ಈ ಬಟ್ಟೆ ನನಗೆ ಸ್ಥಾನಮಾನ ಗೌರವದೊಂದಿಗೆ ಅನ್ನವನ್ನು ಸಹನೀಡಿದೆ. ನನ್ನ ಕ್ಷೇತ್ರದ ಜನತೆ ನನ್ನಲ್ಲಿ ಮೊದಲು ವಕೀಲನನ್ನಾಗಿ, ಹೋರಾಟಗಾರನನ್ನಾಗಿ ಕೊನೆಯಲ್ಲಿ ರಾಜಕಾರಣಿಯಾಗಿ ಗುರುತಿಸುತ್ತಾರೆ. ಸಾವಿರಾರು ರೈತರ, ದಮನಿತರ, ಅಸ್ಸಹಾಯಕರ ಪರವಾಗಿ ಉಚಿತ ವಕಾಲತ್ತು ವಹಿಸಿ ಅವರಿಗೆ ನ್ಯಾಯ ಒದಗಿಸಿದ ತೃಪ್ತಿ ನನಗಿದೆ.. ಬಹಳ ದಿನದ ನಂತರ ಶಿವಮೊಗ್ಗ ನ್ಯಾಯಾಲಯದಲ್ಲಿ ವಕೀಲನಾಗಿ ಹಾಜರಾಗುತ್ತಿದ್ದೇನೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ವ್ಯಾಪ್ತಿಯೊಳಗೆ ಸಾಧ್ಯವಾದಷ್ಟೂ ಪ್ರಾಮಾಣಿಕನಾಗಿ ಎಂಟು ವರ್ಷ ಶಾಸಕತ್ವ, ಮೂರು ವರ್ಷ ಮಂತ್ರಿಗಿರಿ ನಿಭಾಯಿಸಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗುವ ಎಲ್ಲಾ ಪ್ರಯತ್ನ ಮಾಡಿದ್ದೇನೆ. ಪ್ರತಿ ಬಾರಿಯೂ ಜನ ನನ್ನನ್ನೇ ಗೆಲ್ಲಿಸಬೇಕು ಎಂಬುದು ನನ್ನ ಸ್ವಾರ್ಥವಾಗುತ್ತದೆ, ಗೆಲ್ಲಿಸಿದಾಗ ಶಾಸನಸಭೆ , ಸೋಲಿಸಿದಾಗ ನ್ಯಾಯಾಲಯ ಇದ್ದೇ ಇದೆಯಲ್ಲಾ ಎಂದು ಅವರು 2018ರ ವಿಧಾನಸಭಾ ಚುನಾವಣೆಗೂ ಮುಂಚೆ ಹೇಳಿದ್ದರು.
ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರಿಗೆ ಆಗ ಸೋಲಾಗಿತ್ತು. ಅವರು ನುಡಿದ ಮಾತಿನಂತೆ ಈಗ ನ್ಯಾಯಾಲಯ ಪ್ರವೇಶಿಸಿದ್ದಾರೆ. ನೂರಾರು ಜನ ಕಿಮ್ಮನೆ ರತ್ನಾಕರ್ ರವರ ನಡೆಯನ್ನು ಶ್ಲಾಘಿಸಿದ್ದಾರೆ.