ್ನು ಮೂಕದೃಷ್ಟಿಯಿಂದ ನೋಡುತ್ತಿದ್ದಾರೆ. ಒಂದಷ್ಟು ಚಿನ್ನಾಭರಣ, ಒಂದಷ್ಟು ಹಣ ಅಲ್ಲಲ್ಲಿ ಜಪ್ತಿಯಾಗುತ್ತಿರುವುದು ಮತ್ತು ಮನ್ಸೂರ್ ಖಾನ್ ತನ್ನ ವಿಡಿಯೋದಲ್ಲಿ “ನನ್ನ ಆಸ್ತಿ ಮಾರಿ ನಿಮ್ಮ ಹಣ ವಾಪಸ್ ಕೊಡುತ್ತೇನೆ” ಎಂದಿರುವುದು ಜನರಿಗೆ ಒಂದಷ್ಟು ಭರವಸೆ ಮೂಡಿಸಿದೆ.
ಆದರೆ ಈ ಭ್ರಷ್ಟ ಅಧಿಕಾರಿಗಳು ಅಂದೇ ಸರಿಯಾದ ತನಿಖೆ ನಡೆಸಿ ವರದಿ ಸಲ್ಲಿಸಿದ್ದರೆ ಒಂದಷ್ಟು ಜನರಿಗೆ ಮೋಸವಾಗದಂತೆ ತಡೆಗಟ್ಟಬಹುದಾಗಿತ್ತು. ಮತ್ತಷ್ಟು ಜನರು ಈ ಐಎಂಎ ನಂಬಿ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.