Homeಕರ್ನಾಟಕಕನ್ನಡ ಭಾಷೆಯ ಪ್ರಕರಣಕ್ಕೆ ಕೋಮು ಬಣ್ಣ ಕೊಟ್ಟ ಬಿಜೆಪಿ ಸಂಸದ: ತೇಜಸ್ವಿ ನಡೆಗೆ ವ್ಯಾಪಕ ಖಂಡನೆ

ಕನ್ನಡ ಭಾಷೆಯ ಪ್ರಕರಣಕ್ಕೆ ಕೋಮು ಬಣ್ಣ ಕೊಟ್ಟ ಬಿಜೆಪಿ ಸಂಸದ: ತೇಜಸ್ವಿ ನಡೆಗೆ ವ್ಯಾಪಕ ಖಂಡನೆ

- Advertisement -
- Advertisement -

ಜೈನ ದೇವಾಲಯವೊಂದರ ಬ್ಯಾನರ್ ನಲ್ಲಿ ಹಿಂದಿಯಿದ್ದ ಕಾರಣಕ್ಕಾಗಿ ಅದನ್ನು ತೆರವುಗೊಳಿಸಿ ಎಂದು ಕನ್ನಡ ಕಾರ್ಯಕರ್ತರು ಆಗ್ರಹಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ. ಇದೇ ವೇಳೆ ಈ ಘಟನೆಯನ್ನು ಜೈನರ ಮೇಲೆ ರೌಡಿಗಳಿಂದ ಹಲ್ಲೆ ಎಂದು ಕರೆಯುವ ಮೂಲಕ ಸಂಸದ ತೇಜಸ್ವಿ ಸೂರ್ಯ ಕನ್ನಡ ಭಾಷೆಯ ಪ್ರಕರಣವನ್ನು ಕೋಮುವಾದಿಕರಿಸುತ್ತಿದ್ದಾರೆ ಎಂದು ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ.

“ಕೆಲವು ರೌಡಿಗಳಿಂದ ಜೈನ ದೇವಾಲಯದ ಬ್ಯಾನರ್ ಮೇಲೆ ಹಿಂದಿ ಇದ್ದ ಕಾರಣಕ್ಕಾಗಿ ಬೆಂಗಳೂರಿನಲ್ಲಿನ ನಮ್ಮ ಜೈನ ಸಹೋದರರ ಮೇಲೆ ನಡೆಸಿದ ದಾಳಿಯಿಂದ ತೀವ್ರವಾಗಿ ನೋವುಂಟಾಗಿದೆ.

ಅವರು ಬೆಂಗಳೂರಿನಲ್ಲಿ ಉರ್ದು ಬಳಕೆಯನ್ನು ಎಂದಿಗೂ ಪ್ರಶ್ನಿಸುವುದಿಲ್ಲ.

ಕರ್ನಾಟಕಕ್ಕೆ ಕೊಡುಗೆ ನೀಡುವ ಶಾಂತಿಯುತ ಜೈನರನ್ನು ಆಕ್ರಮಣ ಮಾಡುವುದು ನಿಜವಾದ ಕನ್ನಡ ಪ್ರಿಯರಿಗೆ ಮತ್ತು ಕಾರ್ಯಕರ್ತರಿಗೆ ಅಪಚಾರವನ್ನು ತರುತ್ತದೆ”. ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಚಿಂತಕರಾದ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ ನಲ್ಲಿ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.

ಹಿಂದಿ ಭಾಷೆಯಲ್ಲಿದ್ದ ಬ್ಯಾನರ್ ಹರಿದುಹಾಕಿದ್ದಕ್ಕಾಗಿ ಈ ಕನ್ನಡ ಹೋರಾಟಗಾರರನ್ನು ಬಂಧಿಸಲಾಗಿದೆ. ಹಿಂದಿ ಹೇರಿಕೆ ವಿರುದ್ಧದ ಪ್ರತಿರೋಧವನ್ನು ಸಂಸದ ತೇಜಸ್ವಿ ಸೂರ್ಯ, ಇದು ಜೈನ ಧರ್ಮದ ಮೇಲಿನ ದಾಳಿ ಎಂಬಂತೆ ಬಿಂಬಿಸಿ ಟ್ವೀಟ್ ಮಾಡಿ ಅನಗತ್ಯವಾಗಿ ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಇದು ಕನ್ನಡ ಮತ್ತು ಹಿಂದಿಯ ನಡುವೆ ನಡೆಯುತ್ತಿರುವ ಸಂಘರ್ಷ. ಇದರಲ್ಲಿ ಜೈನ, ಹಿಂದು ಎಲ್ಲಿಂದ ಬಂತು? ಈ ರೀತಿ ಧರ್ಮವನ್ನು ಇದಕ್ಕೆ ಎಳೆದು ತರುತ್ತಿರುವವರ ಉದ್ದೇಶವಾದರೂ ಏನು? ಹಿಂದಿಯಲ್ಲಿದ್ದ ಬ್ಯಾನರ್ ಹರಿದುಹಾಕಿರುವುದು ಇದು ಮೊದಲನೇ ಸಲವೇನಲ್ಲ, ಬಹುಷ: ಕೊನೆಯದ್ದೂ ಅಲ್ಲ. ಅದನ್ನು ಅಪರಾಧವೆಂದು ಪರಿಗಣಿಸುವುದಾದರೆ ಆ ಪ್ರತಿರೋಧಕ್ಕೆ ಧರ್ಮವನ್ನು ತಳುಕುಹಾಕಿರುವುದು ಅದಕ್ಕಿಂತಲೂ ದೊಡ್ಡ ಅಪರಾಧ ಅಲ್ಲವೇ?

ಕನ್ನಡಿಗರು ಎಂದರೆ ಕನ್ನಡಿಗರು ಅಷ್ಟೇ, ಅದರಲ್ಲಿ ಹಿಂದು,ಮುಸ್ಲಿಮ್, ಕ್ರಿಶ್ಚಿಯನ್, ಜೈನ ಎಂಬ ಭೇದಗಳಿಲ್ಲ. ಇದು ಎರಡು ಸಾವಿರ ವರ್ಷಗಳ ಕನ್ನಡದ ಇತಿಹಾಸ ಕಲಿಸಿರುವ ಪಾಠ.

ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಸೂಕ್ಷ್ಮಗಳನ್ನೆಲ್ಲ ಗಮನಿಸುವಷ್ಟು ಸಮಯ ಮತ್ತು ಆಸಕ್ತಿ ಇದೆಯೋ ಗೊತ್ತಿಲ್ಲ. ಅವರ ಗಮನಕ್ಕಾದರೂ ಇದು ಬಂದಿದೆಯೋ ತಿಳಿದಿಲ್ಲ. ಕನ್ನಡಿಗರು ಉದ್ಯೋಗಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಗುರುತಿಸಿರುವ ಮುಖ್ಯಮಂತ್ರಿಗಳು ಮೊನ್ನೆ ಸ್ವಾತಂತ್ರ್ಯೋತ್ಸವ ಸಮಾರಂಭದ ಭಾಷಣದಲ್ಲಿ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಹೋರಾಟಗಾರರನ್ನು ಬೆದರಿಸುವ, ಹತ್ತಿಕ್ಕುವ ಪ್ರಯತ್ನ ಪೊಲೀಸರಿಂದ ನಡೆದಿದೆ.

ಇದು ಸಂವಿಧಾನೇತರ ಶಕ್ತಿಗಳು ಜಾಗೃತಗೊಳ್ಳುತ್ತಿರುವ ಮತ್ತು ಚುನಾಯಿತ ಸರ್ಕಾರದ ಅಧಿಕಾರವನ್ನು ಹೈಜಾಕ್ ಮಾಡುವ ಪ್ರಯತ್ನದ ಆರಂಭ.. ಮುಖ್ಯಮಂತ್ರಿಗಳು ಜಾಗೃತರಾಗಿ ತಕ್ಷಣ ಮಧ್ಯಪ್ರವೇಶಿಸಿ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಲು ಆದೇಶ ನೀಡಬೇಕು. ಇದರ ಮೂಲಕ ರಾಜ್ಯಕ್ಕೆ ತಾವೇ ಮುಖ್ಯಮಂತ್ರಿ ಎನ್ನುವುದನ್ನು ಸಾರಿ ಹೇಳಬೇಕು. ಎಂದು ದಿನೇಶ್ ಅಮೀನ್ ಮಟ್ಟು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಯುವ ಕಾಂಗ್ರೆಸ್ ನ ಶ್ರೀವತ್ಸ ರವರು ಟ್ವೀಟ್ ಮಾಡಿದ್ದು,

  1. ಜೈನರ ಮೇಲೆ ಯಾವುದೇ ದಾಳಿ ನಡೆದಿಲ್ಲ. ಕನ್ನಡ ಪರ ಹೋರಾಟಗಾರರು ಹಿಂದಿ ಫ್ಲೆಕ್ಸ್ ಅನ್ನು ಮಾತ್ರ ತೆಗೆದಿದ್ದಾರೆ. ಅವರು ರೌಡಿಗಳಲ್ಲ.

2. ಜೈನ ಧರ್ಮವು ಪ್ರಾಸಂಗಿಕವಾಗಿದೆ. ಫ್ಲೆಕ್ಸ್‌ಗಳಲ್ಲಿ ಕನ್ನಡ ಇರಬೇಕು ಎಂಬುದು ನಿಯಮ.

3. ಅರೇಬಿಕ್ ಭಾಷೆಯಲ್ಲಿ ಎಳೆಯುವ ಮೂಲಕ ಕೋಮುವಾದದ ಪ್ರಯತ್ನ ಮಾಡಲಾಗುತ್ತಿದೆ.

ಆಧುನಿಕ ಮಹಾನಗರದ ಸಂಸದ, ಪರಿಹಾರಗಳನ್ನು ಕಂಡುಕೊಳ್ಳಬೇಕೆ ಹೊರತು ಪ್ರಚೋದಿಸಬಾರದು ಎಂದಿದ್ದಾರೆ.

“ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್ ಆಕ್ರಮಣಕಾರಿ ನಿರಂಕುಶ ಆಡಳಿತದ ಭಾಗವಾಗಿ ಹೊರಬಂದಿದೆ, ಇದು ಯಾವುದೇ ಕಾರಣಕ್ಕೂ ಸರಿ ಇಲ್ಲ” ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕದ ಮುಖಂಡರಾದ ಕೆ.ಎಲ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ಫೇಸ್ ಬುಕ್ ನಲ್ಲಿ Karnataka Jains ಎಂಬ ಪೇಜ್ ನಿಂದ “ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡುವವರನ್ನು ನಾವು ಬೆಂಬಲಿಸುವುದಿಲ್ಲ.” ಎಂದು ಪೋಸ್ಟ್ ಹಾಕಲಾಗಿದ್ದು ಅದಕ್ಕೆ ಬಹಳಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.

ಕಿಡಿಗೇಡಿಗಳೆಲ್ಲಾ ಸಂಸದರಾದರೆ ಏನಾಗುತ್ತೆ ಎಂಬುದಕ್ಕೆ ತೇಜಸ್ವಿ ಸೂರ್ಯನೇ ಸಾಕ್ಷಿ. ಯಾರೋ ಹಿಂದಿಯಲ್ಲಿ ಬೋರ್ಡು ಹಾಕಿಕೊಂಡಿದ್ದನ್ನು ಇನ್ಯಾರೋ ಹರಿದರಂತೆ. ಈ ಮಹಾಶಯ ಇಂತಹ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ರೀತಿ ನೋಡಿ….
ಇವನ ಟ್ವೀಟ್ ಎರಡು ಅರ್ಥ ಹೊರಡಿಸುತ್ತೆ
1) ಜೈನರೆಲ್ಲಾ ಹಿಂದಿ ಭಾಷಿಕರು ಅಂತ
2) ಕನ್ನಡಪರ ಹೋರಾಟಗಾರರು ಜೈನರ ವಿರೋಧಿಗಳು ಅಂತ.
ದಯವಿಟ್ಟು ಇಂತಹ ಕಿಡಿಗೇಡಿಗಳನ್ನು ನಂಬಬೇಡಿ. ಎಲ್ಲದ್ದಕ್ಕೂ ಧರ್ಮವನ್ನು ಎಳೆತಂದು ಬೆಂಕಿ ಹಚ್ಚುವುದು, ಗಲಭೆ ಹತ್ತಿಸುವುದು ಇವರುಗಳು ಲಾಗಾಯ್ತಿನಿಂದಲೂ ಮಾಡಿಕೊಂಡು ಬಂದಿರುವ ಚೇಷ್ಟೆಯೇ ಆಗಿದೆ.

ಜೈನರೇ ಆಗಿರಲಿ ಇನ್ಯಾವುದೇ ಧರ್ಮದವರೇ ಆಗಿರಲಿ ಕರ್ನಾಟಕದಲ್ಲಿ ಇದ್ದುಕೊಂಡು ವ್ಯಾಪಾರ/ವ್ಯವಹಾರ ಮಾಡುತ್ತಿದ್ದರೆ ಕನ್ನಡ ಕಲಿಯಲಿ, ಕನ್ನಡಿಗರಿಗೆ ಗೌರವ ಕೊಡಲಿ ಎಂದು ದರ್ಶನ್ ಜೈನ್ ಎಂಬುವವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಕನ್ನಡ ಹೋರಾಟಗಾರರ ಬಂಧನ ಮತ್ತು ಸಂಸದ ತೇಜಸ್ವಿ ಸೂರ್ಯ ಹೇಳಿಕೆಯ ವಿರುದ್ಧ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...