ಅಕ್ರಮ ಗಣಿಗಾರಿಕೆ, ಕೆಆರ್ಎಸ್ ಅಣೆಕಟ್ಟಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರ ನಡುವೆ ನಡೆಯುತ್ತಿದ್ದ ಸಂಘರ್ಷ ಇದೀಗ ಸಿನಿಮಾರಂಗಕ್ಕೂ ಕಾಲಿಟ್ಟಿದೆ. ದಿವಂಗತ ನಟ ಅಂಬರೀಶ್ ಅವರ ಸ್ಮಾರಕದ ವಿಷಯದಲ್ಲಿ ಹೆಚ್ಡಿಕೆ ಅವರನ್ನು ಭೇಟಿಯಾಗಿದ್ದ ನಟ ದೊಡ್ಡಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಸುಮಲತಾ ಅವರು ಆರೋಪಿಸಿದ್ದಾರೆ. ಇದರ ಜೊತೆಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಕೂಡಾ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.
ರಾಕ್ಲೈನ್ ವೆಂಕಟೇಶ್ ಹೇಳಿಕೆ ಕುಮಾರಸ್ವಾಮಿ ಬೆಂಬಲಿಗರನ್ನು ಕೆರಳಿಸಿದ್ದು, ಅವರ ಮನೆಗೆ ಮುತ್ತಿಗೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಮನೆಯ ರಸ್ತೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆಗೆ ಎಚ್.ಡಿ.ಕುಮಾರಸ್ವಾಮಿಯೇ ಪ್ರಮುಖ ರೂವಾರಿ: ಎಎಪಿ
ಶುಕ್ರವಾರ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದ ರಾಕ್ಲೈನ್ ವೆಂಕಟೇಶ್, ಮಂಡ್ಯ ಲೋಕಸಭಾ ಚುನಾವಣೆ ವೇಳೆ ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು ಕುಮಾರಸ್ವಾಮಿ ಯತ್ನಿಸಿದ್ದರು. ವೈಯಕ್ತಿಕ ದಾಳಿಗೆ ಇಳಿದಿದ್ದ ಕುಮಾರಸ್ವಾಮಿ, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಮಲತಾರ ತೇಜೋವಧೆ ಮಾಡುವ ಯೋಜನೆ ರೂಪಿಸಿದ್ದರು ಎಂದು ಹೇಳಿದ್ದರು.
“ಮಂಡ್ಯ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕಾಗಿ ನಾವೆಲ್ಲ ಒಂದೇ ಹೋಟೆಲ್ನಲ್ಲಿ ತಂಗಿದ್ದೆವು. ಹೋಟೆಲ್ನಲ್ಲಿ ನಾನು, ಸುಮಲತಾ ಓಡಾಡಿರುವ ಸಿಸಿಟಿವಿ ದೃಶ್ಯವನ್ನು ಹೋಟೆಲ್ ಸಿಬ್ಬಂದಿಯಿಂದ ಪಡೆದುಕೊಂಡು, ನಾನು ಸುಮಲತಾ ಅವರ ಹೆಗಲ ಮೇಲೆ ಕೈ ಹಾಕಿರುವಂತೆ ವಿಡಿಯೋವನ್ನು ತಿರುಚಿದ್ದರಂತೆ. ಇಬ್ಬರೂ ಒಂದೇ ಕೊಠಡಿಗೆ ಹೋಗುತ್ತಿರುವ ಹಾಗೇ ವಿಡಿಯೋವನ್ನು ಸೃಷ್ಟಿಸಿದ್ದರು” ಎಂದು ರಾಕ್ಲೈನ್ ಆರೋಪಿಸಿದ್ದರು.
“ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸಂಸದೆ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಇದ್ದಾನೆ, ಅಂಬಿ ಅಭಿಮಾನಿಗಳು ಅವರ ಕುಟುಂಬ ಕಾಯುತ್ತಾರೆ. ಸುಮಲತಾರನ್ನು ಅಡ್ಡ ಮಲಗಿಸಿ ಎಂದು ಕುಮಾರಸ್ವಾಮಿ ಮಾತಾಡಿದ್ದಾರೆ. ಅಮೇಲೆ ಕಾವಲು ಕಾಯಬೇಕು ಎಂದಿದ್ದೇನೆ ಎಂದು ಹೇಳಿದ್ದರು. ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ತಿರುಚುತ್ತಾರೆ” ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದರು.
ಇದನ್ನೂ ಓದಿ: ಪ್ರತಾಪ್ ಸಿಂಹ ಪೇಟೆ ರೌಡಿ ತರ ಮಾತನಾಡುತ್ತಾರೆ; ಪ್ರತಿಕ್ರಿಯೆಗೆ ಅರ್ಹರಲ್ಲ: ಸಂಸದೆ ಸುಮಲತ
ರಾಕ್ಲೈನ್ ಅವರ ಹೇಳಿಕೆ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದ್ದು, ಇಂದು ಬೆಳಿಗ್ಗೆ ರಾಕ್ಲೈನ್ ಮನೆಗೆ ಮುತ್ತಿಗೆ ಹಾಕಿದ್ದಾರೆ. ಈ ಮಾಹಿತಿ ಮೊದಲೆ ತಿಳಿದಿದ್ದ ಪೊಲೀಸರು ರಾಕ್ಲೈನ್ ಮನೆಯ ಏರಿಯಾಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದರು. ಅದಾಗಿಯೂ ಕಾರ್ಯಕರ್ತರು ಅಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಈ ನಡುವೆ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ಸುಮಲತಾ ಆರೋಪವನ್ನು ತಳ್ಳಿ ಹಾಕಿರುವ ಕಾವೇರಿ ನೀರಾವರಿ ನಿಗಮ, “ಅಣೆಕಟ್ಟೆಯಲ್ಲಿ ಯಾವುದೆ ರೀತಿಯ ಇಲ್ಲ” ಎಂದು ಸ್ಪಷ್ಟಪಡಿಸಿದೆ.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಅವರು ‘‘ಕೆಆರ್ಎಸ್ ಅಣೆಕಟ್ಟು ಸುರಕ್ಷಿತವಾಗಿದೆ. ಅಣೆಕಟ್ಟಿನ ಗೋಡೆಯಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಆಗಾಗ್ಗೆ ನಡೆಸಿದ ತಪಾಸಣೆಯಿಂದ ಖಚಿತವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಣೆಕಟ್ಟು ಸುರಕ್ಷಾ ಪರಿಶೀಲನಾ ಸಮಿತಿ ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಜುಲೈ 2 ರಂದು ಕೆಆರ್ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆಯೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದರು ಎಂದು ಜಯಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್