ಟಿಎಂಸಿಯಿಂದ ಬಿಜೆಪಿಗೆ ವಲಸೆ ಹೋಗಿದ್ದ ಸುವೇಂದು ಅಧಿಕಾರಿಯ ರೋಡ್ ಶೋ ಸಂದರ್ಭದಲ್ಲಿ “ಗೋಲಿ ಮಾರೋ” ಘೋಷಣೆ ಕೂಗಿದ ಆರೋಪದ ಮೇಲೆ ಪಕ್ಷದ ಯುವ ವಿಭಾಗದ ಮುಖ್ಯಸ್ಥ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರನ್ನು ಗುರುವಾರ ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಸುವೇಂದು ಅಧಿಕಾರಿ ಚುನಾವಣಾ ಪ್ರಚಾರದ ಭಾಗವಾಗಿ ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ “ಗೋಲಿ ಮಾರೋ ಸಾ***ಕೋ (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ)” ಎಂದು ಘೋಷಣೆ ಕೂಗಿದ್ದ ಮೂವರನ್ನು ಬಂಧಿಸಲಾಗಿದೆ.
“ಇವರು ಘೋಷಣೆ ಕೂಗಿದ್ದು ಸಿಸಿಟಿಯಲ್ಲಿ ಸೆರೆಯಾಗಿದೆ. ಹಾಗಾಗಿ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರನ್ನು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಇದು ದೆಹಲಿಯಲ್ಲ: ಗೋಲಿ ಮಾರೋ ಘೋಷಣೆಗೆ ಮಮತಾ ಕಿಡಿ, ಮೂವರ ಬಂಧನ
ರಾಜ್ಯ ಪೊಲೀಸರ ಈ ಕ್ರಮವನ್ನು ಖಂಡಿಸಿರುವ ಬಿಜೆಪಿ, ಪೊಲೀಸರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
“ಅರೂಪ್ ರಾಯ್ ನೇತೃತ್ವದ ರ್ಯಾಲಿಯಲ್ಲಿ ಮಂಗಳವಾರ ಇದೇ ರೀತಿಯ ಘೋಷಣೆ ಕೂಲಾಗಿತ್ತು. ಆದರೆ ಪೊಲೀಸರು ನಮ್ಮ ಮೇಲೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ” ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
“ಇದು ಪೊಲೀಸರ ಪಕ್ಷಪಾತಕ್ಕೆ ಸ್ಪಷ್ಟ ಉದಾಹರಣೆ. ಜನರು ಇದನ್ನೆಲ್ಲಾ ನೋಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಇದಕ್ಕೆ ಸೂಕ್ತ ಉತ್ತರ ನೀಡುತ್ತಾರೆ” ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಕೋಲ್ಕತ್ತ ರ್ಯಾಲಿಯಲ್ಲಿ “ಗೋಲಿಮಾರೋ ಸಾಲೋಂಕೋ” ಘೋಷಣೆ.. ವಿಡಿಯೋ ನೋಡಿ