15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಾಲಕಿಯು 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಜನವರಿ 17ರ ಮಂಗಳವಾರದಂದು ಘಟನೆ ನಡೆದಿತ್ತು.
ದೇವರಕೊಂಡ ವಿಭಾಗದ ಪೆದ್ದ ಅಡಿಸೆರ್ಲ ಪಲ್ಲಿ ಮಂಡಲದ ಅಂಗಡಿಪೇಟ ಕ್ರಾಸ್ ಬಳಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಮೂವರು ದುಷ್ಕರ್ಮಿಗಳಾದ ದಿಲೀಪ್ (19), ನರೇಶ್ (24) ಮತ್ತು ಶಿವ (20) ಎಂಬವರನ್ನು ಗುಡಿಪಲ್ಲಿ ಪೊಲೀಸರು ಒಂದು ದಿನದ ನಂತರ ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗುಡಿಪಲ್ಲಿ ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಆರೋಪಿಗಳೆಲ್ಲರೂ ಪೆದ್ದ ಅಡಿಸೆರ್ಲ ಪಲ್ಲಿ ಮಂಡಲದ ತಿರುಮಲಗಿರಿ ಗ್ರಾಮದ ವಡ್ಡೇರಿಗುಡೆಂ ಗ್ರಾಮದ ನಿವಾಸಿಗಳು.
ಹೈದರಾಬಾದ್ನ ಕರ್ಮಾನ್ಘಾಟ್ನ ನಿವಾಸಿಯಾಗಿರುವ ಬಾಲಕಿಯೊಂದಿಗೆ ಆರೋಪಿ ದಿಲೀಪ್ಗೆ ಪರಿಚಯವಾಗಿತ್ತು. ಸಂಕ್ರಾಂತಿ ಹಬ್ಬಕ್ಕೆಂದು ವಡ್ಡೇರಿಗುಡೆಂನಲ್ಲಿರುವ ಅಜ್ಜಿ ಮನೆಗೆ ತೆರಳಿದ್ದ ಬಾಲಕಿ ಜನವರಿ 17 ರಂದು ಹೈದರಾಬಾದ್ಗೆ ಮರಳಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 17 ರಂದು ಬೆಳಗ್ಗೆ ಬಾಲಕಿ ನರೇಶ್ ಕಾರಿನಲ್ಲಿ ಅಂಗಡಿಪೇಟ ತಲುಪಿದ್ದರು. ಅಲ್ಲಿಂದ ಅವರು ಕರ್ಮಾನ್ಘಾಟ್ಗೆ ಬಸ್ ಹತ್ತಲು ಬಯಸಿದ್ದರು ಮತ್ತು ಅಂಗಡಿಪೇಟಾ ಕ್ರಾಸ್ರೋಡ್ ಬಳಿ ತನ್ನನ್ನು ಬಿಡುವಂತೆ ಆರೋಪಿಗೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲಿಂದ ನರೇಶ್ ಮಾಲೀಕತ್ವದ ‘ರೌಡಿ ಬಾಯ್ಸ್’ ಎಂಬ ಬಟ್ಟೆ ಅಂಗಡಿಗೆ ಆಕೆಯನ್ನು ಕರೆದೊಯ್ದ ದಿಲೀಪ್, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಗೆ ವಿಪರೀತ ರಕ್ತಸ್ರಾವ ಪ್ರಾರಂಭವಾಗಿದ್ದು, ಮೂರ್ಛೆ ಹೋಗಿತ್ತು. ಆರೋಪಿಗಳು ಆಕೆಯನ್ನು ತಮ್ಮ ಕಾರಿನಲ್ಲಿ ದೇವರಕೊಂಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿ ಮೃತಪಟ್ಟಿದ್ದಾರೆ.
ಬಾಲಕಿಯ ತಂದೆ ಅದೇ ದಿನ ಗುಡಿಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ದೇವರಕೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮೂವರು ಆರೋಪಿಗಳನ್ನು ಒಂದು ದಿನದ ನಂತರ ಜನವರಿ 18 ರಂದು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರ ಮತ್ತು ಕೊಲೆಗಾಗಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನು ಬಂಧಿಸಿ ದೌರ್ಜನ್ಯ ಎಸಗಿದ ಬಿಜೆಪಿ ಸರ್ಕಾರ