ಬುದ್ದಿವಂತರ ಜಿಲ್ಲೆ ಎಂಬ ದಕ್ಷಿಣಕನ್ನಡದ ಖ್ಯಾತಿಗೆ ಅಸೂಯೆಪಟ್ಟು ಬಿಜೆಪಿ ವರಿಷ್ಠರು ನಳಿನ್ ಕುಮಾರ್
ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರಬಹುದು, ಇಲ್ಲವೇ ಪಕ್ಷದಲ್ಲಿ ಈ ಮಟ್ಟದ ಬೌದ್ದಿಕ ದಾರಿದ್ರ್ಯ ಇದ್ದಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
“ಬಿಜೆಪಿ ವಿರುದ್ಧ ಅನಗತ್ಯವಾದ ಆರೋಪಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ” ಎಂದು ದೂರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸಿದ್ದರಾಮಯ್ಯ ಸರಣಿ ಟ್ವೀಟ್ಗಳ ಮೂಲಕ ತಿರುಗೇಟು ನೀಡಿದ್ದಾರೆ.
“ನಳಿನ್ ಕುಮಾರ್ ಕಟೀಲ್ ಅವರೇ, 2013-18 ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45. ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಪದಚ್ಯುತಿಗೆ RSS ನಾಯಕರು ಪ್ರಯತ್ನಿಸುತ್ತಿದ್ದಾರೆ: ಸಿದ್ದರಾಮಯ್ಯ
“2013-18 ರ ಅವಧಿಯಲ್ಲಿ ಕೋಮುಸಂಘರ್ಷಕ್ಕೆ ಹತ್ಯೆಗೀಡಾಗಿದ್ದ 10 ಹಿಂದುಗಳ ಹತ್ಯೆಯ ಆರೋಪಿಗಳು ಎಸ್ಡಿಪಿಐ, ಪಿಎಫ್ಐ ಸಂಘಟನೆಯವರಾದರೆ, 11 ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಯವರು. ಈಗ ಹೇಳಿ ಯಾವುದನ್ನು ನಿಷೇಧಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
2013-18ರ ಅವಧಿಯಲ್ಲಿ ಕೋಮುಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ 10 ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ,ಪಿಎಫ್ಐ ಸಂಘಟನೆಯವರಾದರೆ,
11 ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಯವರು.
ಈಗ ಹೇಳಿ ಯಾವುದನ್ನು ನಿಷೇಧಿಸುತ್ತೀರಿ?
2/7 pic.twitter.com/QMwxa92myq— Siddaramaiah (@siddaramaiah) August 21, 2020
ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ ನಳಿನ್ ಕುಮಾರ್ ಅವರೇ? ಎಂದು ಕೇಳಿದ್ದಾರೆ.
ಇದನ್ನೂ ಓದಿ: ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ: ಸಿದ್ದರಾಮಯ್ಯ
ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನಳಿನ್ ಕುಮಾರ್ ಅವರೇ, ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ, ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಹಿಂದು ಪರೇಶ್ ಮೇಸ್ತನ ಕುಟುಂಬಕ್ಕೆ ನ್ಯಾಯ ಯಾವಾಗ ಕೊಡಿಸುವಿರಿ? ಎಂದು ಆಗ್ರಹಿಸಿದ್ದಾರೆ.
ಹಿಂದುಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನೀವು, ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳು ಯಾರೆಂದು ತಿಳಿಸುವಿರಾ? ಎಂದು ಕೇಳಿದ್ದಾರೆ.
ಹಿಂದು ಧರ್ಮಕ್ಕೆ ಸೇರಿರುವ ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನಿಮ್ಮ ಖಾಸಾ ದೋಸ್ತ್ ನರೇಶ್ ಶೆಣೈಯನ್ನು ರಕ್ಷಿಸುತ್ತಿರುವವರು ಯಾರೆಂದು ತಿಳಿಸುವಿರಾ? ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯ ಕೊಡಿಸುತ್ತೀರಿ? ಎಂದು ಪ್ರಶ್ನೆಗಳ ಸುರಿಮಳೆ ಹಾಕಿದ್ದಾರೆ.
ಓದಿ: ಪ್ರವಾದಿ ನಿಂದನೆ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣ: ಸಿದ್ದರಾಮಯ್ಯನವರ 13 ಅಂಶಗಳ ಪತ್ರ – ಉತ್ತರಿಸುವರೇ ಸಿಎಂ?
ಟಗರು ಕೆಣಕಲು ಹೊಗ್ಬೆೇಡಿ