Homeಮುಖಪುಟಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

ಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

- Advertisement -
- Advertisement -

ಬೃಹದಾಕಾರವಾಗಿ ಬೆಳೆಯುವ ಬಾಓಬಾಬ್ ಅಥವಾ ಕನ್ನಡದಲ್ಲಿ ದೊಡ್ಡ ಹುಣಸೆ, ಆನೆ ಹುಣಸೆ ಎಂದು ಕರೆಯಲ್ಪಡುವ ಮರಗಳು ತಮ್ಮ ವಿಚಿತ್ರವಾದ ಆಕಾರದಿಂದ ಎಲ್ಲರ ಗಮನವನ್ನೂ ಸೆಳೆಯುತ್ತವೆ. ಆಗಾಗ ಪತ್ರಿಕೆಗಳ ಲೇಖನಗಳಲ್ಲಿ ಅಥವಾ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಮರಗಳು ಮತ್ತೆ ಸುದ್ದಿಯಲ್ಲಿವೆ. ಮಧ್ಯಪ್ರದೇಶದ ಭಿಲ್ ಬುಡಕಟ್ಟು ಜನರು ವಾಸವಿರುವ ಮಂಡು ಎಂಬ ಊರು ಬಹುಶಃ ಭಾರತದಲ್ಲಿಯೇ ಅತಿ ಹೆಚ್ಚು ಬಾಓಬಾಬ್ ಮರಗಳನ್ನು ಹೊಂದಿದ ಪ್ರದೇಶವಾಗಿದೆ. ಈ ಪ್ರದೇಶದಿಂದ ಹನ್ನೊಂದು ಬಾಓಬಾಬ್ ಮರಗಳನ್ನು ಹೈದರಾಬಾದಿನ ಒಂದು ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಆ ಉದ್ಯಾನವು, ’ಈ ಮರಗಳನ್ನು ಸಂರಕ್ಷಿಸಬೇಕಾಗಿದೆ ಹಾಗಾಗಿ ಅವುಗಳನ್ನು ಕಳುಹಿಸಿಕೊಡಿ’ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದರ ಅಂಗವಾಗಿಯೇ ಈ ಕಾರ್ಯಾಚರಣೆ ನಡೆಯುತ್ತಿತ್ತು. ಶತಮಾನಗಳಿಂದ ಈ ಮರಗಳ ಜೊತೆಗೇ ಸಹಜೀವನ ನಡೆಸಿರುವ ಭಿಲ್ ಬುಡಕಟ್ಟು ಜನ, ಈ ಹಠಾತ್ ಸ್ಥಳಾಂತರದಿಂದ ಸಹಜವಾಗಿಯೇ ಕೋಪಗೊಂಡಿದ್ದರು. ಯಾರಾದರೂ ಮರಗಳನ್ನು ಸಂರಕ್ಷಿಸುವದಿದ್ದರೆ ಅವುಗಳ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ದೊಡ್ಡ ಮರಗಳನ್ನು ತೆಗೆದುಕೊಂಡು ಹೋಗುವ ಉದ್ದೇಶವಾದರೂ ಏನು ಎಂಬುದು ಅವರ ಪ್ರಶ್ನೆಯಾಗಿತ್ತು, ಅಲ್ಲದೆ, ತಲೆಮಾರುಗಳಿಂದ ಈ ಮರಗಳ ಜೊತೆಯೇ ಬದುಕಿ ಬಂದಿರುವ ತಮಗೆ, ಮುಂಬರುವ ದಿನಗಳಲ್ಲಿ ಎಲ್ಲಿ ಇವುಗಳ ಮೇಲಿನ ಹಕ್ಕು ತಪ್ಪಿಹೋಗುವುದೋ ಎಂಬ ಭಯವೂ ಕಾರಣವಿದ್ದಿತು. ಕಡೆಗೆ ಸರ್ಕಾರಿ ಅಧಿಕಾರಿಗಳು ಜನರನ್ನು ಶಾಂತಗೊಳಿಸಿ ಅವರಿಗೂ ಅನುಕೂಲವಾಗುವಂತೆ ಈ ಮರಗಳಿಗೆ ಭೌಗೋಳಿಕ ಸೂಚಿಯನ್ನು ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್‌ಅನ್ನು ಕೊಡಲು ಪ್ರಯತ್ನಿಸುವುದಾಗಿ ಹೇಳಿತು. ಸಾವಿರಾರು ವರ್ಷಗಳಿಂದ ನಾವು ರಕ್ಷಿಸಿಕೊಂಡು ಬಂದಿರುವ ಈ ಮರಗಳಿಗೆ ಜಿಐ ಟ್ಯಾಗ್‌ನ ಹಂಗು ಈಗೇಕೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡದಿರಲಿಲ್ಲ. ಜಿಐ ಟ್ಯಾಗ್‌ಅನ್ನು ಯಾವುದೇ ಪ್ರದೇಶದ ವಿಶೇಷ ಉತ್ಪನ್ನ, ತಿನಿಸು ಅಥವಾ ಸ್ಥಳೀಯವಾಗಿ ಬೆಳೆಯುವ ಸಸ್ಯ ಅಥವಾ ಬೆಳೆಗಳಿಗೆ ಕೊಡಲಾಗುತ್ತದೆ. ಉದಾಹರಣೆಗೆ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ, ಮೊಳಕಾಲ್ಮೂರು ಸೀರೆ, ಧಾರವಾಡ ಪೇಢಾ, ಚನ್ನಪಟ್ಟಣದ ಗೊಂಬೆ, ನಂಜನಗೂಡಿನ ರಸಬಾಳೆ ಮತ್ತು ಮೈಸೂರು ಸಿಲ್ಕ್ ಮುಂತಾದವಕ್ಕೆ ಜಿಐ ಟ್ಯಾಗ್ ಕೊಡಲಾಗಿದೆ. ಇದರಿಂದಾಗಿ ಆಯಾ ಉತ್ಪನ್ನಕ್ಕೆ ಮಾನ್ಯತೆಯು ದೊರಕಿ ಅದರ ಮಾರುಕಟ್ಟೆಯೂ ವಿಸ್ತರಿಸುತ್ತದೆ ಮತ್ತು ನಕಲಿಯ ವಿರುದ್ಧ ರಕ್ಷಣೆಯೂ ದೊರೆಯುತ್ತದೆ. ಆದರೆ ಭಾರತದ ಮೂಲದ್ದೇ ಅಲ್ಲದ ಮತ್ತು ಭಾರತದ ಇತರೆಡೆಗಳಲ್ಲಿಯೂ ಇರುವ ಈ ಮರಗಳಿಗೆ ಹೇಗೆ ಜಿಐ ಪಡೆಯುತ್ತಾರೆ ಎಂಬುದೂ ಸೂಕ್ತ ಪ್ರಶ್ನೆಯೇ ಆಗಿದೆ.

ಈ ಬಾಓಬಾಬ್ ಮರಗಳು ನಮ್ಮ ಕರ್ನಾಟಕದಲ್ಲಿಯೂ ಇವೆ. ಮೊದಲು ಸವಣೂರಿನ ಇವುಗಳದ್ದೇ ಹೆಸರಿನ ದೊಡ್ಡಹುಣಸೆ ಮಠದ ಆವರಣದಲ್ಲಿರುವ ಮೂರೇ ಮರಗಳು ಮಾತ್ರ ರಾಜ್ಯದಲ್ಲಿವೆ ಎಂದು ತಿಳಿಯಲಾಗಿತ್ತು; ಆದರೆ ಇವು ಬೆಂಗಳೂರಿನ ಲಾಲ್‌ಬಾಗ್ ಒಳಗೊಂಡಂತೆ ನಾಡಿನ ಬೇರೆ ಪ್ರದೇಶದಲ್ಲಿಯೂ ಇವೆ. ನಾನು ಕೆಲ ವರ್ಷಗಳ ಹಿಂದೆ ನನ್ನ ತಂದೆಯ ಜೊತೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ದೊಡ್ಡಹುಣಸೆ ಮರ ಇದೆ ಎಂದು ಪರಿಚಿತರೊಬ್ಬರಿಂದ ತಿಳಿದ ಸುದ್ದಿಯೇ ಈ ಭೇಟಿಗೆ ಕಾರಣವಾಗಿತ್ತು. ಆ ಮರವು ಸವಣೂರಿನ ಮರದಷ್ಟು ದೊಡ್ಡದಲ್ಲದಿದ್ದರೂ ಸುಮಾರು 42 ಅಡಿಗಳಷ್ಟು ಸುತ್ತಳತೆ ಹೊಂದಿದ ದೊಡ್ಡ ಮರವೇ ಆಗಿತ್ತು. ಈ ಮರವಷ್ಟೇ ಅಲ್ಲದೆ ಆ ಊರಿನ ಹೆಸರೂ ಅಚ್ಚರಿದಾಯಕವಾಗಿಯೇ ಇದೆ. ಬೊಳಶ್ಯಾನ ಹಟ್ಟಿ ಎಂಬ ಆ ಊರಿಗೆ ಆ ಹೆಸರು ಬರಲು ಕಾರಣ ಒಬ್ಬ ಸೂಫಿ ಸಂತ ಎಂದು ಹೇಳಲಾಗುತ್ತದೆ. ಶತಮಾನಗಳ ಹಿಂದೆ ಬುಲ್ಲೆಷಾ ಎಂಬ ಸಂತನೇ ಆ ಮರವನ್ನು ನೆಟ್ಟಿದ್ದು ಎಂದು ಹೇಳಲಾಗುತ್ತದೆ. ಈ ಪ್ರತೀತಿಯ ಕುರಿತು ಸಾಕ್ಷಿಯನ್ನು ಹುಡುಕಬೇಕಷ್ಟೆ. ಇದಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ನಿಡಸೋಸಿಯ ವಿರಕ್ತ ಮಠದಲ್ಲಿಯೂ ಬಾಓಬಾಬ್ ಮರವಿದೆ. ಇನ್ನು ಸವಣೂರಿನಲ್ಲಿರುವ ಮರಗಳು ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮರಗಳಾಗಿವೆ. ಇವು ಸುಮಾರು 18 ಮೀಟರ್ ಸುತ್ತಳತೆ ಹೊಂದಿದ್ದು, ಸಾವಿರಾರು ವರ್ಷದಷ್ಟು ಹಳೆಯವಾಗಿವೆ. ಇವುಗಳು ಭಾರತಕ್ಕೆ ಬಂದದ್ದು ಬಹುಶಃ ಅರಬ್ ವ್ಯಾಪಾರಿಗಳಿಂದಲೇ ಇರಬೇಕು. ನಮ್ಮ ನಾಡಿನ ಮರಗಳಿಗೆ ಸೂಫಿ ಸಂತರ ನಂಟು ಇದ್ದರೆ, ಮಧ್ಯ ಪ್ರದೇಶದಲ್ಲಿ ಇವುಗಳಿಗೆ ಖೋರಾಸಾನಿ ಇಮ್ಲಿ (ಹುಣಸೆ) ಎಂದು ಕರೆಯುತ್ತಾರೆ. ಖೋರಾಸಾನ್ ಎಂಬುದು ಇರಾನಿನ ಒಂದು ಪ್ರದೇಶವಾಗಿದೆ.

ಇದನ್ನೂ ಓದಿ: ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ಈ ಮರಗಳ ಮೂಲ ಆಫ್ರಿಕಾ ಖಂಡವಾಗಿದ್ದು ಒಟ್ಟು ಒಂಭತ್ತು ಪ್ರಬೇಧಗಳು ಕಂಡುಬರುತ್ತವೆ. ಅದರಲ್ಲಿಯ ಆರು ಪ್ರಬೇಧಗಳು ಮಡಗಾಸ್ಕರ್ ದ್ವೀಪದಲ್ಲಿ ಕಂಡುಬಂದರೆ ಎರಡು ಪ್ರಬೇಧಗಳು ಆಫ್ರಿಕಾದ ಮುಖ್ಯ ಭೂಮಿಯಲ್ಲಿ (mainland) ಕಂಡುಬರುತ್ತವೆ. ಇನ್ನುಳಿದ ಒಂದು ಪ್ರಬೇಧವು ದೂರದ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದು ಅಲ್ಲಿ ಹೇಗೆ ಹೋಯಿತು ಎಂಬುದೇ ಸೋಜಿಗ. ಇದು ಭೂಖಂಡಗಳು ಬೇರ್ಪಟ್ಟಾಗ (continental drift) ಒಂದು ಪ್ರಬೇಧ ಅಲ್ಲಿ ವಿಕಾಸ ಹೊಂದಿರಬಹುದು; ಇಲ್ಲವೇ 70000 ವರ್ಷಗಳ ಹಿಂದೆ ಆಫ್ರಿಕಾದಿಂದ ಉಂಟಾದ ಮಾನವ ವಲಸೆಯ ಕಾರಣದಿಂದಾಗಿಯೂ ಅಲ್ಲಿ ಬಾಓಬಾಬ್ ಮರಗಳು ಪಸರಿಸಿ ಹೊಸ ಪ್ರಬೇಧವಾಗಿ ವಿಕಾಸವಾಗಿರಬಹುದು. ಇವುಗಳಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಗಳು adansonia digitata ಎಂಬ ಬಾಓಬಾಬ್ ಮರಗಳ ಪ್ರಬೇಧಕ್ಕೆ ಸೇರಿವೆ. ಇವುಗಳ ಎಲೆಯ ಐದು ಕವಲುಗಳನ್ನು ಹೊಂದಿದ್ದು ಅವು ಕೈನ ಐದು ಬೆರಳುಗಳಂತೆ ಕಾಣುತ್ತವೆ, ಲ್ಯಾಟಿನ್ ಭಾಷೆಯಲ್ಲಿ ಡಿಜಿಟ್ ಅಂದರೆ ಬೆರಳು, ಹಾಗಾಗಿ ಇವಕ್ಕೆ digitata ಎಂಬ ಹೆಸರನ್ನು ಕೊಡಲಾಗಿದೆ.

ಈ ಮರವು ನೈಸರ್ಗಿಕವಾಗಿ ಒಣ ಕುರುಚಲು ಅಥವಾ ಮರುಭೂಮಿ ಪ್ರದೇಶದಲ್ಲಿ ಬೆಳೆಯುತ್ತದೆ. ಈ ಮರ ತನ್ನ ಗಾತ್ರ ಮತ್ತು ಆಕೃತಿಯಿಂದ ಗಮನ ಸೆಳೆಯುವುದು ಮಾತ್ರವಲ್ಲ, ಮರುಭೂಮಿ ಜನರ ಜೀವನಾಡಿಯಾಗಿದೆ. ಈ ಮರವನ್ನು ಜೀವದಾಯಿ ಮರವೆಂದೂ ಕರೆಯುತ್ತಾರೆ. ಇದು ಮಳೆ ಕಡಿಮೆಯಿರುವ ಒಣ ಪ್ರದೇಶದಲ್ಲಿ ಬೆಳೆಯುವದರಿಂದ, ಅಲ್ಲಿ ಮಳೆ ಬಂದ ಸಂದರ್ಭದಲ್ಲಿ ಅದು ತನ್ನ ಕಾಂಡದೊಳಗೆ ಸಾವಿರಾರು ಗ್ಯಾಲನ್‌ಗಳಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಿರುಬೇಸಿಗೆಯ ಕಾಲದಲ್ಲಿ ಪ್ರಾಣಿಪಕ್ಷಿಗಳು ಮತ್ತು ಅಲ್ಲಿನ ಜನರು ಈ ನೀರನ್ನು ಉಪಯೋಗಿಸುತ್ತಾರೆ. ಇದೇ ತರಹದ ವ್ಯವಸ್ಥೆಯನ್ನು ನಮ್ಮದೇ ನಾಡಿನ ಮತ್ತಿ ಮರವೂ ಮಾಡಿಕೊಂಡಿದೆ. ನಮ್ಮ ನಾಡಿನ ಸೋಲಿಗರು ಮತ್ತಿತರ ಮೂಲನಿವಾಸಿಗಳಿಗೆ ಇದು ಚಿರಪರಿಚಿತ. ಅಷ್ಟೇ ಅಲ್ಲದೆ ಈ ಮರದ ಹಣ್ಣು ಪೋಷಕಾಂಶಗಳ ಆಗರ. ಈ ಹಣ್ಣಿನಲ್ಲಿ ಇರುವಷ್ಟು ವಿಟಮಿನ್ ’ಸಿ’, ಬೇರೆ ಯಾವ ಹಣ್ಣಿನಲ್ಲಿಯೂ ಇಲ್ಲ. ಮುಂಚೆ ಸಮುದ್ರಯಾನ ಮಾಡುವವರು ವಿಟಮಿನ್ ’ಸಿ’ನ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗದಿಂದ ರಕ್ಷಿಸಿಕೊಳ್ಳಲು ಈ ಮರದ ಹಣ್ಣನ್ನೇ ಉಪಯೋಗಿಸುತ್ತಿದ್ದರು. ಬಹುಶಃ ಇದೇ ಕಾರಣಕ್ಕೆ ಸಮುದ್ರಯಾನಿಗಳು ಈ ಮರದ ಬೀಜವನ್ನು ಎಲ್ಲೆಡೆ ಪ್ರಸಾರ ಮಾಡಿರಬಹುದು. ಇನ್ನೊಂದು ವಿಷಯವನ್ನು ಗಮನಿಸುವುದಾದರೆ ಎಲ್ಲೆಲ್ಲಿ ಗುಲಾಮರ ವ್ಯಾಪಾರ ನಡೆಯುತ್ತಿತ್ತೋ ಆ ಎಲ್ಲ ಮಾರ್ಗಗಳಲ್ಲಿ ಮತ್ತು ದೇಶಗಳಲ್ಲಿ ಈ ಮರಗಳು ಕಂಡುಬರುತ್ತವೆ. ಬಹುಶಃ ನಮ್ಮ ದೇಶದಲ್ಲೂ ಸಿದ್ದಿಗಳ ಆಗಮನ ಮತ್ತು ಈ ಮರಗಳ ಪ್ರಸರಣಕ್ಕೆ ಒಂದಕ್ಕೊಂದು ಸಂಬಂಧವಿದ್ದಿರಬಹುದು. ಈ ಮರಗಳು ಸಾವಿರಾರು ವರ್ಷಗಳ ಇತಿಹಾಸವನ್ನು ತಮ್ಮೊಳಗೆ ಇರಿಸಿಕೊಂಡು ಇನ್ನೂ ನಿಂತಿವೆ. ಇನ್ನು ಇಂತಹ ಮರಗಳ ರಕ್ಷಣೆಯ ಕುರಿತು ಹೇಳಬಹುದಾದರೆ, ಅವುಗಳನ್ನು ನಮ್ಮ ದೇಶದಲ್ಲಿ ಸ್ಮಾರಕ ವೃಕ್ಷವಾಗಿ ಉಳಿಸಿಕೊಳ್ಳಬಹುದು, ಆದರೆ ಬಹುಮುಖ್ಯವಾಗಿ, ಅವುಗಳ ನೈಸರ್ಗಿಕ ಅವಾಸದಲ್ಲಿ ಅವುಗಳ ರಕ್ಷಣೆ ಆಗಬೇಕಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...