2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿವೆ. ಇದೀಗ ಜೆಡಿಎಸ್ ಪಕ್ಷ ಬಿಜೆಪಿ ನೇತೃತ್ವದಲ್ಲಿ ಎನ್ಡಿಎನ ಭಾಗವಾಗಿದೆ. ಆದರೆ, ಮೈತ್ರಿ ಬೆನ್ನಲ್ಲಿಯೇ ಜೆಡಿಎಸ್ನಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಒಂದಿಷ್ಟು ಶಾಸಕರು ಹಾಗೂ ಹಲವು ಮುಸ್ಲಿಂ ಮುಖಂಡರು ಬಿಜೆಪಿ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೋಮುವಾದಿ ಬಿಜೆಪಿಯೊಂದಿಗೆ ಜಾತ್ಯಾತೀತ ಪಕ್ಷ ಮೈತ್ರಿ ಮಾಡಿಕೊಂಡಿರುವ ವರಿಷ್ಠರ ನಡೆಗೆ ಬೇಸತ್ತ ಜೆಡಿಎಸ್ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಈಗಾಗಲೇ ಕೆಲವರು ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನ ತೊರೆಯುವುದಾಗಿ ಸಿಎಂ ಇಬ್ರಾಹಿಂ ಅವರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ಇನ್ನೂ ಹಲವು ಮುಸ್ಲಿಂ ಮುಖಂಡರು ಪಕ್ಷ ತೊರೆಯುವ ನಿಲುವಿಗೆ ಬಂದಿದ್ದಾರೆ. ಈ ಸಂಬಂಧ ಪಕ್ಷದ ಮುಸ್ಲಿಂ ಮುಖಂಡರು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ.
ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸಮುದಾಯದ ಜನರ ಭಾವನೆಗೆ ಜೆಡಿಎಸ್ ವಿರುದ್ಧವಾಗಿ ನಡೆದುಕೊಂಡಿದ್ದನ್ನು ಮನವರಿಕೆ ಮಾಡಿಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಯಾದಗಿರಿ ಜಿಲ್ಲೆಯ ಗುರುಮಿಠಕಲ್ನ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಮೈತ್ರಿ ತಮ್ಮ ಒಪ್ಪಿಗೆ ಇಲ್ಲ, ಒಂದು ವೇಳೆ ನಮ್ಮ ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೇ ಕ್ಷೇತ್ರದ ಜನಾಭಿಪ್ರಾಯ ಕೇಳಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರ ಬೆನ್ನಲ್ಲಿಯೇ ತಮ್ಮ ಜನ ಸಂಪರ್ಕ ಕಚೇರಿಯನ್ನು ಸಚಿವ ಶರಣಪ್ಪ ದರ್ಶನಾಪುರ ಅವರಿಂದ ಉದ್ಘಾಟನೆ ಮಾಡಿಸಿದ್ದರು. ಜೆಡಿಎಸ್ ಶಾಸಕರ ಈ ನಡೆ ಕುತೂಹಲ ಕೆರಳಿಸಿದೆ.
ಕೇವಲ ಶರಣಗೌಡ ಕಂದಕೂರು ಮಾತ್ರವಲ್ಲದೇ ಹಲವು ಜೆಡಿಎಸ್ ಶಾಸಕರು ಬಿಜೆಪಿ – ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 7-8 ಶಾಸಕರು ಮುಂದಿನ ನಡೆ ಏನು ಎಂಬುದನ್ನು ತೀರ್ಮಾನಿಸಲು ಸಭೆ ಸೇರುತ್ತಾರೆ ಎಂದು ಹೇಳಲಾಗಿದೆ.
ಜೆಡಿಎಸ್ – ಬಿಜೆಪಿ ಮೈತ್ರಿ ಖಚಿತವಾಗುತ್ತಿದಂತೆ ಕೊಡಗು ಜೆಡಿಎಸ್ ಮಾಜಿ ಅಧ್ಯಕ್ಷ ಕೆಎಂ ಗಣೇಶ್ ಮತ್ತು ಅವರ ಬೆಂಬಲಿಗರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಮಡಿಕೇರಿ ಬ್ಲಾಕ್ ಅಧ್ಯಕ್ಷರಾಗಿದ್ದ ಕೆಎಂ ಗಣೇಶ್, ಕೆಲ ವರ್ಷಗಳ ಹಿಂದೆ ಅಸಮಾಧಾನಗೊಂಡು ಜೆಡಿಎಸ್ ಸೇರ್ಪಡೆಯಾಗಿದ್ದರು. ಸಂಕೇತ್ ಪೂವಯ್ಯ ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಗಣೇಶ್ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ವಿಧಾನಸಭೆ ಚುನಾವಣೆಯ ಬಳಿಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗಣೇಶ್ ಜೆಡಿಎಸ್ – ಬಿಜೆಪಿ ಮೈತ್ರಿ ಖಚಿತವಾಗುತ್ತಿದಂತೆ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.
ಇದನ್ನೂ ಓದಿ: NDA ಮೈತ್ರಿಕೂಟಕ್ಕೆ ಅಧಿಕೃತವಾಗಿ JDS ಸೇರ್ಪಡೆ