ಫತೇಪುರ್ ಸಿಕ್ರಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದ್ದು , ಪಕ್ಷದ ಸ್ಥಳೀಯ ಶಾಸಕ ಬಾಬುಲಾಲ್ ಚೌಧರಿ ಅವರು ಪಕ್ಷದ ಅಭ್ಯರ್ಥಿ ಮತ್ತು ಹಾಲಿ ಸಂಸದ ರಾಜ್ಕುಮಾರ್ ಚಹಾರ್ ವಿರುದ್ಧ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
2014ರಿಂದ 2019ರವರೆಗೆ ಬಿಜೆಪಿ ಸಂಸದರಾಗಿದ್ದ ಚೌಧರಿ ಅವರಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಸಂಸದ ರಾಜ್ಕುಮಾರ್ ಚಹಾರ್ ಅವರು ಆ ಬಳಿಕ ಕ್ಷೇತ್ರದಲ್ಲಿ ಸಂಸದರಾಗಿದ್ದರು. ಈ ಬಾರಿಯು ಲೋಕಸಭೆ ಚುನಾವಣೆಗೆ ಅವರಿಗೆ ಟಿಕೆಟ್ ನೀಡಲಾಗಿದೆ, ಆದರೆ ಸ್ವಪಕ್ಷದ ಅಭ್ಯರ್ಥಿಯ ವಿರುದ್ಧವೇ ಶಾಸಕ ಬಾಬುಲಾಲ್ ಚೌಧರಿ ತನ್ನ ಪುತ್ರ ರಾಮೇಶ್ವರ್ ಚೌಧರಿ (50) ಅವರನ್ನು ಕಣಕ್ಕಿಳಿಸಿದ್ದಾರೆ.
ಜಾಟ್ ಸಮುದಾಯದಿಂದ ಬಂದಿರುವ ಬಾಬುಲಾಲ್ ಚೌಧರಿ ಅವರು ಬಿಜೆಪಿಗೆ ಸೇರುವ ಮೊದಲು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಜೊತೆಗಿದ್ದರು. ತಮ್ಮ ಪುತ್ರನನ್ನು ಬಾಬುಲಾಲ್ ಚೌಧರಿ “ಜನರ ಅಭ್ಯರ್ಥಿ” ಎಂದು ಹೇಳಿದ್ದು, ಜಾಟ್ ಸಮುದಾಯದ ಪಂಚಾಯತ್ನಲ್ಲಿ ಒಮ್ಮತದ ಆಗ್ರಹ ಬಂದ ಕೇಳಿ ಬಂದ ಕಾರಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸ್ಥಳೀಯರು ಪಕ್ಷದ ಅಭ್ಯರ್ಥಿ ರಾಜ್ಕುಮಾರ್ಗಿಂತ ತಮ್ಮ ಮಗನಿಗೆ ಆದ್ಯತೆ ನೀಡುತ್ತಾರೆ, ಸಂಸದರು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಅವರಿಗೆ ಇಲ್ಲಿನ ಸಮಸ್ಯೆ, ಕೊರತೆ ಬಗ್ಗೆ ಗೊತ್ತಿಲ್ಲ, ಜನರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಆಗ್ರಾ ಜಿಲ್ಲಾಧ್ಯಕ್ಷ ಗಿರಿರಾಜ್ ಕುಶ್ವಾಹ ಅವರು ಈ ಬಗ್ಗೆ ಮಾತನಾಡಿದ್ದು, ತಮ್ಮ ಮಗನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಶಾಸಕ ಬಾಬುಲಾಲ್ ಅವರ ಮನವೊಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಕುಮಾರ್ ಚಾಹರ್ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ.
ರಾಮೇಶ್ವರ್ ಚೌಧರಿ ಅವರು 1998 ಮತ್ತು 1999ರಲ್ಲಿ ಆಗ್ರಾ ಮತ್ತು ಮಥುರಾದಿಂದ ಅನುಕ್ರಮವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮೂರು ಬಾರಿ ಶಾಸಕರಾಗಿದ್ದ ಬಾಬುಲಾಲ್ ಚೌಧರಿ ಅವರು 1996ರಲ್ಲಿ ಸ್ವತಂತ್ರವಾಗಿ ಮತ್ತು ನಂತರ ಲೋಕದಳದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದರು. ಮೂರನೇ ಬಾರಿಗೆ ಬಿಜೆಪಿಯಿಂದ ಗೆಲುವನ್ನು ಸಾಧಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ಹಾಲಿ ಸಂಸದರು ಜನರ ಕೈಗೆ ಸಿಕ್ಕಿಲ್ಲ, ಕ್ಷೇತ್ರದ ಜನರ ಕೆಲಸವನ್ನು ಮಾಡಿಲ್ಲ, ಅದಕ್ಕೆ ಅವರ ವಿರುದ್ಧದ ಅಲೆ ಕ್ಷೇತ್ರದಲ್ಲಿದೆ ಎಂದು ಶಾಸಕ ಬಾಬುಲಾಲ್ ಚೌಧರಿ ಹೇಳಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಜನರ ಸುಖ-ದುಃಖಗಳಲ್ಲಿ ಅವರೊಂದಿಗಿದ್ದೆ, ನಾನೇಕೆ ಸ್ಪರ್ಧಿಸಬಾರದು? ಎಂದು ರಾಮೇಶ್ವರ್ ಪ್ರಶ್ನಿಸಿದ್ದಾರೆ.
ಸುಮಾರು 18 ಲಕ್ಷ ಮತದಾರರನ್ನು ಹೊಂದಿರುವ ಫತೇಪುರ್ ಸಿಕ್ರಿ ಲೋಕಸಭೆ ಕ್ಷೇತ್ರದಲ್ಲಿ ಸುಮಾರು 3 ಲಕ್ಷ ಜಾಟ್ ಸಮುದಾಯದ ಜನರಿದ್ದಾರೆ. ಈ ಲೋಕಸಭಾ ಕ್ಷೇತ್ರ ಫತೇಪುರ್ ಸಿಕ್ರಿ, ಫತೇಹಾಬಾದ್, ಖೇರಗಢ್, ಆಗ್ರಾ ಗ್ರಾಮಾಂತರ ಮತ್ತು ಬಹ್ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಇದನ್ನು ಓದಿ: ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ ಸೂರ್ಯ ತುಚ್ಛ ಮಾತು!