ಹಮಾಸ್ ಸಶಸ್ತ್ರ ಗುಂಪನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಮಂಗಳೂರಿನ ಝಾಕಿರ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡುವೆ ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ಗೆ ಬೆಂಬಲಿಸಿ ಪ್ರತಿಭಟನೆಯೊಂದು ನಡೆದಿದೆ.
ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಪ್ಯಾಲೆಸ್ತೀನ್ಗೆ ಬೆಂಬಲ ನೀಡಲು ಅ.16ರ ಸಂಜೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ನೂರಾರು ಜನರು ಜಮಾಯಿಸಿದ್ದರು. ಪ್ಯಾಲೆಸ್ಟೀನ್ನ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಂಜಿ ರಸ್ತೆಯ ಉದ್ದಕ್ಕೂ ಮಾನವ ಸರಪಳಿ ನಿರ್ಮಿಸಿ ಮೇಣದಬತ್ತಿ ಹಿಡಿದು ಪ್ಯಾಲೆಸ್ತೀನ್ಗೆ ಬೆಂಬಲ ನೀಡುವಂತೆ ಕೋರಿಕೊಂಡರು. ಎಂಜಿ ರಸ್ತೆಯಲ್ಲಿ ಕೆಲ ಯುವಕರು-ಯುವತಿಯರು ಪ್ಯಾಲೆಸ್ತೀನ್ಗೆ ಬೆಂಬಲ ನೀಡುವಂತೆ ಪ್ರತಿಭಟನೆ ನಡೆಸಿ ಪ್ಯಾಲೆಸ್ತೀನ್ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿಯ ಕಿರುಪುಸ್ತಕಗಳನ್ನು ಹಂಚಿದ್ದಾರೆ.
Bengaluru people stand for Palestine. You guys have completely lost my respect. pic.twitter.com/N305otPty5
— Shimorekato (@iam_shimorekato) October 16, 2023
ಪ್ರತಿಭಟನೆ ನಡೆಸಿದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಬಂಧನಕ್ಕೊಳಗಾಗಿದ್ದ ಕೆಲ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆಗೊಳಿಸಲಾಗಿದೆ. ಇನ್ನೂ ಕೆಲವರನ್ನು ಕಬ್ಬನ್ ಪಾರ್ಕ್ ಮತ್ತು ಅಶೋಕ್ ನಗರದ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.
ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ಐಶ್ವರ್ಯಾ ರವಿಕುಮಾರ್ ಘಟನೆ ಸಂಬಂಧ ಮಾತನಾಡಿ, ”ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪ್ಯಾಲೆಸ್ತೀನ್ ಪರವಾಗಿ ನಿಂತಿರುವ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುತ್ತಿರುವುದು ದುರದೃಷ್ಟಕರ. ಭಾರತ ಯಾವಾಗಲೂ ಪ್ಯಾಲೆಸ್ತೀನ್ ಜೊತೆ ನಿಂತಿದೆ. ಅಧಿಕಾರದಲ್ಲಿರುವವರು ಏನೇ ಮಾಡಲು ಪ್ರಯತ್ನಿಸಿದರೂ ಪ್ಯಾಲೆಸ್ಟೀನಿಯಾದವರಿಗೆ ಬೆಂಬಲ ನೀಡುವ ಜನರನ್ನು ಒಟ್ಟಿಗೆ ಸೇರಿಸಲು ನಾವು ಪ್ರಯತ್ನಿಸಿದ್ದೇವೆ. ಅಲ್ಲಿನ ನರಮೇಧವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದೆ” ಎಂದು ಹೇಳಿದರು.
ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ಕೆಲ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿ ಪ್ಯಾಲೆಸ್ಟೀನ್ ಪರ ಘೋಷಣೆಗಳನ್ನು ಕೂಗುತ್ತಿದ್ದರು.
ಇದನ್ನೂ ಓದಿ: ‘ಹೆದರಿಸುವ ಪ್ರಯತ್ನ ಮಾಡಬೇಡಿ, ಎಲ್ಲದಕ್ಕೂ ಸಿದ್ಧರಿದ್ದೇವೆ’: ಇಸ್ರೇಲ್ಗೆ ಹಮಾಸ್ ಎಚ್ಚರಿಕೆ