ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಬಿಜೆಪಿ ಜೊತೆ ಯಾವುದೇ ಮೈತ್ರಿ ಈಗ ಇಲ್ಲ, ಚುನಾವಣೆ ವೇಳೆ ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ಎಐಎಡಿಎಂಕೆ ಹೇಳಿದೆ.
ಈ ಕುರಿತು ಮಾತನಾಡಿದ ಎಐಎಡಿಎಂಕೆ ನಾಯಕ ಡಿ. ಜಯಕುಮಾರ್, ಇದು ನನ್ನ ವೈಯಕ್ತಿಕ ನಿಲುವಲ್ಲ ಪಕ್ಷದ ಅಭಿಪ್ರಾಯ. ಬಿಜೆಪಿ ಮೈತ್ರಿಯನ್ನು ಬಯಸುತ್ತದೆ. ಅದರೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಇದೇ ರೀತಿ ಬಯಸವುದಿಲ್ಲ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮೈತ್ರಿಯನ್ನು ಬಯಸುತ್ತಾರೆ. ಆದರೆ ಅಣ್ಣಾಮಲೈ ಮೈತ್ರಿ ಬಯಸುವುದಿಲ್ಲ. ಅವರು ನಮ್ಮ ನಾಯಕರನ್ನು ಯಾವಗಲೂ ಟೀಕಿಸುತ್ತಾರೆ. ಅವರು ರಾಜ್ಯಾಧ್ಯಕ್ಷರಾಗಲು ಅಸಮರ್ಥರು ಎಂದು ಹೇಳಿದ್ದಾರೆ.
ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ಆಪ್ತ ದಿವಂಗತ ಮಾಜಿ ಸಿಎಂ ಅಣ್ಣಾದೊರೈ ಬಗ್ಗೆ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ಹೇಳಿಕೆ ಬೆನ್ನಲ್ಲೇ ಈ ಹೇಳಿಕೆಯನ್ನು ಎಐಎಡಿಎಂಕೆ ನೀಡಿದೆ.
ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಲು ಅನರ್ಹರು. ಅವರು ತಮ್ಮನ್ನು ಪ್ರಚಾರದಲ್ಲಿರಿಸಲು ಮಾತ್ರ ದಿವಂಗತ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಜಯಕುಮಾರ್ ಹೇಳಿದ್ದಾರೆ.
ಜಯಲಲಿತಾ ಬಗ್ಗೆ ರಾಜ್ಯ ಬಿಜೆಪಿ ಮುಖ್ಯಸ್ಥರ ಹೇಳಿಕೆ ಕಳೆದ ಜೂನ್ನಲ್ಲೇ ಮೈತ್ರಿಯಿಂದ ಹಿಂದೆ ಸರಿಯುವ ಹಂತಕ್ಕೆ ತಂದು ನಿಲ್ಲಿಸಿತ್ತು. ಆದರೆ ಇದೀಗ ಅಣ್ಣಾದೊರೈ ಬಗ್ಗೆ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ಹೇಳಿಕೆ ಎಐಎಡಿಎಂಕೆಯ ಆಕ್ರೋಶಕ್ಕೆ ಕಾರಣವಾಗಿದೆ.
ಡಿಎಂಕೆ ಸಚಿವ ಶೇಖರ್ ಬಾಬು ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಣ್ಣಾಮಲೈ ಮಾತನಾಡುತ್ತಾ, ಮುತ್ತುರಾಮಲಿಂಗ ದೇವರು ನಾಸ್ತಿಕತೆಯ ವಿರುದ್ಧ ಮಾತನಾಡಿದಾಗ ಅಣ್ಣಾದೊರೈ ಹೆದರಿ ಕ್ಷಮೆ ಕೇಳಿದರು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ಎಐಎಡಿಎಂಕೆ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ: ‘ಸೌಜನ್ಯಳಿಗಾದ ಗತಿಯೇ ನಿನ್ನ ಮಗಳಿಗೂ ಆಗುತ್ತೆ’- ವ್ಯಕ್ತಿಯೋರ್ವರಿಗೆ ಮಹೇಶ್ ವಿಕ್ರಮ್ ಹೆಗಡೆ ಬೆದರಿಕೆ: FIR ದಾಖಲು