ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನ ವಿಚಾರವು ಬೆಂಗಳೂರಿನಿಂದ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯವರೆಗೆ ತಲುಪಿದ್ದು, ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
‘ಭಯೋತ್ಪಾದಕರಿಗೆ ಬಂಗಾಳ ಸುರಕ್ಷಿತ ಸ್ವರ್ಗ’ ಎಂಬ ಬಿಜೆಪಿ ಟೀಕೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು, ಕೂಚ್ ಬೆಹಾರ್ನ ದಿನ್ಹಟಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಂಧಿತರು ಬಂಗಾಳದ ನಿವಾಸಿಗಳಲ್ಲ; ಅವರು ಇಲ್ಲಿ ಅಡಗಿಕೊಂಡಿದ್ದರು, ಎರಡು ಗಂಟೆಗಳಲ್ಲಿ ಅವರನ್ನು ಬಂಧಿಸಲಾಯಿತು” ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಂಗಾಳದಲ್ಲಿ ಶಾಂತಿ ನೆಲೆಸಿದರೆ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ; ಉತ್ತರ ಪ್ರದೇಶ ಸುರಕ್ಷಿತವೇ? ರಾಜಸ್ಥಾನ ಸುರಕ್ಷಿತವೇ? ಬಿಹಾರ ಸುರಕ್ಷಿತವೇ’ ಎಂದು ಅವರು ಸಭೆಯಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿದರು.
ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಕುನಾಲ್ ಘೋಷ್ ಅವರು ಬಿಜೆಪಿಯ ದಾಳಿಗೆ ತಿರುಗೇಟು ನೀಡಿದ್ದು, ‘ ‘ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ಕಾರ್ಯಾಚರಣೆಯಲ್ಲಿ ರಾಜ್ಯ ಪೊಲೀಸರ ಸಕ್ರಿಯ ಸಹಕಾರವನ್ನು ಸ್ವೀಕರಿಸಬೇಕಾಗಿದೆ” ಎಂದು ಸೂಚಿಸಿದರು.
“ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ, ಅವರು ಮಾಡಿದ ಬಂಧನಗಳಲ್ಲಿ ರಾಜ್ಯ ಪೊಲೀಸರ ಸಹಕಾರವನ್ನು ಉಲ್ಲೇಖಿಸುತ್ತದೆ” ಎಂದು ಅವರು ಪ್ರತಿಪಾದಿಸಿದರು.
ಇಂದು ಬೆಳಗ್ಗೆ ಬಂಧಿಸಲ್ಪಟ್ಟ ವ್ಯಕ್ತಿಗಳಾದ ಮುಸ್ಸಾವಿರ್ ಹುಸೇನ್ ಶಾಝೇಬ್ ಮತ್ತು ಅಬ್ದುಲ್ ಮಥೀನ್ ತಾಹಾ ಪ್ರಮುಖ ಸಂಚುಕೋರರು ಎನ್ನಲಾಗಿದೆ. ಶಾಝೇಬ್ ಬಾಂಬ್ ಅನ್ನು ಹಾಕಿದಾಗ ತಾಹಾ ಆತ ತಪ್ಪಿಸಿಕೊಳ್ಳಲು ನೆರವಾಗಿದ್ದ ಎಂದು ಆರೋಪಿಸಲಾಗಿದೆ. ಅವರನ್ನು ಪುರ್ಬಾ ಮೇದಿನಿಪುರ್ ಜಿಲ್ಲೆಯ ಕೋಲ್ಕತ್ತಾದಿಂದ 180 ಕಿಮೀ ದೂರದಲ್ಲಿರುವ ಕೊಂಟೈ ಎಂಬ ಸಣ್ಣ ನಗರಕ್ಕೆ ಕಳುಹಿಸಲಾಗಿತ್ತು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಘೋಷ್, ಸುವೇಂದು ಅಧಿಕಾರಿ ಕುಟುಂಬ ಮತ್ತು ರಾಮೇಶ್ವರಂ ಕೆಫೆ ಬಾಂಬರ್ಗಳ ನಡುವಿನ ಸಂಪರ್ಕವನ್ನು ತನಿಖೆ ಮಾಡಲು ರಾಜ್ಯ ಅಧಿಕಾರಿಗಳಿಗೆ ಕರೆ ನೀಡಿದರು. ಏಕೆಂದರೆ, ಕೊಂಟೈ ನಗರವು ಸುವೇಂದು ಅವರ ಭದ್ರಕೋಟೆಯಾಗಿದೆ. “ಬಂಗಾಳ ಪೊಲೀಸರು ದೇಶವಿರೋಧಿ ಶಕ್ತಿಗಳನ್ನು ನಿಗ್ರಹಿಸುವಲ್ಲಿ ದೃಢವಾಗಿ ಉಳಿದಿದ್ದಾರೆ; ಇತರ ಏಜೆನ್ಸಿಗಳೊಂದಿಗೆ ಸಹಕರಿಸಲು ಯಾವಾಗಲೂ ಸಿದ್ಧರಾಗಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ಮಾಂಸಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ವೈಯಕ್ತಿಕ ಟೀಕೆಗಿಳಿದ ಮೋದಿ