ಮತ್ತೊಮ್ಮೆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿವಿಧ ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ, ಈಶಾನ್ಯ ರಾಜ್ಯಗಳಲ್ಲಿ ನೇರವಾಗಿ ಕಣಕ್ಕಿಳಿಯಲು ಹಿಂದೇಟು ಹಾಕಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೇಘಾಲಯದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ), ಮಣಿಪುರದ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಗೆ ಮತ್ತು ನಾಗಾಲ್ಯಾಂಡ್ನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷವಾದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್ಡಿಪಿಪಿ) ಯನ್ನು ಬೆಂಬಲಿಸಲು ಬಿಜೆಪಿ ನಿರ್ಧಿರಿಸಿದೆ.
ಈ ಕುರಿತು ಬಿಜೆಪಿಯ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬೀತ್ ಪಾತ್ರಾ ಅವರು ಎಕ್ಸ್ನಲ್ಲಿ ಘೋಷಣೆ ಮಾಡಿದ್ದಾರೆ. “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜಿ ಅವರ ಸೂಚನೆಯಂತೆ, ಮೇಘಾಲಯದ (ಶಿಲ್ಲಾಂಗ್ ಮತ್ತು ತುರಾ) ಎರಡೂ ಸ್ಥಾನಗಳಲ್ಲಿ ಎನ್ಪಿಪಿಯ ಲೋಕಸಭಾ ಅಭ್ಯರ್ಥಿಗಳಿಗೆ ಬಿಜೆಪಿ ತನ್ನ ಬೆಂಬಲವನ್ನು ನೀಡಲಿದೆ. ಹೊರ ಮಣಿಪುರ ಕ್ಷೇತ್ರದಲ್ಲಿ ಎನ್ಪಿಎಫ್ಗೆ ಮತ್ತು ನಾಗಾಲ್ಯಾಂಡ್ನಲ್ಲಿ ಎನ್ಡಿಪಿಪಿಯನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಘಾಲಯದ ಎರಡು ಕ್ಷೇತ್ರಗಳಲ್ಲಿ ಮತ್ತು ಮಣಿಪುರದ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದ ಬಿಜೆಪಿ ಸೋಲನುಭವಿಸಿತ್ತು. ಎನ್ಪಿಎಫ್ ಮತ್ತು ಎನ್ಡಿಪಿಪಿಗೆ ಬಿಜೆಪಿ ಬೆಂಬಲ ನೀಡಿದ ಸ್ಥಾನಗಳನ್ನು 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಗೆದ್ದಿತ್ತು. ಮೇಘಾಲಯದ ಎರಡು ಸ್ಥಾನಗಳಲ್ಲಿ ಒಂದನ್ನು ಎನ್ಪಿಪಿ ಗೆದ್ದಿತ್ತು.
ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷ ಮತ್ತು ಅದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂದಿಸಿದ ರೀತಿ ಈ ಬಾರಿಯ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ, ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದೆ ಎಂದು ಹೇಳಲಾಗುತ್ತಿದೆ.
ಬಲಿಷ್ಠ ಪಕ್ಷಕ್ಕೆ ಜನಾಕ್ರೋಶದ ಭಯ?
ಆದಿವಾಸಿಗಳು, ಅಲ್ಪ ಸಂಖ್ಯಾತರು ಹೆಚ್ಚಿರುವ ಈಶಾನ್ಯ ರಾಜ್ಯಗಳ ರಾಜಕೀಯವೇ ಬೇರೆ. ಅಲ್ಲಿ ಬಿಜೆಪಿ ದೇಶದ ಇತರ ಭಾಗಗಳಲ್ಲಿ ಪ್ರಯೋಗಿಸಿದಂತೆ ಹಿಂದುತ್ವದ ಭಾವನಾತ್ಮಕ ಅಜೆಂಡಾ ಪ್ರಯೋಗಿಸಲು ಸಾಧ್ಯವಿಲ್ಲ. ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಸಂಘರ್ಷ ನಡೆಯುತ್ತಿದ್ದರೂ, ಒಂದೇ ಒಂದು ಬಾರಿ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಲ್ಲಿನ ಜನರಿಗೆ ಆಕ್ರೋಶ ಇರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ, ತನ್ನನ್ನು ತಾನು ಬಲಿಷ್ಠ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಈಶಾನ್ಯ ರಾಜ್ಯಗಳ ಜನರ ಆಕ್ರೋಶದ ಭಯವಿದೆ. ಹಾಗಾಗಿ, ನೇರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿ ಸುಮ್ಮನಾಗಿವೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ : ‘ನಿಮಗೆ ದೈತ್ಯ ಗಾತ್ರದ ವಾಷಿಂಗ್ ಮೆಷಿನ್ ಅಗತ್ಯವಿದೆ..’; ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆಗೆ ಜೈರಾಮ್ ಲೇವಡಿ