ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರ ಮೇಲಿನ ದೌರ್ಜನ್ಯವೆಂಬುದು ನಾಟಕವಾಗಿದ್ದು, ದೆಹಲಿ ಪೊಲೀಸರನ್ನು ದೂರಲೆಂದು ಆ ನಾಟಕೀಯ ವಿಡಿಯೋ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾತಿ ಮಲಿವಾಲ್ ಇವೆಲ್ಲವೂ ಬಿಜೆಪಿ ಕೊಳಕು ಸುಳ್ಳುಗಳಾಗಿವೆ, ಇವುಗಳಿಂದ ನಾನು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ “ರಿಯಾಲಿಟಿ ಚೆಕ್ಗಾಗಿ” ಬೀದಿಗಿಳಿದಿದ್ದಾಗ ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಪಾನಮತ್ತ ಚಾಲಕನೊಬ್ಬ ಗುರುವಾರ ಬೆಳಿಗ್ಗೆ ರಸ್ತೆಯಲ್ಲಿ ಅಶ್ಲೀಲ ಸನ್ನೆ ಮಾಡಿ ಕಿರುಕುಳ ನೀಡಿದ್ದಲ್ಲದೇ, ಅವರನ್ನು ಅಡ್ಡಗಟ್ಟಿ 15 ಮೀಟರ್ ದೂರ ಎಳೆದೊಯ್ದಿದ್ದಾನೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆದರೆ ಈ ಘಟನೆಯೆಲ್ಲವೂ ಸ್ವಾತಿ ಮಲಿವಾಲ್ರವರ ನಾಟಕವಾಗಿದೆ. ಆಪ್ ಸರ್ಕಾರ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಬಂಧಿತನು ಆಪ್ ಕಾರ್ಯಕರ್ತನಾಗಿದ್ದಾನೆ. ದೆಹಲಿ ಪೊಲೀಸರಿಗೆ ಮತ್ತು ಆ ಮೂಲಕ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಸ್ವಾತಿ ಮಲಿವಾಲ್ ಯತ್ನಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ದೇವ ಆರೋಪಿಸಿದ್ದಾರೆ.
ಎಎಪಿ ಶಾಸಕ ಪ್ರಕಾಶ್ ಜರ್ವಾಲ್ ಅವರೊಂದಿಗೆ ಆರೋಪಿ ಪ್ರಚಾರ ಮಾಡುತ್ತಿರುವ ಫೋಟೋವನ್ನು ಬಿಡುಗಡೆ ಮಾಡಿ, “ಈ ಘಟನೆಯು ದೆಹಲಿಯನ್ನು ಮಹಿಳೆಯರಿಗೆ ಅಸುರಕ್ಷಿತ ನಗರ ಎಂದು ತೋರಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೆಹಲಿಯನ್ನು ದೂಷಿಸಲು ಎಎಪಿಯ ಪಿತೂರಿಯಾಗಿದೆ” ಎಂದಿದ್ದಾರೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಸ್ವಾತಿ ಮಲಿವಾಲ್ “ನನ್ನ ಬಗ್ಗೆ ಕೊಳಕು ಸುಳ್ಳುಗಳನ್ನು ಹೇಳಿ ನನ್ನನ್ನು ಹೆದರಿಸುವವರಿಗೆ ಹೇಳುವುದೇನೆಂದರೆ, ಈ ಸಣ್ಣ ಜೀವನದಲ್ಲಿ ತಲೆಯ ಮೇಲೆ ಜವಾಬ್ದಾರಿ ಹಾಕಿಕೊಂಡು ಅನೇಕ ದೊಡ್ಡ ಕೆಲಸಗಳನ್ನು ಮಾಡಿದ್ದೇನೆ. ಅನೇಕ ದಾಳಿಗಳಾದರೂ ನನ್ನ ಕೆಲಸ ನಿಲ್ಲಿಸಲಿಲ್ಲ. ಪ್ರತಿ ಕ್ರೌರ್ಯದಿಂದ ನನ್ನೊಳಗಿನ ಬೆಂಕಿ ಬಲವಾಗುತ್ತಾ ಹೋಯಿತು. ನನ್ನ ಧ್ವನಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ನಾನು ಬದುಕಿರುವವರೆಗೂ ಹೋರಾಡುತ್ತಲೇ ಇರುತ್ತೇನೆ!” ಎಂದಿದ್ದಾರೆ.
जिनहें लगता है मेरे बारे में झूठी गंदी बातें कर मुझे डरा देंगे उनको बता दूँ। मैंने सर पे कफ़न बांध इस छोटी सी ज़िंदगी में बहुत बड़े काम किए है। मुझपे कई अटैक हुए पर मैं रुकी नही। हर अत्याचार से मेरे अंदर की आग और बढ़ी। मेरी आवाज़ कोई नही दबा सकता। जब तक ज़िंदा हूँ लड़ती रहूँगी!
— Swati Maliwal (@SwatiJaiHind) January 20, 2023
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರು ಸ್ವಾತಿ ಮಲಿವಾಲ್ ಪರ ಮಾತನಾಡಿ, “ಎಎಪಿ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಮಧ್ಯಪ್ರವೇಶಿಸುವ ಬದಲು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರೀಕರಿಸಿ” ಎಂದು ಲೆಫ್ಟಿನೆಂಟ್ ಗರ್ವನರ್ಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ನನಗೇ ರಕ್ಷಣೆ ಇಲ್ಲ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಆರೋಪ