ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ. ಆ ಯಮ್ಮನ ನಾನು ಹ್ಯಾಂಡಲ್ ಮಾಡುತ್ತೇನೆ ಎಂದಿದ್ದ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್ ಸಿಂಹ ಹೇಳಿಕೆಗೆ ಉತ್ತರಿಸುವುದಿಲ್ಲ, ಒಬ್ಬ ಪೇಟೆ ರೌಡಿ ತರ ಮಾತಾಡೋದಾದರೆ ನನ್ನ ಪ್ರತಿಕ್ರಿಯೆಗೆ ಅವರು ಅರ್ಹರಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಸಂಸದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಿನ ಜನ ಸಮಸ್ಯೆಗಳನ್ನು ಬಂದು ನಮಗೂ ಹೇಳುತ್ತಾರೆ. ನಾನು ಬರೀ ಮಂಡ್ಯದ ಸಂಸದೆ ಅಲ್ಲ. ಬದಲಿಗೆ ನಾನು ಮೈಸೂರಿನ ಒಂದು ಭಾಗದ ಸಂಸದೆಯೂ ಕೂಡಾ ಹೌದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಒಬ್ಬ ಬ್ಲೂ ಫಿಲ್ಮ್ ಹೀರೋ: ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪ
“ಇದು ಪ್ರತಿಕ್ರಿಯೆ ನೀಡುವಂತಹ ವಿಷಯ ಅಲ್ಲ. ಚುನಾವಣೆಯಿಂದಲೂ ಇಂತಹ ಮಾತುಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಅಂಬರೀಷ್ ಇರುವಾಗ ಯಾರಿಗೂ ಈ ರೀತಿ ಮಾತಾಡಲು ಧೈರ್ಯ ಇರಲಿಲ್ಲ. ಈಗ ಎಲ್ಲರೂ ಮಾತಾನಾಡುತ್ತಾ ಇದ್ದಾರೆ. ನಾನು ನನ್ನ ಜನರಿಗೆ ಉತ್ತರದಾಯಿತ್ವವೇ ಹೊರತು ಪಕ್ಕದ ಕ್ಷೇತ್ರದ ಎಂಪಿಗೆ ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರತಾಪ್ಸಿಂಹ ನಮ್ಮ ಪಕ್ಕದ ಕ್ಷೇತ್ರದ ಸಂಸದರು. ನಮ್ಮ ಕ್ಷೇತ್ರದ ಬಗ್ಗೆ ಅವರು ಮಾತನ್ನಾಡುವುದು ಸರಿಯಲ್ಲ. ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಬಗ್ಗೆ ಮಾತನಾಡಲು ಹಕ್ಕಿಲ್ಲ. ಸಂಸದರು ಸಂಸದರ ಭಾಷೆ ಬಳಸಿ ಮಾತನಾಡಿದರೆ ಸರಿ, ಅವರು ಪೇಟೆ ರೌಡಿ ರೀತಿಯಲ್ಲಿ ಮಾತನಾಡಿದರೆ ನಾನು ಉತ್ತರ ನೀಡುವುದಿಲ್ಲ” ಎಂದು ಸಂಸದೆ ಹೇಳಿದ್ದಾರೆ.
ಇದನ್ನೂ ಓದಿ: ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ: ಸುಮಲತಾ ಅಂಬರೀಶ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ವೈರಲ್