ಭಾರತದಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಬೆಂಬಲಿಸುತ್ತಿದ್ದರೆ, ಮತ್ತೊಂದೆಡೆ ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ಬಿಜೆಪಿ ನಾಯಕರು ನಿಂತಿದ್ದಾರೆ.
ಆರೋಪಿಯನ್ನು ಬಂಧಿಸಬೇಕು ಎಂಬ ಆಗ್ರಹ ತೀವ್ರವಾಗುತ್ತಿದ್ದರೂ ಸಂತ್ರಸ್ತರ ಪರವಾಗಿ ನಿಲ್ಲದ ಬಿಜೆಪಿ ನಾಯಕರು ಬ್ರಿಜ್ಭೂಷಣ್ ಪರ ಅಖಾಡಕ್ಕೆ ಇಳಿದಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವ್ಯಾಪಕವಾದ ರಾಜಕೀಯ ಪ್ರಭಾವವನ್ನು ಹೊಂದಿರುವ ದೇವಿಪಟನ್ ಪ್ರದೇಶದ ಹಲವಾರು ಬಿಜೆಪಿ ಶಾಸಕರು ಆರೋಪಿಯ ಬೆಂಬಲಕ್ಕೆ ಬಂದಿದ್ದಾರೆ. ಅಯೋಧ್ಯೆಯಲ್ಲಿ ಆರೋಪಿ ಬ್ರಿಜ್ ಆರೋಜಿಸಿರುವ ರ್ಯಾಲಿಯಲ್ಲಿ ಶಕ್ತಿ ಪ್ರದರ್ಶನವಾಗಲಿದೆ.
ಜೂನ್ 5ರಂದು ಅಯೋಧ್ಯೆಯಲ್ಲಿ ‘ಜನ್ ಚೇತನ ಮಹಾ ರ್ಯಾಲಿ’ಯನ್ನು ಆಯೋಜಿಸುವುದಾಗಿ ಬ್ರಿಜ್ ಭೂಷಣ್ ಹೇಳಿದ್ದಾರೆ. ನವದೆಹಲಿಯಲ್ಲಿ ಆರೋಪಿಯ ವಿರುದ್ಧ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ವಿರುದ್ಧ ಹಿಂದೂ ಧಾರ್ಮಿಕ ಮುಖಂಡರ ಬೆಂಬಲವನ್ನು ಪಡೆಯುವ ಪ್ರಯತ್ನವೆಂದೇ ಈ ರ್ಯಾಲಿಯನ್ನು ಪರಿಗಣಿಸಲಾಗಿದೆ.
ಅಯೋಧ್ಯೆಯ ಪ್ರಮುಖ ಸ್ವಾಮೀಜಿಗಳು ಕೂಡ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ವರದಿಯಾಗಿದೆ.
ಅಯೋಧ್ಯೆಯಲ್ಲಿನ ಸ್ವಾಮೀಜಿಗಳು ಬ್ರಿಜ್ನನ್ನು ಬೆಂಬಲಿಸಿ ಅಯೋಧ್ಯೆಯಲ್ಲಿ ರ್ಯಾಲಿಯನ್ನು ಆಯೋಜಿಸುವವರೆಗೂ ಹೋಗಿದ್ದಾರೆ. “ಪೋಕ್ಸೋ ಕಾಯಿದೆಯು ಅನೇಕ ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳನ್ನು ಹೊಂದಿದೆ” ಎಂದು ಕಾಯ್ದೆಯ ವಿರುದ್ಧವೂ ಪ್ರತಿಭಟಿಸಲಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.
“ನಾವು ಅಯೋಧ್ಯೆಯ ಧರ್ಮಗುರುಗಳು ಮತ್ತು ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬಂದವರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ರ್ಯಾಲಿಯನ್ನು ನಡೆಸುತ್ತೇವೆ” ಎಂದು ಮಹಂತ್ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ.
“ಪೋಕ್ಸೊ ಕಾಯಿದೆಯಲ್ಲಿ ಹಲವು ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳಿರುವುದರಿಂದ ನಾವು ಅದನ್ನು ವಿರೋಧಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ಕುಸ್ತಿಪಟುಗಳ ಪ್ರತಿಭಟನೆ: ಇಂದು ರೈತ ಮುಖಂಡ ನರೇಶ್ ಟಿಕಾಯತ್ ನೇತೃತ್ವದಲ್ಲಿ ‘ಮಹಾಪಂಚಾಯತ್’
ಜೂನ್ 5ರಂದು ರ್ಯಾಲಿ ನಡೆಸುವುದಾಗಿ ಸಿಂಗ್ ಈ ಹಿಂದೆ ಘೋಷಿಸಿದ್ದರು. ಸ್ವಾಮೀಜಿಗಳು ಹೇಳುತ್ತಿರುವುದು ಅದೇ ರ್ಯಾಲಿಯೆಂದು ತೋರುತ್ತಿದೆ.
ಸಿಂಗ್ ವಿರುದ್ಧದ ಎರಡು ಎಫ್ಐಆರ್ಗಳಲ್ಲಿ ಒಂದು ಪೋಕ್ಸೊ ಕಾಯ್ದೆಯಡಿಯಲ್ಲಿದ್ದರೂ, ಪೊಲೀಸರು ಮತ್ತು ಬಿಜೆಪಿ ಸರ್ಕಾರವು ಆರೋಪಿಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಈ ಕಾನೂನಿನ ಪ್ರಕಾರ ಸಾಮಾನ್ಯವಾಗಿ ತ್ವರಿತ ಮತ್ತು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೂತನ ಸಂಸತ್ ಭವನದ ಉದ್ಘಾಟನೆ ಭಾನುವಾರ ನಡೆಯಿತು. ಸಮಾರಂಭದಲ್ಲಿ ಬ್ರಿಜ್ ಭೂಷಣ್ ಭಾಗಹಿಸಿದ್ದರು. ಈ ಮೂಲಕ ಬಿಜೆಪಿ ತನ್ನ ಪರ ಇದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.