ಜಾರಿ ನಿರ್ದೇಶನಾಲಯ (ಇಡಿ), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಂತಹ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಮೂಲಕ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ ಹಣವನ್ನು ಪಡೆದಿದೆ ಎಂದು ಆರೋಪ ಮಾಡಿರುವ ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ, ಬಿಜೆಪಿಯನ್ನು ‘ಭ್ರಷ್ಟ ಜನತಾ ಪಕ್ಷ’ ಎಂದು ಕರೆದಿದ್ದಾರೆ.
“ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ ಎಂದು ಹೊರಹೊಮ್ಮಿದೆ; ಅದು ‘ಭ್ರಷ್ಟ್ ಜನತಾ ಪಕ್ಷ’. ಅವರ ನಿಜವಾದ ಮುಖವನ್ನು ಜನರ ಮುಂದೆ ಬಹಿರಂಗಪಡಿಸಲಾಗಿದೆ” ಎಂದು ಮಾಧ್ಯಮದವರ ಮುಂದೆ ಠಾಕ್ರೆ ಭಾನುವಾರ ಹೇಳಿದ್ದಾರೆ.
ಬಿಜೆಪಿ ಈ ಹಿಂದೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಲವು ನಾಯಕರು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಪ್ರಫುಲ್ ಪಟೇಲ್ ವಿರುದ್ಧ ಆರೋಪ ಮಾಡಿದವರು ಯಾರು? ಆದರ್ಶ್ (ಹಗರಣ) ಬಗ್ಗೆ ಆರೋಪ ಮಾಡಿದವರು ಯಾರು? ಜನಾರ್ದನ ರೆಡ್ಡಿ ಮತ್ತು ನವೀನ್ ಜಿಂದಾಲ್ ವಿರುದ್ಧ ಆರೋಪ ಮಾಡಿದವರು ಯಾರು ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
ಬಿಜೆಪಿಯ ‘ಮೋದಿ ಕಾ ಪರಿವಾರ್’ ಅಭಿಯಾನದ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನಾನು ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ‘ಮೇರಾ ಪರಿವಾರ, ಮೇರಿ ಜಿಮ್ಮೆದಾರಿ’ (ನನ್ನ ಕುಟುಂಬ, ನನ್ನ ಜವಾಬ್ದಾರಿ) ಎಂದು ಸಂಕಲ್ಪ ಮಾಡಿದ್ದೆ. ನಿಮ್ಮ ‘ಪರಿವಾರ’ದಲ್ಲಿ ನೀವು ಮತ್ತು ಕುರ್ಚಿ ಮಾತ್ರ ಇದೆ” ಎಂದು ಲೇವಡಿ ಮಾಡಿದರು.
ಇಂಡಿಯಾ ನಾಯಕರ ಒಗ್ಗಟ್ಟು ಪ್ರದರ್ಶನ
ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಬ್ಲಾಕ್ನ ‘ಸೇವ್ ಡೆಮಾಕ್ರಸಿ’ ರ್ಯಾಲಿಯಲ್ಲಿ ಠಾಕ್ರೆ ಭಾಗವಹಿಸಿದರು. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಬೃಹತ್ ರ್ಯಾಲಿ ನಡೆಸಲಾಯಿತು.
ಎನ್ಸಿಪಿ (ಶರದ್ಚಂದ್ರ ಪವಾರ್) ನಾಯಕ ಶರದ್ ಪವಾರ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಾರ್ಖಂಡ್ ಸಿಎಂ ಚಂಪೈ ಸೊರೆನ್ ಸೇರಿದಂತೆ ಪ್ರಮುಖರು ದೆಹಲಿಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಆಪ್ ನಾಯಕ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ; ಬಿಜೆಪಿ 200 ಸೀಟು ದಾಟಲ್ಲ; ಬಂಗಾಳದಲ್ಲಿ ಸಿಎಎಗೆ ಅವಕಾಶ ನೀಡುವುದಿಲ್ಲ: ಮಮತಾ ಬ್ಯಾನರ್ಜಿ