ಬಿಜೆಪಿ ಸಂಸದ, ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಯುವ ಕುಸ್ತಿಪಟು ಒಬ್ಬರಿಗೆ ವೇದಿಕೆಯಲ್ಲಿ ಕಪಾಳಕ್ಕೆ ಹೊಡೆದಿರುವ ಘಟನೆ ಜಾರ್ಖಾಂಡ್ನ ರಾಂಚಿಯಲ್ಲಿ ನಡೆದಿದೆ.
ಶಹೀದ್ ಗಣಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ವೇಳೆ ಘಟನೆ ನಡೆದಿದ್ದು ಬ್ರಿಜ್ ಭೂಷಣ್ ವರ್ತನೆ ಟೀಕೆಗೆ ಒಳಗಾಗಿದೆ.
ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ಅನೇಕ ಕುಸ್ತಿಪಟುಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿರುವ ಬ್ರಿಜ್ ಭೂಷನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಜಾರ್ಖಂಡ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ಭೋಲಾ ನಾಥ್ ಸಿಂಗ್ ಮತ್ತು ಇತರರು ವಿವಾದವನ್ನು ತಿಳಿಯಾಗಿಸಲು ಯತ್ನಿಸಿದ್ದಾರೆ.
ವಯೋಮಿತಿ ಪರಿಶೀಲನೆಯ ವೇಳೆ ಉತ್ತರ ಪ್ರದೇಶದ ಕುಸ್ತಿಪಟು 15 ವರ್ಷ ಮೇಲ್ಪಟ್ಟಿರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಸ್ಪರ್ಧೆಯಿಂದ ಹೊರಗುಳಿಸಲಾಯಿತು. ಆದಾಗ್ಯೂ, ಮೊದಲು ಕುಸ್ತಿಪಟು ದೂರು ದಾಖಲಿಸಿದರು. ನಂತರ ವೇದಿಕೆಯ ಮೇಲೆ ಹತ್ತಿ ಬ್ರಿಜ್ ಭೂಷಣ್ ಅವರೊಂದಿಗೆ ವಾದಕ್ಕಿಳಿದರು ಎನ್ನಲಾಗಿದೆ.
ವೇದಿಕೆಯಿಂದ ಕೆಳಗಿಳಿಯುವಂತೆ ಹೇಳಿದರೂ ಕುಸ್ತಿಪಟು ಇಳಿಯಲಿಲ್ಲ ಎನ್ನಲಾಗಿದೆ. ಇದಾದ ನಂತರ ಡಬ್ಲ್ಯುಎಫ್ಐ ಅಧ್ಯಕ್ಷರು ತಾಳ್ಮೆ ಕಳೆದುಕೊಂಡು ಎಲ್ಲರ ಮುಂದೆ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ಅಶಿಸ್ತನ್ನು ಯಾರೂ ಸಹಿಸುವುದಿಲ್ಲ. ಕುಸ್ತಿಪಟು ವಯೋಮಿತಿಯ ಹೊರತಾಗಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ, ಅದು ಇತರ ಕುಸ್ತಿಪಟುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ” ಎಂದು ಘಟನೆಯ ಬಳಿಕ ಸಿಂಗ್ ಹೇಳಿದ್ದಾರೆ.
“ಹಿರಿಯ ಕುಸ್ತಿಪಟುಗಳು ಕಿರಿಯ ಕುಸ್ತಿಪಟುಗಳ ಸ್ಪರ್ಧೆಗಳಲ್ಲಿ ಭಾಗವಹಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಕ್ರೀಡಾ ಅಧಿಕಾರಿಗಳು ಈ ವಿಷಯವನ್ನು ಒಪ್ಪಿಕೊಂಡು ಇದನ್ನು ತಡೆಯಬೇಕು” ಎಂದು ಝಾರ್ಖಾಂಡ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ಭೋಲಾ ನಾಥ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿರಿ: 5 ವರ್ಷಗಳ ಕಾನೂನು ಪದವಿಯ 2 & 4ನೇ ಸೆಮಿಸ್ಟರ್ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳು