ವಿವಾದಿತ ಮೂರು ಕೃಷಿ ಕಾನೂನುಗಳ ಕುರಿತು ಒಕ್ಕೂಟ ಸರ್ಕಾರ ಚರ್ಚಿಸಲು ಬಯಸಿದರೆ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಯಾವುದೇ ಷರತ್ತು ವಿಧಿಸಬಾರದು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
“ಕೃಷಿ ಕಾನೂನುಗಳನ್ನು ಹಿಂಪಡೆಯದ ಸರ್ಕಾರ, ರೈತ ಪ್ರತಿಭಟನೆಯನ್ನು ಕೊನೆಗೊಳಿಸಲು ಹೇಳುತ್ತಿದ್ದಾರೆ. ರೈತರು 8 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ಆದೇಶಗಳನ್ನು ಪಾಲಿಸಲು ಅಲ್ಲ” ಎಂದಿದ್ದಾರೆ.
“ಸರ್ಕಾರ ಮಾತನಾಡಲು ಬಯಸಿದರೆ, ರೈತರ ಜೊತೆಗೆ ಮಾತನಾಡಬಹುದು, ಆದರೆ ಯಾವುದೇ ಷರತ್ತು ವಿಧಿಸಬಾರದು” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಒಕ್ಕೂಟ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದಿಲ್ಲ. ಪ್ರತಿಭಟನೆಯನ್ನು ಬಿಟ್ಟು ಚರ್ಚೆಗೆ ಬರಲು ರೈತರನ್ನು ಆಹ್ವಾನಿಸಿದ ಬಳಿಕ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್
“ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಎಪಿಎಂಸಿಗಳು 1 ಲಕ್ಷ ಕೋಟಿ ರೂಪಾಯಿಯ ಮೂಲಸೌಕರ್ಯ ನಿಧಿಯ ಭಾಗವಾಗಲಿದೆ ಎಂದು ಒಕ್ಕೂಟ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಸಾಲಗಳು, ಬಡ್ಡಿ ಮನ್ನಾ ಮೂಲಕ ಎಪಿಎಂಸಿ ನಿಧಿಯಿಂದ ರೈತರು ಲಾಭ ಪಡೆಯಬಹುದು”ಎಂದು ಸಚಿವ ತೋಮರ್ ಹೇಳಿದ್ದಾರೆ.
“ಆತ್ಮನಿರ್ಭರ ಭಾರತ ಅಡಿಯಲ್ಲಿ ರೈತ ಮೂಲಸೌಕರ್ಯ ನಿಧಿಗೆ ನಿಗದಿಪಡಿಸಿದ 1 ಲಕ್ಷ ಕೋಟಿ ರೂಪಾಯಿಗಳನ್ನು ಎಪಿಎಂಸಿಗಳು ಬಳಸಬಹುದು” ಎಂದು ಹೇಳಿದ್ದಾರೆ.
ಈ ಮಾತುಗಳನ್ನು ಮತ್ತು ಸರ್ಕಾರದ ಯೋಜನೆಯನ್ನು ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. “ವ್ಯಾಪಾರವಿಲ್ಲದಿದ್ದರೂ ಎಪಿಎಂಸಿಗಳು ಮುಂದುವರಿಯುವ ಈ ಸೂತ್ರ ಯಾವುದು?. “ಎಪಿಎಂಸಿಗಳು ಹೇಗೆ ಉಳಿಯುತ್ತವೆ ಎಂಬುದನ್ನು ಅವರು ನಮಗೆ ತಿಳಿಸಬೇಕು. ಉತ್ಪನ್ನಗಳನ್ನು ಎಪಿಎಂಸಿಗಳ ಹೊರಗೆ ಖರೀದಿಸಿದರೆ, ಎಪಿಎಂಸಿಗಳು ಮುಚ್ಚಲ್ಪಡುತ್ತವೆ. ಮಧ್ಯಪ್ರದೇಶದ 40 ಕ್ಕೂ ಹೆಚ್ಚು ಎಪಿಎಂಸಿಗಳಲ್ಲಿ 0% ಉತ್ಪನ್ನಗಳ ಮಾರಾಟವಾಗಿದೆ. ಅಲ್ಲಿ ಎಪಿಎಂಸಿಗಳು ಮುಚ್ಚುವ ಹಂತದಲ್ಲಿವೆ. ಉತ್ತರ ಪ್ರದೇಶ, ಬಿಹಾರದಲ್ಲಿ ಎಪಿಎಂಸಿಗಳನ್ನು ಮುಚ್ಚಲಾಗಿದೆ” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್ನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ ಹತ್ತಕ್ಕೂ ಹೆಚ್ಚು ಸುತ್ತಿನ ಚರ್ಚೆಗಳು ನಡೆದಿವೆ, ಆದರೆ ಇಲ್ಲಿಯವರೆಗೂ ಸರ್ಕಾರದ ಯಾವುದೇ ಷರತ್ತುಗಳಿಗೂ ರೈತರು ಒಪ್ಪಿಲ್ಲ.
ಇದನ್ನೂ ಓದಿ: ಈ ಸಂಘಿ ಪಿತೂರಿಗೆ ನಾವು ಹೆದರುವುದಿಲ್ಲ: ದಾಳಿ ಕುರಿತು ರಾಕೇಶ್ ಟಿಕಾಯತ್ ಪ್ರತಿಕ್ರಿಯೆ
All Bogus.