ಬಿಜೆಪಿ ಶಾಸಕ ಮತ್ತು ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ಮತ್ತೊಮ್ಮೆ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಗುಡುಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರೇ ಜೈಲಿಗೆ ಹೋಗಿ ಬಂದ ಉದಾಹರಣೆ ಇದೆ. ಮುಂದೆ ಮತ್ತೊಮ್ಮೆ ಅಂತಹ ದಿನಗಳು ಬಂದರೂ ಬರಬಹುದು. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೂರಾರು ವರ್ಷ ದೇಶವನ್ನು ಆಳಿದ ಮೊಘಲರ ಸಂತತಿ ನಾಶವಾಗಿದೆ. ರಾಜ ಮಹಾರಾಜರೆಲ್ಲ ಅಳಿದು ಹೋಗಿದ್ದಾರೆ. ಈಗಿರುವವರೂ ಹೋಗುತ್ತಾರೆ. ಕೆಲವು ಮಠಾಧೀಶರನ್ನು ಖರೀದಿಸಿ ಹೆಚ್ಚು ದಿನ ಅಧಿಕಾರ ನಡೆಸಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಬಿಎಸ್ ಯಡಿಯೂರಪ್ಪ ಮನೆಗೆ ಹೋಗುತ್ತಾರೆ ಎಂದು ಅವರು ಮುಖ್ಯಮಂತ್ರಿಯ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಅನ್ನದಾತರ ವಿರುದ್ದ ಕತ್ತಿ ಎತ್ತಿ, ರೈತ ವಿರೋಧಿ ಘೋಷಣೆ ಕೂಗಿದ BJP ಕಾರ್ಯಕರ್ತರು
ವೀರಶೈವ-ಲಿಂಗಾಯತ ರಾಜಕೀಯ ಬ್ರಿಗೇಡ್ನಲ್ಲಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಏಜೆಂಟ್ಗಳೇ ತುಂಬಿ ಹೋಗಿದ್ದಾರೆ. ಸರ್ಕಾರದಲ್ಲಿರುವ ಕೆಲವು ಮಂತ್ರಿಗಳು ಮುಂದೊಂದು ಹಿಂದೊಂದು ಮಾತನಾಡುತ್ತಾರೆ. ಯೋಗೀಶ್ವರ್, ವಿಶ್ವನಾಥ್, ಯತ್ನಾಲ್ ಮೂವರೇ ಮುಖ್ಯಮಂತ್ರಿಗಳನ್ನು ಇಳಿಸಲು ಪ್ರಯತ್ನಿಸುತ್ತಿಲ್ಲ, ಪ್ರಸ್ತುತ ಸರ್ಕಾರದ ಹಲವು ಮಂತ್ರಿಗಳು ಬಿ.ಎಸ್.ಯಡಿಯೂರಪ್ಪನವರನ್ನು ನಾಯಕತ್ವದಿಂದ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳು ಮುಖ್ಯಮಂತ್ರಿಗಳ ಮರ್ಜಿಯಲ್ಲಿ ಇರುವುದರಿಂದ ಇದ್ಯಾವುದೂ ಕಾಣುತ್ತಿಲ್ಲ ಎಂದು ಕೆಲವು ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.
ಪಂಚಮಸಾಲಿಗಳ 3 ನೇ ಒಕ್ಕೂಟವೊಂದು ನಿರ್ಮಾಣವಾಗುತ್ತಿದೆ. ಸಚಿವ ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯವನ್ನು ಒಡೆಯುವ ಪ್ರಯತ್ನಕ್ಕೆ ಕೈಹಾಕಿದ್ದು ಹಣಕ್ಕೆ ಸಮುದಾಯವನ್ನು ಖರೀದಿಸಲು ಸಾಧ್ಯವಿಲ್ಲವೆಂದು ಸಚಿವ ನಿರಾಣಿ ವಿರುದ್ಧವೂ ಬಸವನಗೌಡ ಪಾಟೀಲ ಯತ್ನಾಳ್ ಆರೋಪಗಳನ್ನು ಮಾಡಿದ್ದಾರೆ.
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸಕ್ಕೂ ಮೊದಲೇ ಇದರಿಂದ ಏನೂ ಪ್ರಯೋಜನವಿಲ್ಲವೆಂದು ಗೊತ್ತಿತ್ತು. ದುಷ್ಟರ ಸಂಹಾರದಿಂದ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಾಗಲಿದೆ. ಆ ದಿನ ಸದ್ಯದಲ್ಲಿಯೇ ಬರಲಿದೆ ಎಂದು ಯತ್ನಾಳ್ ನಾಯಕತ್ವ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಹಳ್ಳಿಗಳ ಕನ್ನಡ ಹೆಸರು ಮಲಯಾಳೀಕರಣ: ವಿವಾದದ ಬಗ್ಗೆ ಕೇರಳ ಸಿಎಂ ಪ್ರತಿಕ್ರಿಯೆ ಹೀಗಿದೆ!