ಬಿಹಾರ ಸರ್ಕಾರದ ನಡೆಸಲು ಉದ್ದೇಶಿಸಿದ್ದ ಜಾತಿ ಗಣತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಈ ಮೂಲಕ ಸಮೀಕ್ಷೆಗೆ ಇದ್ದ ತೊಂದರೆ ನಿವಾರಣೆಯಾಗಿದೆ. ನ್ಯಾಯಾಲಯದ ತೀರ್ಪನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಶುಕ್ರವಾರ ಸ್ವಾಗತಿಸಿದ್ದಾರೆ.
ಬಿಹಾರದ ಮಹಾಘಟಬಂಧನ ಸರ್ಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ನಿರ್ಧಾರ ಕೈಗೊಂಡಿತ್ತು. ಸರ್ಕಾರದ ನಿರ್ಣಯ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಜನರ ಸಾಮಾಜಿಕ – ಆರ್ಥಿಕ ಸ್ಥಿತಿಗತಿ ತಿಳಿದುಕೊಳ್ಳಲು ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ನೀತಿಗಳನ್ನು ರೂಪಿಸಲು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯವಾಗುತ್ತದೆ. ಜಾತಿ ಗಣತಿಯ ಕುರಿತು ಒಂದೆಡೆ ಅನಗತ್ಯ ಕೂಗಿತ್ತು. ಬಿಹಾರದ ಎಲ್ಲ ಪಕ್ಷಗಳು ಜಾತಿ ಗಣತಿಗೆ ಬೆಂಬಲಿಸಿವೆ” ಎಂದು ಹೇಳಿರುವ ಸುಪ್ರೀಂಕೋರ್ಟ್, ಜಾತಿ ಗಣತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದೆ.
“ನಮ್ಮ ಮಾದರಿಯನ್ನೇ ಒಕ್ಕೂಟ ಸರ್ಕಾರವು ಅನುಸರಿಸಿ ರಾಷ್ಟ್ರವ್ಯಾಪಿ ಜನಗಣತಿ ನಡೆಸಬೇಕು” ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.
“ಜಾತಿ ಗಣತಿ ಮಾಡದ ಹೊರತು, ಸಮಾಜದ ಯಾವ ಭಾಗಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂಬುದು ತಿಳಿಯುವುದಿಲ್ಲ. ‘ಗಣತಿ ನಡೆಸುವುದು ತಾರತಮ್ಯದ ನಿರ್ಧಾರ’ ಎಂದು ಹೇಳಿದ್ದ ಅರ್ಜಿಯನ್ನು ಸುಪ್ರೀಕೋರ್ಟ್ ವಜಾಗೊಳಿಸಿದೆ. ಇದು ನಮಗೆ ಸಂದ ಜಯ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಜೆಪಿ ವಕ್ತಾರ ಸಂತೋಷ್ ಪಾಠಕ್ ಅವರು ಸುಪ್ರೀಂಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದು,“ವಿಧಾನಸಭೆಯಲ್ಲಿ ಜಾತಿ ಗಣತಿ ಕುರಿತು ಪ್ರಸ್ತಾಪಿಸಿದ ದಿನದಿಂದಲೇ ನಾವು ಅದರ ಪರವಾಗಿದ್ದೇವೆ. ಅಲ್ಪಸಂಖ್ಯಾತರಲ್ಲಿಯೂ ಜಾತಿ ಅಧ್ಯಯನ ನಡೆಸಬೇಕು” ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಜಾತಿ ಗಣತಿ ಮೊದಲ ಹಂತದಡಿ ಮನೆ ಹಾಗೂ ಜನರ ಎಣಿಕೆ ಕಾರ್ಯ ನಡೆಯುತ್ತಿದೆ. ಏಪ್ರಿಲ್ನಲ್ಲಿ ಎರಡನೇ ಹಂತ ಪ್ರಾರಂಭವಾಗಲಿದ್ದು, ಜನರ ಜಾತಿ, ಲಿಂಗ ಹಾಗೂ ಧರ್ಮದ ಎಣಿಕೆ ಆರಂಭವಾಗಿದೆ. ಜಾತಿ ಸಮೀಕ್ಷೆಗೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದೆ.
ಇದನ್ನೂ ಓದಿ: ಬಿಹಾರ: ಜಾತಿ ಗಣತಿಗೆ ಒಕ್ಕೂಟ ಸರ್ಕಾರ ನಕಾರ; ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು